ಭಟ್ಕಳ; ಇತ್ತಿಚೆಗೆ ತಮಿಳುನಾಡಿನಲ್ಲಿ ಜರಗಿದ ಐಸಿಎಸ್ಇ ಶಾಲಾ ತಂಡಗಳ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯವನ್ನು ಪ್ರತಿನಿಧಿಸಿ ತೃತೀಯ ಸ್ಥಾನವನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿರುವ ಭಟ್ಕಳದ ನ್ಯೂ ಶಮ್ಸ್ ಸ್ಕೂಲ್ ಶಾಲೆಯ ಐದು ವಿದ್ಯಾರ್ಥಿಗಳನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಮಂಗಳವಾರ ಸನ್ಮಾಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ಮಾಜಿ ಅಧ್ಯಕ್ಷ ಅಬ್ದುಲ್ ಕಾದಿರ್ ಬಾಷಾ ರುಕ್ನುದ್ದೀನ್, ಯಾವುದೇ ಸೌಲಭ್ಯಗಳಿಲ್ಲದ ಭಟ್ಕಳದಂತಹ ಪ್ರದೇಶದಿಂದ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಪಡದು ರಾಷ್ಟ್ರೀಯ ಕಬಡ್ಡಿ ತಂಡದಲ್ಲಿ ಸ್ಥಾನ ಗಳಿಸಿದ ನಮ್ಮ ವಿದ್ಯಾರ್ಥಿಗಳ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದ್ದು ಅದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿ ರಾಜ್ಯ ತಂಡದ ನಾಯಕ ಹಾಗೂ ನಮ್ಮ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜ್ಯ ತಂಡದ ಕೋಚ್ ಆಗಿ ನೇಮಕಗೊಂಡಿದ್ದು ಭಟ್ಕಳಕ್ಕಷ್ಟೆ ಅಲ್ಲದೆ ಇಡೀ ಜಿಲ್ಲೆಗೆ ಕೀರ್ತಿ ತಂದಂತಾಗಿದೆ ಎಂದರು.
ರಾಜ್ಯ ಕಬಡ್ಡಿ ತಂಡದ ನಾಯಕ ಸೈಫುಲ್ಲಾ ತಂಡದ ಸದಸ್ಯರಾದ ಇಸ್ಮಾಯಿಲ್, ಮುಹಮ್ಮದ್ ನುಜೈ, ಮುಹಮ್ಮದ್ ನುಫೈ ಹಾಗೂ ಉಬೈದ್ ರನ್ನು ಪುಷ್ಪಹಾರ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಹಿರಿಯ ಸದಸ್ಯರಾದ ಸೈಯ್ಯದ್ ಸಲಾಹುದ್ದೀನ್ ಎಸ್.ಕೆ, ಪಿ.ಆರ್.ಒ ಅಝೀಝುರ್ರಹ್ಮಾನ್ ರುಕ್ನುದ್ದೀನ್, ಸೈಯ್ಯದ್ ಯಾಸಿರ್ ಬರ್ಮಾವರ್ ನದ್ವಿ, ಅಬ್ದುಲ್ ಮುನಿಮ್ ರುಕ್ನುದ್ದೀನ್, ಮುಹಮ್ಮದ್ ರಝಾ ಮಾನ್ವಿ ಉಪಸ್ಥಿತರಿದ್ದರು.