ಮುಂಬೈ: ದೇಶಾದ್ಯಂತ ಮುಂಗಾರು ಮಳೆ ಜೋರಾಗಿದೆ. ಅದರಲ್ಲೂ ವಾಣಿಜ್ಯ ನಗರಿ ಮುಂಬೈ ಥಂಡಾ ಹೊಡೆಯುತ್ತಿದೆ. ಪ್ರಸಕ್ತ ಸಾಲಿನ ನೈಋತ್ಯ ಮುಂಗಾರು ಮಳೆ ಉತ್ತಮವಾಗಿದ್ದು, ದಕ್ಷಿಣದಲ್ಲಿ ಆರಂಭವಾಗಿ ಪೂರ್ವ ಭಾರತ ಮತ್ತು ಮಧ್ಯ ಭಾರತದ ಸುತ್ತಮುತ್ತ ಬಿರುಬೀಸುತ್ತಿದೆ.
ಭಾರತೀಯ ಹವಾಮಾನ ಇಲಾಖೆ (India Meteorological Department -IMD) ವರದಿಗಳ ಪ್ರಕಾರ ಭಾರತದ ಪೂರ್ವ-ಮಧ್ಯ ಭಾಗದಲ್ಲಿ ಮತ್ತು ಬಂಗಾಳ ಕೊಲ್ಲಿಯ ಈಶಾನ್ಯ ಭಾಗದಲ್ಲಿ ಚಂಡಮಾರುತಗಳ ಸುಳಿ ಎದ್ದಿದ್ದು, ವಾಯುಭಾರ ಕುಸಿತ ಉಂಟಾಗಿದೆ. ಇದರಿಂದ ಪಶ್ಚಿಮ ಬಂಗಾಳ, ಒಡಿಶಾ, ಛತ್ತೀಸ್ಗಢ ರಾಜ್ಯಗಳಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆಯಾಗಲಿದೆ.
ಇನ್ನು ಮುಂಗಾರು ತವರು ಕೇರಳದಲ್ಲಿ ಜೂನ್ 11- 15 ರ ಮಧ್ಯೆ ಭಾರೀ ಮಳೆಯಾಗಲಿದೆ. ಕೊಂಕಣ ಭಾಗದಲ್ಲಿ ಮತ್ತು ಗೋವಾದಲ್ಲಿಯೂ ಮಳೆಯಾಗಲಿದೆ. ಮಹಾರಾಷ್ಟ್ರ ಮತ್ತು ಕರ್ನಾಟಕದ ಕರಾವಳಿ ಭಾಗದಲ್ಲಿ ಜೋರು ಮಳೆಯಾಗಲಿದೆ.
ಮುಂಗಾರು ಪ್ರಭಾವ ಮುಂಬೈ ಹೈ ಅಲರ್ಟ್ನಲ್ಲಿದೆ. ನಾಳೆ ಭಾನುವಾರ ಮತ್ತು ಸೋಮವಾರ ಮುಂಬೈ ಮತ್ತು ಸುತ್ತಮುತ್ತ ಭಾಗಗಳಲ್ಲಿ ವಿಪರೀತ ಮಳೆಯಾಗಲಿದೆ. ಹಾಗಾಗಿ ನೌಕಾ ಪಡೆ, ಕೋಸ್ಟ್ ಗಾರ್ಡ್ ಮತ್ತು ಎನ್ಡಿಆರ್ಎಫ್ ತಂಡಗಳಿಗೆ ಸನ್ನದ್ಧ ಸ್ಥಿತಿಯಲ್ಲಿರುವಂತೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಶನ್ (BMC) ಸೂಚನೆ ನೀಡಿದೆ.
BMC ಯ ಎಲ್ಲಾ ಸಿಬ್ಬಂದಿ ಕೆಲಸಕ್ಕೆ ಹಾಜರಿರಬೇಕು. ಅಗ್ನಿಶಾಮಕ ದಳಕ್ಕೂ ಎಚ್ಚರ ಸ್ಥಿತಿಯಲ್ಲಿರುವಂತೆ ಹೇಳಲಾಗಿದೆ. ಇನ್ನು ಸಂಚಾರಕ್ಕಾಗಿ ಬೆಸ್ಟ್ ಮತ್ತು ವಿದ್ಯುತ್ ಸಂಚಾರಕ್ಕಾಗಿ ಅದಾನಿ ವಿದ್ಯುತ್ ಸಬ್ಸ್ಟೇಷನ್ಗಳಿಗೂ ಎಚ್ಚರಿಕೆಯ ಸಂದೇಶ ನೀಡಲಾಗಿದೆ. ಮಹಾರಾಷ್ಟ್ರದ ರಾಯಘಡ ಮತ್ತು ರತ್ನಗಿರಿ ಕರಾವಳಿ ಜಿಲ್ಲೆಗಳಲ್ಲೂ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂಬೈ, ಥಾಣೆ, ರಾಯಘಡ ಮತ್ತು ರತ್ನಗಿರಿಯಲ್ಲಿ ಮುಂದಿನ 24 ಗಂಟೆಯಲ್ಲಿ 21 ಸೆಂ.ಮೀ. ಅತೀವ ಮಳೆ ಬೀಳಲಿದೆ.
ಜೊತೆಗೆ ಉತ್ತರ ಪ್ರದೇಶ ಅನೇಕ ಜಿಲ್ಲೆಗಳಲ್ಲಿ ಇನ್ನೇನು ಮಳೆ ಶುರುವಾಗಲಿದೆ. ಸಿಕ್ಕಿಂ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ತೆಲಂಗಾಣದವರೆಗೂ ವಾಯುಭಾರ ಕುಸಿತದ ಪ್ರಭಾವ ಬೀರಲಿದೆ. ಇದರಿಂದ ಈಗಾಗಲೇ ಮಳೆ ಬೀಳುತ್ತಿದ್ದು, ಮುಂದೆ ಹೆಚ್ಚಾಗಲಿದೆ.
ಬಿಹಾರ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮುಂಗಾರು ಮಳೆ ಬೀಳಲಿದೆ. ನಾಳೆ, ನಾಳಿದ್ದು ಈ ಮೂರೂ ರಾಜ್ಯಗಳಲ್ಲಿ ಮುಂಗಾರು ಅರ್ಭಟ ಜೋರಾಗಿರಲಿದೆ.