ಕನಕದಾಸರು ಕನ್ನಡನಾಡಿನ ಮಹಾನ್ ಆಸ್ತಿ: ಜಿಲ್ಲಾಧಿಕಾರಿ

Source: SO News | By Laxmi Tanaya | Published on 3rd December 2020, 7:36 PM | State News | Don't Miss |

ಮಂಡ್ಯ : ಕನಕದಾಸರು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ, ಕನ್ನಡನಾಡಿನ ಮಹಾನ್ ಆಸ್ತಿ, ಭಾರತ ದೇಶದ ಒಂದು ರತ್ನ ಅವರು ಎಂದು ಮಂಡ್ಯ ಜಿಲ್ಲಾಧಿಕಾರಿಗಳಾದ ಡಾ. ಎಂ ವಿ ವೆಂಕಟೇಶ್‍ರವರು ಹೇಳಿದರು.

  ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸಂತ ಶ್ರೇಷ್ಠ ಭಕ್ತ ಕನಕದಾಸರ 533 ನೇ ಜಯಂತೋತ್ಸವದಲ್ಲಿ ಮಾತನಾಡಿದ ಅವರು, ಕನಕದಾಸರು ಮಹಾನ್ ಕವಿಗಳು, ಅವರು ಒಬ್ಬ ಸಾಮಾಜಿಕ ವಿಜ್ಞಾನಿ, ಜಾನಪದ ವಿದ್ವಾಂಸರು, ಬಂಡಾಯದ ಕವಿ. 15ನೇ ಶತಮಾನದಲ್ಲಿದ್ದಂತಹ ಸಾಮಾಜಿಕ ತಲ್ಲಣಗಳನ್ನು, ಭೇದಭಾವಗಳನ್ನು, ಅಸಮಾನತೆಯನ್ನು ತೋರಿಸಿ ತಮ್ಮ ಕಾವ್ಯಗಳ ಮುಖಾಂತರ ಭಕ್ತಿ ಪರಂಪರೆಯನ್ನು ಸೃಷ್ಟಿಸಿ ಸಮ ಸಮಾಜವನ್ನು ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಮಹಾಕಾವ್ಯಗಳನ್ನು ರಚನೆ ಮಾಡಿದ್ದಾರೆ ಎಂದರು.

    12ನೇ ಶತಮಾನದಲ್ಲಿನ ವಚನಸಾಹಿತ್ಯದ ಕವಿಗಳಾದ ಬಸವಣ್ಣ ಅಲ್ಲಮ, ಅಕ್ಕಮಹಾದೇವಿಯವರು ಅನುಭವ ಮಂಟಪದಲ್ಲಿ ಕುಳಿತುಕೊಂಡು ಸಮ ಸಮಾಜವನ್ನು ನಿರ್ಮಾಣ ಮಾಡಲು ಹೊರಟರೆ, 15-16 ನೇ ಶತಮಾನದಲ್ಲಿ ದಾಸಶ್ರೇಷ್ಠರು ಆದಂತಹ ಕನಕದಾಸರು ಮತ್ತು ಪುರಂದರದಾಸರು ಪ್ರತಿಯೊಂದು ಮನೆಗಳನ್ನು ಕೂಡ ಅನುಭವ ಮಂಟಪಗಳನ್ನಾಗಿ ಮಾಡಿಕೊಂಡು, ಸಾಂಸಾರಿಕ ಜೀವನವನ್ನು ನಡೆಸುತ್ತಾ ಬದುಕಿನಲ್ಲಿ ಶ್ರೇಷ್ಠತೆಯನ್ನು ಹೇಗೆ ಕಂಡುಕೊಳ್ಳಬಹುದು ಮತ್ತು ಉತ್ತಮ ಬದುಕನ್ನು ಹೇಗೆ ಕಟ್ಟಿಕೊಳ್ಳಬಹುದು ಮತ್ತು ಪರಮಾತ್ಮನಲ್ಲಿ ಐಕ್ಯತೆ ಆಗುವುದರ ಮುಖಾಂತರ ನಾವು ಜೀವನದ ಸಾಕ್ಷಾತ್ಕಾರವನ್ನು ಹೇಗೆ ತೋರಿಸಿ ಕೊಳ್ಳಬಹುದೆಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.

