ಬೆಂಗಳೂರು: ಲಾಕ್ ಡೌನ್ ನಿಂದಾಗಿ ಜನ ಸಾಮಾನ್ಯರ ಜೀವನ ಸ್ತಬ್ಧಗೊಂಡಿತ್ತು. ಸದ್ಯಕ್ಕೆ ಹಂತ ಹಂತವಾಗಿ ಜನಜೀವನ ಸಹಜ ಸ್ಥಿತಿಗೆ ಬರುತ್ತಾ ಇದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗವು ವಿದ್ಯುತ್ ದರ ಏರಿಕೆ ಮಾಡಿರುವುದು, ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾದ ಅಬ್ದುಲ್ ಹನ್ನಾನ್ ಬಣ್ಣಿಸಿದ್ದಾರೆ.
ಕೋವಿಡ್-19 ಕಾರಣದಿಂದಾಗಿ ಉದ್ಬವಿಸಿರುವ ಅಸಮಾನ್ಯವಾದ ಈ ಪರಿಸ್ಥಿತಿಯಲ್ಲಿ ಈ ಸಮಸ್ಯೆಯನ್ನು ಸಹಾನುಭೂತಿ ನೆಲೆಯಿಂದಲೇ ಸರ್ಕಾರ ನೋಡ ಬೇಕಾಗಿದೆ. ಉದ್ಯಮ ವಲಯ ಅನುಭವಿಸಿದ ಆರ್ಥಿಕ ಸಂಕಷ್ಟದಿಂದಾಗಿ ಕಾರ್ಮಿಕರ ಮೇಲೆ ತೀವ್ರ ಸ್ವರೂಪದ ಪರಿಣಾಮ ಬಿದ್ದಿದೆ. ಒಂದು ಕಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಇನ್ನೊಂದು ಕಡೆ ಉದ್ಯೋಗದ ಅಥವಾ ವ್ಯವಹಾರದ ಸಮಸ್ಯೆ ಹೀಗೆ ಅಡ್ಡ ಕತ್ತರಿಯಲ್ಲಿ ಜನ ಜೇವನ ಸಿಲುಕಿ ಕೊಂಡಿರುವ ಈ ಸಮಯದಲ್ಲಿ ನಿತ್ಯ ಬಳಕೆಯ ವಿದ್ಯುತ್ ದರವನ್ನು ಏರಿಸಿರುವುದು ಸಮಂಜಸವಲ್ಲ ಎಂದು ಹನ್ನಾನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯಲ್ಲಿನ ಖರ್ಚು-ವೆಚ್ಚದ ಹೊರೆಯನ್ನು ಸಂಪೂರ್ಣವಾಗಿ ಗ್ರಾಹಕರ ಮೇಲೆ ಹೇರುವುದು ಸರ್ಕಾರ ನಿಲ್ಲಿಸ ಬೇಕು. ವಿದ್ಯುತ್ ಸರಬರಾಜು ಕಂಪನಿಗಳ ನಷ್ಟ ಕೇವಲ ವಿದ್ಯುತ್ ಉತ್ಪಾದನ ವೆಚ್ಚದಿಂದ ಆಗುತ್ತಿಲ್ಲ. ವಿದ್ಯುತ್ ಸೋರಿಕೆ, ದುರ್ಬಳಕೆ, ಆಡಳಿತ ಮಂಡಳಿಯ ಭ್ರಷ್ಟಾಚಾರ ಇತ್ಯಾದಿ ಕಾರಣಗಳಿಂದಾಗಿ ಉಂಟಾಗಿರುವ ನಷ್ಟ ಭರಿಸಲು ದರ ಏರಿಕೆ ಮಾಡಿ ಗ್ರಾಹಕರ ಮೇಲೆ ಹೊರೆ ಹಾಕುವುದು ಎಷ್ಟು ಸರಿ ಎಂದು ಹನ್ನಾನ್ ರವರು ಪ್ರಶ್ನಿಸಿದಲ್ಲದೇ, ಸರ್ಕಾರ ಯಾವ ಕಾರಣಕ್ಕೂ ಸದ್ಯದ ಮಟ್ಟಿಗೆ ವಿದ್ಯುತ್ ದರ ಏರಿಕೆ ಮಾಡ ಬಾರದು ಎಂದು ಆಗ್ರಹಿಸಿದ್ದಾರೆ.