ನಾಗಪುರ: ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಗಪುರದಿಂದ ನಿತಿನ್ ಗಡ್ಕರಿ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾದ ದೂರುಗಳ ಗುಚ್ಛದ ಕುರಿತು ನಿಲುವು ಕೋರಿ ಬಾಂಬೆ ಉಚ್ಚ ನ್ಯಾಯಾಲಯದ ನಾಗಪುರ ಪೀಠ ಗುರುವಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗೂ ಭಾರತದ ಚುನಾವಣಾ ಆಯೋಗಕ್ಕೆ ನೋಟಿಸು ಜಾರಿ ಮಾಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ನಾಯಕ ನಾನಾ ಪಾಟೋಲೆ, ವಂಚಿತ್ ಬಹುಜನ್ ಅಘಾದಿ (ವಿಬಿಎ) ಅಭ್ಯರ್ಥಿ ಮನೋಹರ್ ದಬ್ರಾಸೆ ಹಾಗೂ ನಫೀಸಾ ಖಾನ್ ಸಲ್ಲಿಸಿದ ಪ್ರತ್ಯೇಕ ಮೂರು ದೂರಗಳನ್ನು ನ್ಯಾಯಮೂರ್ತಿ ಎ.ಎಸ್. ಚಂದ್ರಚೂಡ ಅವರ ಏಕಸದಸ್ಯ ಪೀಠ ವಿಚಾರಣೆಗೆ ಎತ್ತಿಕೊಂಡಿತು. ಚುನಾವಣಾ ಪ್ರಕ್ರಿಯೆಗೆ ವಿಧಿಸಲಾದ ವಿಧಾನವನ್ನು ರಾಜ್ಯ ಚುನಾವಣಾ ಆಯೋಗ ಅನುಸರಿಸಿಲ್ಲ ಎಂದು ಪಾಟೋಲೆ ದೂರಿನಲ್ಲಿ ಆರೋಪಿಸಿದ್ದಾರೆ.
ಮತದಾನದಲ್ಲಿ ದೋಷಪೂರ್ಣ ಇವಿಎಂಗಳನ್ನು ಬಳಸಲಾಗಿದೆ ಎಂದು ದಬ್ರಾಸೆ ದೂರಿನಲ್ಲಿ ಆಪಾದಿಸಿದ್ದಾರೆ. ವಿವಿಧ ದೂರುದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಮೂರ್ತಿ ಚಂದುರ್ಕರ್ ಅವರು, ನಿತಿನ್ ಗಡ್ಕರಿ, ಭಾರತ ಚುನಾವಣಾ ಆಯೋಗ ಹಾಗೂ ನಾಗಪುರದ ಚುನಾವಣಾಧಿಕಾರಿಯಾಗಿದ್ದ ಜಿಲ್ಲಾಧಿಕಾರಿಗೆ ನೋಟಿಸು ಜಾರಿ ಮಾಡಿದ್ದಾರೆ. ಅಲ್ಲದೆ, ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಅಫಿದಾವಿತ್ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.