    ಅವರು ರಚಿಸಿದಂತಹ ಕೀರ್ತನೆಗಳಲ್ಲಾಗಿರಬಹುದು, ಅವರು ರಚಿಸಿದಂತಹ ಮೋಹನತರಂಗಿಣಿ, ರಾಮಧಾನ್ಯ ಚರಿತ್ರೆ, ನಳಚರಿತ್ರೆಗಳಲ್ಲಿ ಜ್ಞಾನವಿದೆ, ಸುಜ್ಞಾನ ವಿದೆ, ಭಕ್ತಿ ಇದೆ, ವಿಚಾರ ಧಾರೆ ಇದೆ, ಸುಖ ಸಂಸಾರಕ್ಕೆ ಉತ್ತಮವಾದಂತಹ ಸಂದೇಶವಿದೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ಒಳಗೊಂಡಂತಹ ಸಂದೇಶವಿದೆ ಮತ್ತು ಸಮಾಜದಲ್ಲಿ ಇರುವಂತಹ ತಲ್ಲಣಗಳಿಗೆ ಪರಿಹಾರವಿದೆ ಎಂದರು.

    ಇಂದಿನ 21ನೇ ಶತಮಾನದಲ್ಲಿಯೂ ಕೂಡ ನಾವು ಅಸಮಾನತೆಯನ್ನು ನೋಡುತ್ತಿದ್ದೇವೆ, ಸಮಸ್ಯೆಗಳನ್ನು ನೋಡುತ್ತಿದ್ದೇವೆ ,ಅಸ್ಪೃಶ್ಯತೆಯನ್ನು ನೋಡುತ್ತಿದ್ದೇವೆ, ಮಹಿಳೆಯರ ಮೇಲೆ ಮತ್ತು ಮಕ್ಕಳ ಮೇಲೆ ದೌರ್ಜನ್ಯವನ್ನು ನೋಡುತ್ತಿದ್ದೇವೆ, ಅವರ ಎಲ್ಲ ಕಾವ್ಯಗಳನ್ನು ಯಾವ ವಿದ್ಯಾರ್ಥಿಗಳು ಸಮಾಜ  ಅರ್ಥೈಸಿಕೊಳ್ಳುತ್ತ್ತೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರಗಳನ್ನು ನಾವು ಕಂಡುಕೊಳ್ಳಬಹುದು ಎಂದರು.

   ರಾಮಧಾನ್ಯ ಚರಿತ್ರೆಯಂತಹ   ಒಂದು ಮಹಾಕಾವ್ಯ ಭಾರತ ದೇಶದಲ್ಲಿಯೇ ಇಲ್ಲವೆಂದು ಹೇಳಬಹುದು.  ರಾಗಿ ಮತ್ತು ಭತ್ತಗಳ ನಡುವೆ ಸಂವಾದವನ್ನು ಏರ್ಪಡಿಸಿದಂತಹ ಕನಕದಾಸರು, ಪುರುಷೋತ್ತಮನಾದ ಶ್ರೀರಾಮನ ಮುಖಾಂತರ ರಾಗಿ ಮತ್ತು ಭತ್ತಗಳಲ್ಲಿ ಯಾವುದು ಶ್ರೇಷ್ಠ ಎಂಬ ವಾಗ್ವಾದ ನಡೆದಾಗ ರಾಗಿಯೇ  ಶ್ರೇಷ್ಠ ಎಂಬುದರ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದರು.

