ಪಶ್ಚಿಮ ಪದವೀಧರ ಮತಕ್ಷೆತ್ರ ಮತದಾರರ ಹೆಸರು ಸೇರ್ಪಡೆ ಅಕ್ಟೊಬರ್ 1 ರಿಂದ ನವೆಂಬರ್ 6 ರವರೆಗೆ ಅವಕಾಶ: ಜಿಲ್ಲಾಧಿಕಾರಿ ದೀಪಾ ಚೋಳನ್
ಧಾರವಾಡ:ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಪಶ್ಚಿಮ ಪದವೀಧರ ಮತಕ್ಷೆತ್ರದ ಅಭ್ಯರ್ಥಿಗಳ ಅವಧಿಯು 2020 ರ ಜೂನ್ 31 ಕ್ಕೆ ಮುಕ್ತಾಯವಾಗಲಿದೆ. ಈ ಚುನಾವಣೆಗೆ ಮತದಾರರ ಯಾದಿಗೆ ಹೆಸರು ಸೇರ್ಪಡೆ ಮಾಡಲು ಅಕ್ಟೊಬರ್ 1 ರಿಂದ ನವೆಂಬರ್ 6 ರವರೆಗೆ ಅವಕಾಶ ಕಲ್ಪಿಸಲಾಗಿದೆ. ನವೆಂಬರ್ 23 ರಂದು ಕರಡು ಮತದಾರರ ಯಾದಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯನ್ನುದ್ದೆಶಿಸಿ ಅವರು ಮಾತನಾಡಿ, ಮತದಾರರ ನೋಂದಣಿಗೆ ಈಗಾಗಲೇ ಅಧಿಕಾರಿಗಳನ್ನು ಗೊತ್ತುಪಡಿಸಲಾಗಿದೆ. ಜಿಲ್ಲೆಯ ಎಲ್ಲಾ ತಹಶೀಲ್ದಾರರ ಕಚೇರಿಗಳು ಹಾಗೂ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾರ್ಯಾಲಯಗಳಲ್ಲಿ ನೋಂದಣಿ ಕಾರ್ಯ ನಡೆಯಲಿದೆ. ಪದವೀಧರ ಮತಕ್ಷೆತ್ರ ವ್ಯಾಪ್ತಿಯ ಸಾಮಾನ್ಯ ನಿವಾಸಿಯಾಗಿರುವವರು ಅಧಿಕೃತ ದಾಖಲೆಗಳೊಂದಿಗೆ ನಮೂನೆ 18 ರಲ್ಲಿ ಅರ್ಜಿ ಸಲ್ಲಿಸಬೇಕು. 3 ವರ್ಷಗಳ ಹಿಂದೆ ಅಂದರೆ 31-10-2016 ಕ್ಕೆ ಮುಂಚಿತವಾಗಿ ಪದವಿ ಪೂರ್ಣಗೊಳಿಸಿರುವ ಅರ್ಹ ಪದವೀಧರರು ಅಧಿಕೃತ ಅಂಕಪಟ್ಟಿಯನ್ನು ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ಸಲ್ಲಿಸಬೇಕು. ಈ ಹಿಂದೆ ನೋಂದಣಿ ಮಾಡಿಕೊಂಡವರೂ ಕೂಡಾ ಈಗ ಮತ್ತೆ ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ತಮ್ಮ ಏಜೆಂಟರುಗಳಿಗೆ ತಿಳುವಳಿಕೆ ನೀಡಬೇಕು ಎಂದರು.
2014 ರಲ್ಲಿ ನಡೆದ ಚುನಾವಣೆ ಸಂದರ್ಭದಲ್ಲಿ ಜಿಲ್ಲೆಯಲ್ಲಿ 33 ಮತಗಟ್ಟೆಗಳಿದ್ದವು. 42,501 ಮತದಾರರಿದ್ದರು. ಈ ಬಾರಿ ಮತದಾರರ ಸಂಖ್ಯೆಗೆ ಅನುಗುಣವಾಗಿ ಅಗತ್ಯವಿರುವೆಡೆ ಹೊಸ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಪ್ರೆÃಮನಾಥ ಚಿಕ್ಕತುಂಬಳ, ಮಹೇಶ ಪತ್ತಾರ, ಪ್ರಕಾಶ ಹಳ್ಯಾಳ, ಪ್ರಕಾಶ ಗೋಡಬೋಲೆ, ರಾಜು ಎಚ್.ಎಮ್, ದೇವರಾಜ ಕಂಬಳಿ, ಎಮ್.ಎಮ್. ಚಿಕ್ಕಮಠ, ಮಂಜುನಾಥ ಬೋವಿ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.