ಕಾಶ್ಮೀರ ಹಿಮಪಾತಕ್ಕೆ ಹಾಸನ ಜಿಲ್ಲೆ ಯೋಧ ಸೇರಿದಂತೆ ೨೦ ಬಲಿ
ಶ್ರೀನಗರ: ಜಮ್ಮು -ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಶುಕ್ರವಾರವೂ ಹಲವಾರು ಹಿಮಪಾತದ ಘಟನೆಗಳಿಗೆ ಸಾಕ್ಷಿಯಾಯಿತು. ತನ್ಮಧ್ಯೆ ಗುರೇಜ್ ವಿಭಾಗದಲ್ಲಿ ನಿಯಂತ್ರಣ ರೇಖೆಯ ಬಳಿ ಬುಧವಾರ ಸಂಜೆ ಸಂಭವಿಸಿದ್ದ ಹಿಮಪಾತದ ಅವಶೇಷಗಳಡಿ ಇಂದು ಇನ್ನೂ ನಾಲ್ಕು ಯೋಧರ ಶವಗಳು ಪತ್ತೆಯಾಗುವುದರೊಂದಿಗೆ ಜಮ್ಮು-ಕಾಶ್ಮೀರದಲ್ಲಿ ಸರಣಿ ಹಿಮಪಾತಗಳಿಗೆ ಬಲಿಯಾದವರ ಸಂಖ್ಯೆ 20ನ್ನು ದಾಟಿದೆ. ಕರ್ನಾಟಕದ ಹಾಸನ ಜಿಲ್ಲೆಯ ದೇವಿಹಳ್ಳಿ ಗ್ರಾಮದ ನಿವಾಸಿ ಸಂದೀಪ ಕುಮಾರ್ ಶೆಟ್ಟಿ(28)ಅವರು ಹುತಾತ್ಮ ಯೋಧರಲ್ಲಿ ಸೇರಿದ್ದಾರೆ. ಅವರು ಕಳೆದ ಎಂಟು ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಬನಿಹಾಲ್ನಲ್ಲಿ ಶುಕ್ರವಾರ ಹೊಸದಾಗಿ ಸಂಭವಿಸಿದ ಹಿಮಪಾತದಿಂದಾಗಿ ಸತತ ಮೂರನೇ ದಿನವೂ ವಾಹನಗಳ ಸಂಚಾರ ಸ್ಥಗಿತಗೊಂಡಿರುವ ರಾಷ್ಟ್ರೀಯ ಹೆದ್ದಾರಿ ಯಲ್ಲಿನ ಹಿಮದ ರಾಶಿಯನ್ನು ತೆರವುಗೊಳಿಸುತ್ತಿರುವ ಗಡಿ ರಸ್ತೆಗಳ ಸಂಸ್ಥೆ(ಬಿಆರ್ಒ) ಯ ಕಾರ್ಯಾಚರಣೆಗೆೆ ಅಡ್ಡಿಯುಂಟಾಗಿದೆ.
ಗುರೇಜ್ನಲ್ಲಿ ಸೇನಾ ಶಿಬಿರದ ಮೇಲೆ ಹಿಮಪಾತವುಂಟಾಗಿದ್ದ ಸ್ಥಳದಲ್ಲಿ ಇಂದು ರಕ್ಷಣಾ ತಂಡಗಳು ಇನ್ನೂ ನಾಲ್ವರ ಶವಗಳನ್ನು ಅವಶೇಷಗಳಡಿಯಿಂದ ಹೊರಕ್ಕೆ ತೆಗೆದಿದ್ದು, ಈ ಘಟನೆಯಲ್ಲಿ ಬಲಿಯಾದ ಯೋಧರ ಸಂಖ್ಯೆ 14ಕ್ಕೇರಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ಗುರೇಜ್ ವಿಭಾಗದಲ್ಲಿ ಬುಧವಾರ ಎರಡು ಹಿಮಪಾತಗಳಿಗೆ ಯೋಧರು ತುತ್ತಾಗಿದ್ದು ಅವಶೇಷಗಳಡಿ ಸಿಲುಕಿದ್ದ ಏಳು ಯೋಧರನ್ನು ಅದೇ ದಿನ ರಕ್ಷಿಲಾಗಿತ್ತು. ಗುರುವಾರ 10 ಯೋಧರ ಶವಗಳು ಪತ್ತೆಯಾಗಿದ್ದವು.
