ಉಡುಪಿ: ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಜಾಮೀಯ ಮದರಸ ಬಳಿಯ ನಿವಾಸಿ ಬಿ.ಎಚ್. ಅಬ್ದುಲ್ಲಾ(26) ಮೇಲಿನ ಪೊಲೀಸ್ ದೌರ್ಜನ್ಯ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಿ, ಆರೋಪಿ ಪೊಲೀಸ್ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಉಡುಪಿಯ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಶನಿವಾರ ದೂರು ಸಲ್ಲಿಸಿದೆ.
ಅಬ್ದುಲ್ಲಾ ತನ್ನ ಕುಟುಂಬ ನಿರ್ವಹಣೆಗಾಗಿ ಜು.18ರಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಗುಲ್ವಾಡಿ ನದಿಯ ಮೀನುಗಾರಿಕೆ ನಡೆಸಲು ದೋಣಿಯಲ್ಲಿ ತೆರಳಿದ್ದರು. ಈ ವೇಳೆ ಅಬ್ದುಲ್ಲಾರನ್ನು ತಡೆದು ಪ್ರಶ್ನಿಸಿದ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ, ಅಬ್ದುಲ್ಲಾರಿಗೆ ಲಾಠಿ ಮತ್ತು ಕಬ್ಬಿಣದ ರಾಡ್ನಿಂದ ಹೊಡೆದಿದ್ದಾರೆ ಎಂದು ದೂರಿನಲ್ಲಿ ಸಂಸ್ಥೆಯ ಜಿಲ್ಲಾಧ್ಯಕ್ಷ ಹುಸೇನ್ ಕೊಡಿಬೇಂಗ್ರೆ ಆರೋಪಿಸಿದ್ದಾರೆ.
ಹಲ್ಲೆಯಿಂದ ಅಬ್ದುಲ್ಲಾ ಅವರ ಕಾಲು ಹಾಗೂ ಕೈ ಮೂಳೆಗೆ ತೀವ್ರ ಗಾಯಗಳಾಗಿದೆ. ಈ ಬಗ್ಗೆ ಯಾರಲ್ಲಾದರೂ ದೂರಿದರೆ, ನ್ಯಾಯಾಲಯವನ್ನು ಸಂಪರ್ಕಿಸಿದರೆ ಭೀಕರ ಪರಿಣಾಮವನ್ನು ಎದುರಿಸಬೇಕಾದೀತು ಎಂದು ಉಪನಿರೀಕ್ಷಕರು ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸಬೇಕು ಎಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಈ ಸಂಬಂಧ ರಾಜ್ಯ ಸರಕಾರದ ಗೃಹ ಕಾರ್ಯದರ್ಶಿಗೆ, ಡಿಜಿಪಿ, ಐಜಿಪಿ, ಹೈಕೋರ್ಟ್ ನ್ಯಾಯಾಮೂರ್ತಿ, ಅಲ್ಪಸಂಖ್ಯಾತರ ಆಯೋಗ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೂ ಹುಸೇನ್ ಕೋಡಿಬೇಂಗ್ರೆ ದೂರು ನೀಡಿದ್ದಾರೆ