ಹುಬ್ಬಳ್ಳಿ : ಕೋವಿಡ್ ಸಾಕ್ರಾಮಿಕ ರೋಗ ವೈಯಕ್ತಿಕವಾಗಿ ನಮಗೆ ಅಷ್ಟೇ ಅಲ್ಲದೇ ನಮ್ಮ ಜೊತೆ ಇರುವವರಿಗೂ ಮಾರಕ ಎಂದು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ನಾಗರಾಜಪ್ಪ.ಎ.ಕೆ ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಆರೋಗ್ಯ ಮತ್ತು ವಾರ್ತಾ ಇಲಾಖೆ ಸಹೋಗದಲ್ಲಿ, ಗೋಪನಕೊಪ್ಪ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾದ, ಕೋವಿಡ್ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಾರ್ವಜನಿಕರಲ್ಲಿ ಕೊರೊನಾ ಬಗ್ಗೆ ಅರಿವು ಕಡಿಮೆಯಾಗಿದೆ. ಜನರು ಸಾಮಾಜಿಕ ಅಂತರವನ್ನು ಮರೆತು ವ್ಯವಹರಿಸುತ್ತಿದ್ದಾರೆ. ಇವರಲ್ಲಿ ಹೆಚ್ಚಿನ ಪರಿಣಾಮ ಉಂಟುಮಾಡುವ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕಾಗಿದೆ. ಕೋವಿಡ್ ಕುರಿತು ಬೇಜವಬ್ದಾರಿ ಪ್ರದರ್ಶಿಸಿ ಇನ್ನೊಬ್ಬರ ಜೀವನಕ್ಕೆ ಎರವಾಗಬಾರದು. ಇದು ದೊಡ್ಡ ತಪ್ಪಾಗಿದೆ. ಆಶಾ ಕಾರ್ಯಕರ್ತೆಯರು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ. ಮಾಸ್ಕ್ ಧರಿಸುವುದು. ಸ್ಯಾನಿಟೈಜರ್ ಉಪಯೋಗ, ಸಾಮಾಜಿಕ ಅಂತರದ ಬಗ್ಗೆ ತಿಳಿ ಹೇಳುವ ಜೊತೆಗೆ, ಆರೋಗ್ಯ ಸಂಬಂದಿ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಎಲ್ಲರೂ ಎಚ್ಚರಿಕೆ ವಹಿಸಿ ಕೊರೊನಾವನ್ನು ಹೊಡೆದೊಡಿಸಬೇಕಿದೆ ಎಂದರು.
ವೈದ್ಯಾಧಿಕಾರಿ ಫಾರೂಕ್ ಉಪ್ಪಿನ ಮಾತನಾಡಿ ಕೊರೊನಾ ಎರಡನೇ ಅಲೆ ಶುರುವಾಗುವ ಲಕ್ಷಣಗಳಿವೆ. ಕೊರೋನಾ ವೈರಾಣು ರೂಪಾಂತರ ಹೊಂದಿ, ಮೊದಲು ಕೋವಿಡ್ ಕಾಣಿಸಿಕೊಂಡವರಲ್ಲೇ ಮತ್ತೆ ಕಾಣಿಸಿಕೊಳ್ಳಬಹುದು. 30 ವರ್ಷದೊಳಗಿನ ಯುವ ಜನತೆ ಕೋವಿಡ್ ಬಗ್ಗೆ ಬೇಜವಬ್ದಾರಿ ನಡೆದುಕೊಳ್ಳುತ್ತಾರೆ. ಇವರು ಲಕ್ಷಣ ರಹಿತ ಸೊಂಕಿತರಾಗಿರುವ ಸಾಧ್ಯತೆ ಹೆಚ್ಚು. ಇವರಿಂದ ವಯಸ್ಸಾದವರು ಮಕ್ಕಳ ತೊಂದರೆಗೆ ಈಡಾಗುತ್ತಾರೆ. ವೈದ್ಯಕೀಯ ಸಿಬ್ಬಂದಿ ಮೊದಲಿಗಿಂತ ಹೆಚ್ಚು ಮುತುವರ್ಜಿಯಿಂದ ಕೆಲಸ ನಿರ್ವಹಿಸಬೇಕು ಎಂದರು.
ನ್ಯಾಯಧೀಶರು ಮಾಸ್ಕ್ ಧರಿಸದೆ ಓಡಾಡುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮಾಸ್ಕ್ ಧರಿಸುವಂತೆ ತಿಳಿ ಹೇಳಿದರು. ಕಾರ್ಯಕ್ರಮದಲ್ಲಿ ವಕೀಲರ ಸಂಘದ ಮಹೇಶ್ ಹಿರೇಮಠ ಸೇರಿದಂತೆ ನರ್ಸ್ ಹಾಗೂ ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.