ಕಾರವಾರ: ಒಂದು ಕಡೆ ಹೆಚ್ಚಿನ ಜನ ಸೇರದಂತೆ ಆದೇಶ; ರಾಜ್ಯದಲ್ಲಿ 31ರ ತನಕ ಬಂದ್ ವಿಸ್ತರಣೆ
ಕಾರವಾರ: ಮಹತ್ವದ ಬೆಳವಣಿಗೆಯಲ್ಲಿ ರಾಜ್ಯ ಸರ್ಕಾರ ಮಾರ್ಚ್ 14ರ ಆದೇಶವನ್ನು ಮಾರ್ಚ್ 31ರ ತನಕ ವಿಸ್ತರಣೆ ಮಾಡಲು ತೀರ್ಮಾನ ಕೈಗೊಂಡಿದೆ. ಕೊರೋನಾ ಹರಡದಂತೆ ತಡೆಯಲು ಜನರು ನೀಡುತ್ತಿರುವ ಸಹಕಾರಕ್ಕೆ ಸರ್ಕಾರ ಕೃತಜ್ಞತೆ ಸಲ್ಲಿಸಿದೆ.
ಬುಧವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಡೆಯಿತು. ಸಭೆಯಲ್ಲಿ ಕೊರೋನಾ ತಡೆಗಟ್ಟಲು ಕೈಗೊಂಡ ಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ನಡೆಸಲಾಯಿತು. ಮುಂದಿನ ಕ್ರಮಗಳ ಬಗ್ಗೆ ರೂಪುರೇಷೆ ತಯಾರು ಮಾಡಲಾಯಿತು.
ಸರ್ಕಾರ ಮಾರ್ಚ್ 14ರಿಂದ 21ರ ತನಕ ರಾಜ್ಯದಲ್ಲಿ ಚಿತ್ರಮಂದಿರ, ಪಬ್, ಮಾಲ್ ಬಂದ್ ಮಾಡುವಂತೆ ಆದೇಶ ನೀಡಿತ್ತು. ಕ್ರೀಡಾ ಚಟುವಟಿಕೆ, ಸೆಮಿನಾರ್, ವಿವಾಹ ಕಾರ್ಯಕ್ರಮ ನಡೆಸದಂತೆ ಸೂಚಿಸಲಾಗಿತ್ತು. ಸಚಿವ ಸಂಪುಟ ಸಭೆಯಲ್ಲಿ ಇದನ್ನು ಮಾರ್ಚ್ 31ರ ತನಕ ವಿಸ್ತರಣೆ ಮಾಡಲು ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ಬಳಿಕ ವಿಧಾನಸಭೆಯಲ್ಲಿ ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿಕೆ ನೀಡಿದರು.
ಪಬ್, ಮಾಲ್ಗಳು ಬಂದ್: ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪಬ್, ನೈಟ್ ಕ್ಲಬ್, ಮಾಲ್ಗಳು ಮಾರ್ಚ್ 31ರ ತನಕ ಬಾಗಿಲು ಮುಚ್ಚಿರಲಿವೆ. ಒಂದು ಕಡೆ ಹೆಚ್ಚಿನ ಜನಸಂದಣಿ ಸೇರುವುದನ್ನು ತಡೆಯಲು ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ. ಸರ್ಕಾರದ ಆದೇಶದಂತೆ ಚಿತ್ರಮಂದಿರಗಳು ಕೂಡ ಈ ಅವಧಿಯಲ್ಲಿ ಬಂದ್ ಆಗಿರಲಿವೆ. ಮದುವೆ, ಸಮಾವೇಶ, ನಿಶ್ಚಿತಾರ್ಥ, ಸಂತೆ, ಜಾತ್ರೆ ಮುಂತಾದ ಕಾರ್ಯಕ್ರಮಗಳನ್ನು ಕೂಡ 31ರವರೆಗೆ ನಡೆಸುವಂತಿಲ್ಲ.
ಬೇಸಿಗೆ ಶಿಬಿರ, ವಸ್ತು ಪ್ರದರ್ಶನಗಳಿಲ್ಲ: ಇದು ಬೇಸಿಗೆ ಕಾಲ, ಶಾಲಾ ಮಕ್ಕಳಿಗೆ ರಜೆ ಇದೆ ಎಂದು ಬೇಸಿಗೆ ಶಿಬಿರಗಳನ್ನು ಆಯೋಜನೆ ಮಾಡುವಂತಿಲ್ಲ. ಯಾವುದೇ ವಸ್ತು ಪ್ರದರ್ಶನ, ಕೃಷಿ ಮೇಳ ಮುಂತಾದವುಗಳನ್ನು ನಡೆಸುವಂತಿಲ್ಲ. ಸಂಗೀತಗೋಷ್ಠಿಗಳು, ಕ್ರೀಡಾ ಚಟುವಟಿಕೆಗಳನ್ನು ಆಯೋಜನೆ ಮಾಡುವಂತಿಲ್ಲ.