ಉ.ಪ್ರ.: ಭೂಗತಪಾತಕಿ ಅತೀಕ್, ಸಹೋದರನ ಗುಂಡಿಕ್ಕಿ ಹತ್ಯೆ; ಪೊಲೀಸರು, ಸುದ್ದಿಗಾರರ ಎದುರೇ ಗುಂಡುಹಾರಿಸಿದ ದುಷ್ಕರ್ಮಿಗಳು
ಲಕ್ನೋ : ಉತ್ತರಪ್ರದೇಶದ ಬಂಧಿತ ಭೂಗತ ಪಾತಕಿ ಅತೀಕ್ ಅಹದ್ ಹಾಗೂ ಆತನ ಸಹೋದರ ಅಶ್ರಫ್ ಅಹ್ಮದ್ ಅವರನ್ನು ಪ್ರಯಾಗ್ ರಾಜ್ನಲ್ಲಿ ಶನಿವಾರ ರಾತ್ರಿ ಪೊಲೀಸರು ಹಾಗೂ ಪತ್ರಕರ್ತರ ಎದುರೇ ದುಷ್ಕರ್ಮಿಗಳು ಗುಂಡು ಹಾರಿಸಿ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಪ್ರಯಾಗ್ರಾಜ್ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಾಗ ದುಷ್ಕರ್ಮಿಗಳು ಅವರನ್ನು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೈಕೋಳ ತೊಡಿಸಲ್ಪಟ್ಟಿದ್ದ ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ ಅವರು ಪೊಲೀಸ್ ವ್ಯಾನ್ನಿಂದ ಇಳಿದು ಆಸ್ಪತ್ರೆಯೆಡೆಗೆ ಪೊಲೀಸ್ ಬೆಂಗಾವಲಿನ ನಡುವೆ ಪತ್ರಕರ್ತರೊಂದಿಗೆ ಮಾತನಾಡುತ್ತಾ ತೆರಳುತ್ತಿದ್ದಾಗ ದುಷ್ಕರ್ಮಿಗಳು ತೀರಾ ಸಮೀಪದಿಂದ ಪಿಸ್ತೂಲ್ನಿಂದ ಗುಂಡು ಹಾರಿಸಿದ್ದಾರೆ. ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಹಂತಕರು ಪತ್ರಕರ್ತರ ಸೋಗಿನಲ್ಲಿ ಪೊಲೀಸರ ಬೆಂಗಾವಲನ್ನು ಭೇದಿಸಿ ಒಳ ನುಸುಳಿದ್ದರು ಎನ್ನಲಾಗಿದೆ. ಗುಂಡು ಹಾರಾಟದಲ್ಲಿ ಓರ್ವ ಪೊಲೀಸ್ ಗಾಯಗೊಂಡಿದ್ದಾರೆ ಎಂದು ಹೇಳಲಾಗಿದೆ.
ಅತೀಕ್ ಅಹ್ಮದ್ ಕನಿಷ್ಠ 100 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ಆತನ ಪುತ್ರ ಅಸದ್ನನ್ನು ಪೊಲೀಸರು ಝಾನ್ಸಿಯಲ್ಲಿ ಗುರುವಾರ ಎನ್ಕೌಂಟರ್ ನಡೆಸಿ ಹತ್ಯೆಗೈದಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ ಎಂದು ಅತೀಕ್ ಅಹ್ಮದ್ನ ವಕೀಲ ವಿಜಯ್ ಮಿಶ್ರಾ ತಿಳಿಸಿದ್ದಾರೆ. ಆರೋಪಿಗಳನ್ನು ಲವೇಶ್ ತಿವಾರಿ, ಸನ್ನಿ ಹಾಗೂ ಅರುಣ್ ಮೌರ್ಯ ಎಂದು ಗುರುತಿಸ ಲಾಗಿದೆ. ಹಂತಕರು ಅತೀಕ್ ಅಹ್ಮದ್ ಹಾಗೂ ಅಶ್ರಫ್ ಅಹ್ಮದ್ರ ಹತ್ತು ಸುತ್ತು ಗುಂಡು ಹಾರಿಸಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಅತೀಕ್ ಅಹ್ಮದ್ ಸಮಾಜವಾದಿ ಪಕ್ಷದ ಮಾಜಿ ಸಂಸದ ಈತ ಅಪಹರಣ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿದ್ದಾನೆ. ಈತ ಬಿಎಸ್ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಆರೋಪಿ. ಇದಲ್ಲದೆ, ಈತ ಶಾಸಕ ರಾಜು ಪಾಲ್ನ ವಕೀಲ ಉಮೇಶ್ ಪಾಲ್ ಅವರನ್ನು ಈ ವರ್ಷ ಫೆಬ್ರವರಿಯಲ್ಲಿ ಹತ್ಯೆಗೈದಿದ್ದ.