ಹಾಸನ : ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಅ.2 ರಿಂದ ನವೆಂಬರ್ 14 ರವೆರೆಗೆ ದೇಶಾದ್ಯಾಂತ ಪ್ಯಾನ್ ಇಂಡಿಯಾ ಔಟ್ರೀಚ್ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವುದರ ಮುಖಾಂತರ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲಾಗುವುದು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಿವಣ್ಣ ಅವರು ತಿಳಿಸಿದ್ದಾರೆ.
ಜಿಲ್ಲಾ ನ್ಯಾಯಾಲಯ ಸಭಾಂಗಣದಲ್ಲಿ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದ ಅವರು, ಎಲ್ಲಾ ಇಲಾಖೆಗಳ ಸಹಕಾರ ವತಿಯಿಂದ ಜಿಲ್ಲಾದ್ಯಾಂತ ಗ್ರಾಮ ಮಟ್ಟದಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಕಾನೂನು ಸೇವೆಗಳ ಬಗ್ಗೆ ಜಾಗೃತಿ ಮೂಡಿಸಲಾಗುವುದು ಎಂದು ಅವರು ಹೇಳಿದರು.
ಸ್ವಾತಂತ್ಯೋತ್ಸವದ 75 ನೇ ವರ್ಷಚಾರಣೆ ಅಂಗವಾಗಿ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಕಾನೂನಿನ ಸೌಲಭ್ಯಗಳು ಹಾಗೂ ಜನ ಸಾಮಾನ್ಯರಿಗೆ ನೆರವುಗಳ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಶೋಷಿತರು, ಸಂಕಷ್ಟದಲ್ಲಿರುವವರು, ಅವಕಾಶ ವಂಚಿತರನ್ನು ಗುರುತಿಸಿ ವಿಭಿನ್ನ ಜಾಗೃತಿ ಚಟುವಟಿಕೆಗಳನ್ನು ನ್ಯಾಯಾಂಗ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಅವರು ವಿವರಿಸಿದರು.
ಜನರ ಬಳಿಗೆ ತೆರಳಿ ಕಾನೂನಿನ ಅರಿವು ಮೂಡಿಸಿ ನೆರವು ನೀಡುವಂತೆ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ರಾಜ್ಯ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳಿಗೆ ಸೂಚಿಸಿದೆ ಅದರಂತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು ವಕೀಲರ ಸಂಘ, ಜಿಲ್ಲಾಡಳಿತ ಹಾಗೂ ವಿವಿಧ ಸಂಘ ಸಂಸ್ಥೆಗಳು ಇದರೊಂದಿಗೆ ಕೈಜೊಡಿಸುತ್ತಿದೆ ಎಂದು ಅವರು ಹೇಳಿದರು. .
ಅ.2 ರಿಂದ 9 ರವರೆಗೆ ದೇಶದಲ್ಲಿ ಪ್ರತಿದಿನ ಒಂದೊಂದು ಕಾರ್ಯಕ್ರಮ ನಡೆಯಲಿದೆ ಅದೇ ರೀತಿ ನ. 1ರಿಂದ 14 ರವರೆಗೆ ಕಾನೂನು ಸೇವಾ ಜಾಗೃತಿ ಸಪ್ತಾಹ ಆಯೋಜಿಸಲಾಗುವುದು ಎಂದು ನ್ಯಾಯಮೂರ್ತಿ ಶಿವಣ್ಣ ಅವರು ಹೇಳಿದರು.
ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯದರ್ಶಿಗಳ ಸಭೆ ನಡೆಸಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವಂತೆ ಈಗಾಗಲೇ ನಿರ್ದೇಶನ ನೀಡಲಾಗಿದೆ ಎಂದು ಶಿವಣ್ಣ ಅವರು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಿಲ್ಲಾ ಸತ್ರ ಹಾಗೂ ಸಿವಿಲ್ ನ್ಯಾಯಾಧೀಶರಾದ ಬಿ. ಕೆ.ರವಿಕಾಂತ್ ಅವರು ಮಾತನಾಡಿ ಕಸ ಸಂಗ್ರಹಣೆ ಮಾಡುವ ವಾಹನಗಳು, ರೇಡಿಯೋ ಕಾರ್ಯಕ್ರಮ ಹಾಗೂ ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಕಾನೂನು ಜಾಗೃತಿ ಮೂಡಿಸಲು ಹೆಚ್ಚಿನ ಒತ್ತನ್ನು ನೀಡಲಾಗುವುದು ಎಂದು ಅವರು ಹೇಳಿದರು.
ವಕೀಲರ ಸಂಘದ ಅಧ್ಯಕ್ಷರಾದ ಹೆಚ್.ಎಸ್ ಮಂಜುನಾಥಮೂರ್ತಿ ಅವರು ಮಾತನಾಡಿ ಅಕ್ಟೋಬರ್ 2 ರ ಗಾಂಧಿ ಜಯಂತಿಯಿಂದ ನವಂಬರ್ 14 ರವೆರೆಗೆ ದೇಶಾದ್ಯಾಂತ ಪ್ಯಾನ್ ಪ್ಯಾನ್ ಇಂಡಿಯಾ ಕಾನೂನು ಅರಿವು ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಲ್ಲಿ ಕಾನೂನಿ ಮನವರಿಕೆಮಾಡಿ ಅದರ ಸವಲತ್ತುಗಳನ್ನು ಸರಿಯಾಗಿ ತಲುಪಿಸುವಂತಹ ಕೆಲಸವನ್ನು ಮಾಡಲಾಗುವುದು ಎಂದ ಹೇಳಿದ ಅವರು ವಕೀಲರು, ಸಾರ್ವಜನಿಕರು ಹಾಗು ವಿವಧ ಇಲಾಖೆಗಳು ಸಹಕರಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ವಕೀಲರ ಸಂಘದ ಕಾಯದರ್ಶಿ ಮೋಹನ್ ಕುಮಾರ್ ಹಾಜರಿದ್ದರು.