ತನ್ಮಧ್ಯೆ ಬಾರಾಮುಲ್ಲಾ ಜಿಲ್ಲೆಯ ಉಡಿ ವಿಭಾಗದಲ್ಲಿ ನಿನ್ನೆ ಸಂಜೆ ಸಂಭವಿಸಿದ ಹಿಮಪಾತದಲ್ಲಿ ಫತ್ಹೇ ಮುಹಮ್ಮದ್ ಮುಘಲ್(60) ಎನ್ನುವವರು ಸಾವನ್ನಪ್ಪಿದ್ದಾರೆ. ಸ್ಥಳೀಯರು ಮತ್ತು ಪೊಲೀಸರು ಅವರನ್ನು ಹಿಮದ ರಾಶಿಯಡಿಯಿಂದ ಹೊರಕ್ಕೆ ತೆಗೆದು ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆಗಾಗಲೇ ಅವರು ಮೃತರಾಗಿದ್ದರು.
ಹೊಸದಾಗಿ ಹಿಮಪಾತವಾಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಿಮಾಚ್ಛಾದಿತ ಕಾಶ್ಮೀರ ಕಣಿವೆಯ ಎತ್ತರದ ಪ್ರದೇಶಗಳಲ್ಲಿ ಅತ್ಯಂತ ಅಪಾಯಕಾರಿ ಹಿಮಕುಸಿತದ ಎಚ್ಚರಿಕೆಯನ್ನು ಹೊರಡಿಸಿದ್ದಾರೆ.
ರಂಬಾನ್ ಜಿಲ್ಲೆಯ ಬನಿಹಾಲ್ನ ಶಾತನಿ ಪ್ರದೇಶದಲ್ಲಿ ಇಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಲವೆಡೆ ಹಿಮಪಾತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬನಿಹಾಲ್-ರಂಬಾನ್ ವಿಭಾಗದಲ್ಲಿ ಭಾರೀ ಮಳೆಯಿಂದಾಗಿ ಹಲವಾರು ಭೂಕುಸಿತ ಗಳೂ ಸಂಭವಿಸಿವೆ.
ಜಮ್ಮುವಿನಲ್ಲಿ ಹಾಸನದ ಯೋಧ ಸಂದೀಪ್ ಶೆಟ್ಟಿ ಹುತಾತ್ಮ.. ಶಾಂತಿಗ್ರಾಮ ಹೋಬಳಿ ದೇವಿಹಳ್ಳಿಯ ವೀರಯೋಧ ಸಂದೀಪ್ ಶೆಟ್ಟಿ(24) ಮಂಜುಗಡ್ಡೆ ಬಿದ್ದು ವೀರ ಮರಣ. ಜಮ್ಮುವಿನಲ್ಲಿ ಮಂಜುಗಡ್ಡೆ ಬಿದ್ದು 20 ಯೋಧರು ಸಾವನ್ನಪ್ಪಿದರು.
ನಿಶ್ಚಿತಾರ್ಥ ಮಾಡಿಕೊಂಡಿದ್ದ ಸಂದೀಪ್ ಮದುವೆ ಫೆ. 22ರಂದು ನಡೆಯಬೇಕಿತ್ತು. ಸಂದೀಪ್ ಶೆಟ್ಟಿ ವೀರ ಮರಣದಿಂದ ಗ್ರಾಮದಲ್ಲಿ ಮಡುಗಟ್ಟಿದ ಶೋಕ