ತುರ್ತು ಸಂದರ್ಭದಲ್ಲಿ 112ಕ್ಕೆ ಕರೆ ಮಾಡಿ; ಭಟ್ಕಳದಲ್ಲಿ ತುರ್ತು ಸ್ಪಂದನಾ ಪೊಲೀಸ್ ವಾಹನ ಸಂಚಾರಕ್ಕೆ ಡಿವೈಎಸ್ಪಿ ಬೆಳ್ಳಿಯಪ್ಪ ಚಾಲನೆ
ಭಟ್ಕಳ: ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಭಟ್ಕಳ ಉಪ ವಿಭಾಗದ ನಿಮ್ಮ ಮಿತ್ರ 24X7 ತುರ್ತು ಸ್ಪಂದನಾ ಸಹಾಯ ವ್ಯವಸ್ಥೆ ವಾಹನ (ಇಆರ್ಎಸ್ಎಸ್) ಹಾಗೂ ಶರಾವತಿ ಪಡೆ ವಾಹನ ಸಂಚಾರಕ್ಕೆ ಡಿವೈಎಸ್ಪಿ ಕೆ.ಯು. ಬೆಳ್ಳಿಯಪ್ಪ ಭಾನುವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ತುರ್ತು ಸಂದರ್ಭದಲ್ಲಿ ಸಾರ್ವಜನಿಕರು112ಕ್ಕೆ ಕರೆ ಮಾಡಿದರೆ ತುರ್ತು ಸ್ಪಂದನಾ ಬೆಂಬಲ ವ್ಯವಸ್ಥೆಯನ್ನು (ಇ. ಆರ್.ಎಸ್.ಎಸ್) ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು ಯಾವುದೇ ಭಾಗದಿಂದಲಾದರೂ 112ಕ್ಕೆ ಕರೆ ಮಾಡಿದರೆ ತಕ್ಷಣ ಸಹಾಯ ಲಭ್ಯವಾಗುವುದು. ಭಟ್ಕಳ ಉಪ ವಿಭಾಗದ ಭಟ್ಕಳ ನಗರ-ಗ್ರಾಮೀಣ ಠಾಣೆಗೆ 1, ಮುರ್ಡೇಶ್ವರ-ಮಂಕಿ ಠಾಣೆಗೆ 1, ಹೊನ್ನಾವರಕ್ಕೆ 1, ಕುಮಟಾ ಹಾಗೂ ಗೋಕರ್ಣಕ್ಕೆ ತಲಾ 1 ವಾಹನಗಳನ್ನು ನೀಡಲಾಗಿದೆ.
ತೊಂದರೆಯಾಗುವುದನ್ನು ಮನಗಂಡು ಕೇಂದ್ರ ಸರ್ಕಾರ ತುರ್ತು ಸ್ಪಂದನ ಸಹಾಯ ವ್ಯವಸ್ಥೆಯನ್ನು ಮಾಡಿದ್ದು ಭಾರತ ದೇಶದೆಲ್ಲೆಡೆ ಒಂದೇ 112 ಸಂಖ್ಯೆ ಚಾಲನೆಯಲ್ಲಿರುತ್ತದೆ. 112ಕ್ಕೆ ಕರೆ ಮಾಡುವುದರಿಂದ ಯಾವುದೇ ರೀತಿಯಲ್ಲಿ ಪೊಲೀಸ್ ಸಹಾಯ, ಅಗ್ನಿಶಾಮಕ ದಳದ ಸಹಾಯ ಸೇರಿದಂತೆ ಇನ್ನಿತರ ಸಹಾಯ ಕೂಡಾ ಲಭ್ಯವಾಗುವುದು.
ಸಾರ್ವಜನಿಕರು ಇನ್ನು ಮುಂದೆ ತಮ್ಮ ಇಲಾಖೆಯ ಯಾವುದೇ ತುರ್ತು ಸೇವೆಗಾಗಿ 112ಕ್ಕೆ ನೇರವಾಗಿ ಕರೆ ಮಾಡಿದರೆ ಕಂಟ್ರೋಲ್ ರೂಮ್ನಿಂದ ದೂರವಾಣಿ ಮಾಡಿದವರ ಸ್ಥಳವನ್ನು ಗುರುತಿಸಿ ತಕ್ಷಣ ಹತ್ತಿರದಲ್ಲಿಯೇ ಇರುವ ವಾಹನಕ್ಕೆ ತಿಳಿಸುವ ಮೂಲಕ ಅತೀ ಶೀಘ್ರದಲ್ಲಿ ದೂರವಾಣಿ ಕರೆ ಮಾಡಿದವರನ್ನು ತಲುಪುವ ವ್ಯವಸ್ಥೆಯಾಗುತ್ತದೆ. ನಾಗರೀಕರು, ವಿಶೇಷವಾಗಿ ವೃದ್ಧರು, ಮಹಿಳೆಯರು, ಮಕ್ಕಳು ಮತ್ತು ತುರ್ತು ಅಗ್ನಿ ಅವಘಡಗಳಾದಾಗ 112ಕ್ಕೆ ಕರೆ ಮಾಡುವಂತೆ ಅವರು ಕೋರಿದ್ದಾರೆ. ಭಟ್ಕಳ ಸಿಪಿಐ ದಿವಾಕರ ಪಿ.ಎಂ, ಕುಮಟಾ ಸಿಪಿಐ ಶಿವಪ್ರಕಾಶ ನಾಯಕ, ಹೊನ್ನಾವರ ಸಿಪಿಐ ಶ್ರೀಧರ, ನಗರ ಠಾಣೆ ಪಿಎಸೈ ಸುಮಾ ಬಿ, ಮುರರ್ಡೇಶ್ವರ ಪಿಎಸೈ ಓಂಕಾರಪ್ಪ, ಗ್ರಾಮೀಣ ಠಾಣೆಯ ಪಿಎಸೈ ಭರತ್ ಎಸ್. ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.