ಭಟ್ಕಳ:ತಾಲೂಕಿನ ಊರ ದೇವರಾದ ಶ್ರೀ ಚೆನ್ನಪಟ್ಟಣ ಹನುಮಂತ ದೇವಸ್ಥಾನದ ಮಹಾರಥೋತ್ಸವದ ಹಿನ್ನೆಲೆ ಬುಧವಾರದಂದು ಇಲ್ಲಿನ ಶಹರ ಪೋಲೀಸ ಠಾಣೆ ವತಿಯಿಂದ ಠಾಣಾ ಕಛೇರಿಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ ‘ ಈ ಹಿಂದಿನ ತಾಲೂಕಿನಲ್ಲಿನ ಕಹಿ ಘಟನೆಯ ಕಾರಣದಿಂದಾಗಿ ಅಂದಿನಿಂದ ಇಂದಿನ ತನಕ ಎಲ್ಲಾ ಧರ್ಮ, ಜಾತಿ ಜನರು ವರ್ಷಂಪ್ರತಿ ನಡೆಯಲಿರುವ ಮಹಾರಥೋತ್ಸವವನ್ನು ಸಂತಸ ಸಡಗರದಿಂದ ನಡೆಸುತ್ತಾ ಬಂದಿದ್ದಾರೆ. ರಾಜ್ಯ ಬೇರೆ ಕಡೆಯಲ್ಲಿ ಹೋಲಿಸಿದರೆ ಆಯಾ ಧರ್ಮದ ಜನರು ಅವರ ಹಬ್ಬವನ್ನು ಅವರ ಮಿತಿಯಲ್ಲಿ ನಡೆಸಿ ಸಂಭ್ರಮಿಸಲಿದ್ದಾರೆ. ಆದರೆ ಭಟ್ಕಳದಲ್ಲಿ ಎಲ್ಲಾ ಜಾತಿ ಧರ್ಮದ ಹಬ್ಬವನ್ನು ಪ್ರತಿ ಬಾರಿ ಸಭೆ ಸೇರಿ ಹಬ್ಬದ ಆಚರಣೆಯ ಕ್ರಮದ ಬಗ್ಗೆ ಮಾತನಾಡಿ ಪ್ರೀತಿ ವಿಶ್ವಾಸದಿಂದ ನಡೆಸಲಿದ್ದಾರೆ. ಈ ಬಾರಿಯ ಜಾತ್ರೆಯೂ ಎಲ್ಲರ ಸಹಕಾರದಿಂದ ಶಾಂತಿಯುತವಾಗಿ ವ್ಯವಸ್ಥಿತ ರೀತಿಯಲ್ಲಿ ನಡೆಯಲಿದೆ. ಸಾರ್ವಜನಿಕರು ತಮ್ಮ ತಮ್ಮ ಜವಾಬ್ದಾರಿಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡರೆ ಪೊಲೀಸ ಇಲಾಖೆಗಳಿಗೆ ಹೆಚ್ಚಿನ ಹೊರೆ ಆಗುವದು ಕಡಿಮೆಯಾಗಲಿದೆ ಎಂದು ಹೇಳಿದರು.
ಮುಖ್ಯ ಅತಿಥಿ ತಹಸೀಲ್ದಾರ ಎನ್.ಬಿ.ಪಾಟೀಲ್ ಮಾತನಾಡಿ ಧರ್ಮ ಎಲ್ಲರಿಗೂ ಒಂದೇ. ಸಮಾಜದಲ್ಲಿ ಸರ್ವರೂ ಸಮಾಧಾನದಿಂದ ಇರಲು ಯಾವಾಗ ಸಾಧ್ಯವೆಂದರೆ ನಮ್ಮಲ್ಲಿ ಮಾನವೀಯ ಅಂಶ ಮರೆಯಾಗಬಾರದು. ಈ ಹಿಂದೆಯೂ ಜಾತ್ರೆಯೂ ಶಾಂತಿಯುತವಾಗಿ ನಡೆದುಕೊಂಡು ಬಂದಿದ್ದು ಈ ಬಾರಿಯೂ ಸಹ ಜವಾಬ್ದಾರಿಯಿಂದ ಜಾತ್ರೆಯ ಸಮಯದಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವುದು ಇಲಾಖೆಗಳ ಕರ್ತವ್ಯವಾಗಿದೆ. ಅದಕ್ಕೆ ನಾವು ಬದ್ಧರಾಗಿ ನಮ್ಮ ಕರ್ತವ್ಯವನ್ನು ನಾವು ನಿಭಾಯಿಸುತ್ತೇವೆ ಎಂದರು.
