ಕಾರವಾರ: ಜೂ 22-23ರಂದು ವಿಜ್ಞಾನ ಮತ್ತು ಗಣಿತ ಶಿಕ್ಷಕರಿಗಾಗಿ ಎರಡು ದಿನಗಳ ತರಬೇತಿ ಕಾರ್ಯಾಗಾರ
ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರವಿದ್ಯಾ ಮಂಡಳಿ, ಬೆಂಗಳೂರು, ಇವರ ನಿರ್ದೇಶನದಂತೆ ಉತ್ತರ ಕನ್ನಡ ಜಿಲ್ಲಾ ವಿಜ್ಞಾನ ಕೇಂದ್ರವು ದಿನಾಂಕ 22 ಮತ್ತು 23ನೇ ಜೂನ್ 2017 ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗಾಗಿ ವಿಶೇಷ ತರಬೇತಿ ಕಾರ್ಯಾಗಾರವನ್ನು ಶಿವಾಜಿ ಶಿಕ್ಷಣ ಮಹಾವಿದ್ಯಾಲಯ ಬಾಡ, ಕಾರವಾರದಲ್ಲಿ ಹಮ್ಮಿಕೊಂಡಿದೆ.
ರಾಜ್ಯದಾದ್ಯಂತ ವ್ಯಾಪಕವಾಗಿ ಚರ್ಚಿಸಲ್ಪಟುತ್ತಿರುವ ನವೀಕೃತ 9ನೇ ತರಗತಿಯ ಪಠ್ಯಕ್ರಮದ ಸಮಸ್ಯೆಗಳನ್ನು ಚರ್ಚಿಸಿ ಅದರಲ್ಲಿ ಕಂಡುಬರುವ ತಪ್ಪುಗಳನ್ನು ಸರಿಪಡಿಸುವದು ಈ ತರಬೇತಿಯ ಉದ್ದೇಶವಾಗಿದೆ. ಈಗಾಗಲೇ ಜಿಲ್ಲೆಯಿಂದ ರಾಜ್ಯಮಟ್ಟದಲ್ಲಿ ತರಬೇತಿ ಪಡೆದಿರುವ ಶಿಕ್ಷಕರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಶಿಕ್ಷಕರಿಗೆ ಮಾಹಿತಿ ನೀಡಲಿದ್ದಾರೆ.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ದಿನಾಂಕ 22.06.2017 ರಂದು ಬೆಳಿಗ್ಗೆ 10ಗಂಟೆಗೆ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಶ್ರೀ. ಪಿ.ಕೆ.ಪ್ರಕಾಶ ಇವರು ನೆರವೇರಿಸಿ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರಿಸರ ಅಧಿಕಾರಿಗಳು, ಶಿವಾಜಿ ಮಹಾವಿದ್ಯಾಲಯದ ಪ್ರಾಂಶುಪಾಲರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಲಿದ್ದಾರೆ. ಇದಲ್ಲದೇ ವಿಕಲಾಂಗ ಚೇತನರಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಇರುವ ಸೌಲಭ್ಯಗಳ ಕುರಿತು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶ್ರೀ. ಗಂಗಪ್ಪ ಮಾಹಿತಿ ನೀಡಲಿದ್ದಾರೆ. ನಿಯೋಜಿತ ಎಲ್ಲಾ ಶಿಕ್ಷಕರು ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಹಾಜರಿದ್ದು ಈ ಕಾರ್ಯಾಗಾರದ ಲಾಭ ಪಡೆಯಬೇಕಾಗಿ ಸಂಘಟಕರ ಪರವಾಗಿ ಡಾ. ವಿ.ಎನ್.ನಾಯಕ ರವರು ಕೋರಿದ್ದಾರೆ.