ಹೊನ್ನಾವರ: ಮಾಜಿ ಶಾಸಕ ಡಾ. ಎಂ. ಪಿ. ಕರ್ಕಿ ನಿಧನ
ಹೊನ್ನಾವರ: ಕುಮಟಾ- ಹೊನ್ನಾವರ ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿ, ಪಟ್ಟಣದ ಎಸ್ಡಿಎಂ ಕಾಲೇಜಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಡಾ. ಎಂ. ಪಿ. ಕರ್ಕಿ (87) ಸೋಮವಾರ ನಿಧನರಾದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಿಕ್ಷಣ ಕ್ಷೇತ್ರದಲ್ಲಿ ಪ್ರತಿಷ್ಟಿತ ಸಂಸ್ಥೆಯಾದಂತಹ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ 40 ವರ್ಷಗಳವರೆಗೆ ಸೇವೆ ಸಲ್ಲಿಸಿರುವ ಹಿರಿಮೆಯನ್ನು ಎಂ. ಪಿ. ಕರ್ಕಿ ಹೊಂದಿದ್ದರು. ಮೃತರು ಪತ್ನಿ, ಪುತ್ರಿ, ಪುತ್ರ ಮತ್ತು ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಹೊನ್ನಾವರಕ್ಕೆ ಕೊಡುಗೆ: ವೈದ್ಯಕೀಯ, ಸಹಕಾರಿ, ರಾಜಕೀಯ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಡಾ. ಎಂ.ಪಿ. ಕರ್ಕಿ ಹೊನ್ನಾವರ ತಾಲೂಕಿಗೆ ಅನನ್ಯ ಸೇವೆ ಸಲ್ಲಿಸಿದ್ದರು. ಕಹಿಯಾದರೂ ಅಪ್ರಿಯ ಸತ್ಯವನ್ನು ಹೇಳುವ ನಿಷ್ಠೆ, ಕೈಬಾಯಿ ಶುದ್ಧತೆಗಳಿಗೆ ಹೆಸರಾದ ಡಾ. ಎಂ. ಪಿ. ಕರ್ಕಿ ವೈದ್ಯರಾಗಿ ಹಳ್ಳಿಹಳ್ಳಿ ತಿರುಗಿ ಅಗ್ಗದಲ್ಲಿ ಪ್ರಾಮಾಣಿಕ ವೈದ್ಯಕೀಯ ಸೇವೆ ನೀಡಿದ್ದರು. ಸಮಾಜದ ರೋಗವನ್ನು ಕಂಡು ಚಿಕಿತ್ಸೆ ನೀಡಲು ಸಾಮಾಜಿಕ ಕ್ಷೇತ್ರಕ್ಕೆ ಬಂದರು, ಅಲ್ಲೂ ತನ್ನ ತನ ಉಳಿಸಿಕೊಂಡು ರಚನಾತ್ಮಕ ಕೆಲಸಗಳಿಂದ ತಾಲೂಕಿಗೆ ಶಾಶ್ವತ ಕೊಡುಗೆ ನೀಡಿದ್ದಾರೆ.
ಹೊನ್ನಾವರದ ಸುಪ್ರಸಿದ್ಧ ನ್ಯಾಯವಾದಿ, ಸ್ವಾತಂತ್ರ್ಯ ಹೋರಾಟಗಾರ ಪರಮೇಶ್ವರ ಗಣೇಶ ಕರ್ಕಿ ಹಾಗೂ ಶ್ರೀಮತಿ ಅನಸೂಯಾ ಕರ್ಕಿ ಅವರ ಮಗನಾಗಿ 16-7-1935ರಂದು ಜನಿಸಿದ ಇವರು ಮುಂಬೈನಲ್ಲಿ 1959ರಲ್ಲಿ ಪ್ರಸಿದ್ಧ ಗ್ರಾಂಯಂಟ್ ಮೆಡಿಕಲ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್ ಪದವಿ ಗಳಿಸಿ ಆ ಕಾಲದಲ್ಲಿ ತಾಯ್ನೆಲದ ಜನರ ಸೇವೆಗಾಗಿಯೇ ಹೊನ್ನಾವರದಲ್ಲಿ ವೈದ್ಯಕೀಯ ಸೇವೆ ಆರಂಭಿಸಿ ಎರಡು ದಶಕಗಳಿಗೂ ಹೆಚ್ಚುಕಾಲ ಸಂಪೂರ್ಣವಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಹಣ ಇರಲಿ, ಇಲ್ಲದಿರಲಿ. ಆಸ್ಪತ್ರೆಗೆ ಬಂದ ರೋಗಿಗಳಿಗೆ ಔಷಧ ಕೊಡದೆ ಕಳಿಸುತ್ತಿರಲಿಲ್ಲ. ಹಗಲು-ರಾತ್ರಿಯೆನ್ನದೆ ಹಳ್ಳಿಹಳ್ಳಿಗೆ ತಿರುಗಿ ವೈದ್ಯಕೀಯ ಸೇವೆ ನೀಡಿದ್ದನ್ನು ಜನ ಎಂದಿಗೂ ಮರೆಯಲಾರರು.