ಈ ವೇಳೆ ನಾಮಧಾರಿ ಸಮಾಜದ ಪ್ರಮುಖ ವೆಂಕಟೇಶ ನಾಯ್ಕ ಇಲ್ಲಿನ ಪಟ್ಟಣ ವ್ಯಾಪ್ತಿಯಲ್ಲಿ ಕೆಲವೊಂದು ಕಡೆ ಯುಜಿಡಿ ಸಮಸ್ಯೆಯಿಂದ ಕುಡಿಯುವ ನೀರಿನ ಸಮಸ್ಯೆಯಿದ್ದು ಜಾತ್ರೆ ವೇಳೆ ಮನೆಗೆ ಬರುವ ಸಂಬಂಧಿಕರು, ನೆಂಟರು ಬರುವುದರಿಂದ ನೀರಿನ ಅಭಾವ ಉಂಟಾಗಲಿದೆ ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದರು. ಇದಕ್ಕೆ ತಹಸೀಲ್ದಾರ ಅವರು ಈಗ ಬೇಸಿಗೆಯಾಗಿರುವುದರಿಂದ ಜಾತ್ರೆಯ ಸಮಯದಲ್ಲಿ ಹೆಚ್ಚಿನ ನೀರಿನ ಅವಶ್ಯಕತೆ ಇದ್ದ ಕಾರಣ ಅದಕ್ಕಾಗಿ ಕಡವಿನ ಕಟ್ಟೆ ಡ್ಯಾಂನಿಂದ ನೀರಿನ ಸೌಲಭ್ಯ ಒದಗಿಸಿಕೊಡುತ್ತೇವೆ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಡಿವೈಎಸ್ಪಿ ವೆಲೆಂಟೈನ ಡಿಸೋಜಾ ಮಾತನಾಡಿ ಈ ಹಿಂದಿನ ಎಲ್ಲಾ ಜಾತ್ರೆ ಹಬ್ಬದ ವೇಳೆಯಲ್ಲಿ ನೀಡಲಾದ ಭದ್ರತೆಗೆ ಪೂರಕವಾಗಿ ಸಾರ್ವಜನಿಕರು ಸ್ಪಂದಿಸಬೇಕು. ಜಾತ್ರೆಯಲ್ಲಿ ಹೆಚ್ಚಿನ ಸ್ವಯಂ ಸೇವಕರನ್ನು ನಿಯೋಜನೆ ಮಾಡಬೇಕು. ಚುನಾವಣೆ ದಿನ ಸಮೀಪ ಇರುವುದರಿಂದ ಯಾವುದೇ ಸಮಸ್ಯೆಯಾಗದಂತೆ ಎಲ್ಲಾ ಭದ್ರತೆಯನ್ನು ಒದಗಿಸಲಿದ್ದೇವೆ ಎಂದರು.
ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್.ನಾಯ್ಕ, ಆಟೋ ರಿಕ್ಷಾ ಚಾಲಕ ಮಾಲಕ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಮುಸ್ಲಿಂ ಮುಖಂಡ ಅಲ್ತಾಫ್ ಖರೂರಿ, ಇನಾಯತುಲ್ಲಾ ಶಾಬಂದ್ರಿ, ಶಾಂತಾರಾಮ ಭಟ್ಕಳ, ಶ್ರೀದರ ನಾಯ್ಕ ಆಸರಕೇರಿ, ಟಿ.ಡಿ.ನಾಯ್ಕ ಸೇರಿದಂತೆ ವಿವಿಧ ಸಮಾಜದ ಪ್ರಮುಖರು, ಸಂಘ ಸಂಸ್ಥೆ ಮುಖಂಡರು ಉಪಸ್ಥಿತರಿದ್ದರು.