  ಕನಕದಾಸರು ಶೋಷಿತರ ಪರವಾಗಿ, ಹಿಂದುಳಿದವರ ಪರವಾಗಿ, ಮಹಿಳೆಯರ ಪರವಾಗಿದ್ದು ಸಮ ಸಮಾಜಕ್ಕೆ ಶ್ರೀರಾಮನಂತಹ ಆದರ್ಶ ಪುರುಷನಿಂದಲೇ ಆ ವ್ಯಕ್ತಿತ್ವವನ್ನು ರೂಪಿಸಲು ಪ್ರಯತ್ನ ಪಡುತ್ತಾರೆ. ಇಡೀ ಭಾರತ ದೇಶದಲ್ಲಿ ರೂಪಕಗಳ ಮುಖಾಂತರ ರಚಿಸಿದಂತಹ ಮಹಾಕಾವ್ಯಗಳಲ್ಲಿ ಇದು ಮೊದಲನೇ ಸ್ಥಾನದಲ್ಲಿದೆ. ಇದೇ ರೀತಿ ಒಂದು ಆದರ್ಶ ದಾಂಪತ್ಯ ಹೇಗಿರಬೇಕೆಂಬುದರ ಬಗ್ಗೆ ನಳಚರಿತ್ರೆಯಲ್ಲಿಯೂ ಕೂಡ ತೋರಿಸಿಕೊಟ್ಟಿದ್ದಾರೆ. ಅದರ ಜೊತೆಗೆ ಸಮಸ್ಯೆಗಳಿಗೆ ‘ಅಹಂ’ ಕಾರಣ ಎಂಬುದನ್ನು ನಾವು ತಿಳಿದುಕೊಂಡಿದ್ದೇವೆ. ಮನೋವಿಜ್ಞಾನಿಗಳು, ಸಾಮಾಜಿಕ ವಿಜ್ಞಾನಿಗಳು ಹೇಳುತ್ತಾರೆ. ನಾನು ಎಂಬುದು ಮೊದಲಿಗೆ ಬರಬಾರದು ನಾನು ಎಂಬುದು ಹೋದರೆ ಉತ್ತಮ ಸಾಧನೆಯನ್ನು ಮಾಡುವುದಕ್ಕೆ ಸಾಧ್ಯವಾಗುತ್ತೆ, ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದಕ್ಕೆ ಸಾಧ್ಯವಾಗುತ್ತೆ. ಸಾಕ್ಷಾತ್ಕಾರ ಪಡೆಯುವುದಕ್ಕೆ ಕೂಡ ಕಾರಣವಾಗುತ್ತದೆ.  ನಾನು ಹೋದರೆ ಹೋದೇನು ಎಂಬುದರ ಮುಖಾಂತರ ಅಹಂನ ಬಗ್ಗೆ ಮೊದಲೇ ತಿಳಿಸಿಕೊಟ್ಟಿದ್ದಾರೆ ಎಂದರು.

  ವ್ಯಾಸರಾಯರ ಶಿಷ್ಯರಾದ  ಕನಕದಾಸರು ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಬಹುಶಃ ಇಂದಿನ ಯುವಪೀಳಿಗೆ ಅವರು ರಚಿಸಿದಂತಹ ಮಹಾಕಾವ್ಯಗಳನ್ನು ಅಧ್ಯಯನ ಮಾಡಿದರೆ, ಅಂತಹ ವಿಚಾರಗಳನ್ನು ತಿಳಿದುಕೊಂಡರೆ ಉತ್ತಮ ಸಮಾಜವನ್ನು ಕಟ್ಟಲಿಕ್ಕೆ ಸಾಧ್ಯವಿದೆ, ಪ್ರಜಾಪ್ರಭುತ್ವದ ಸತ್ಯಾತ್ಮಕ ಮೌಲ್ಯಗಳನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ ಎಂದರು. 
  ಜಯಂತೋತ್ಸವ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಶೈಲಜಾರವರು, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಉದಯಕುಮಾರ್ ರವರು, ಸಮುದಾಯದ ಮುಖಂಡರುಗಳು, ಸಂಘ ಸಂಸ್ಥೆಯ ಪದಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...