ಮುಂಬೈ: ಎಲ್ಗಾರ್ ಪರಿಷತ್ ಹಾಗೂ ಮಾವೋವಾದಿ ನಂಟು ಪ್ರಕರಣದ ಆರೋಪಿಗಳಾದ ವೆರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರು ನವಿ ಮುಂಬೈಯಲ್ಲಿರುವ ಕಾರಾಗೃಹದಿಂದ ಶನಿವಾರ ಬಿಡುಗಡೆಯಾಗಿದ್ದಾರೆ.
ಸಾಮಾಜಿಕ ಹೋರಾಟಗಾರರಾದ ವೆರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರಿಗೆ ಸುಪ್ರೀಂ ಕೋರ್ಟ್ ಕಳೆದ ವಾರ ಜಾಮೀನು ಮಂಜೂರು ಮಾಡಿತ್ತು. ಆನಂತರ ವಿಶೇಷ ನ್ಯಾಯಾಲಯ ಬಿಡುಗಡೆಗೆ ಆದೇಶ ನೀಡಿತ್ತು. ಈ ಇಬ್ಬರು ಸಾಮಾಜಿಕ ಹೋರಾಟಗಾರರನ್ನು ತಲೋಜಾ ಕಾರಾಗೃಹದಲ್ಲಿ ಇರಿಸಲಾಗಿತ್ತು.
ವೆರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರ ಕೆಲವು ಬೆಂಬಲಿಗರು ಹಾಗೂ ಕುಟುಂಬದ ಸದಸ್ಯರು ಅವರನ್ನು ಕರೆದು ಕೊಂಡು ಹೋಗಲು ಕಾರಾಗೃಹದ ಹೊರಗೆ ಕಾದಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ವರ್ನನ್ ಗೊನ್ಸಾಲ್ವಿಸ್ ಹಾಗೂ ಅರುಣ್ ಫೆರೇರಾ ಅವರ ಬಿಡುಗಡೆ ಯೊಂದಿಗೆ ಈ ಪ್ರಕರಣದ 16 ಮಂದಿ ಆರೋಪಿಗಳಲ್ಲಿ ಈಗ ಐವರು ಜಾಮೀನಿನಲ್ಲಿ ಬಿಡುಗಡೆ ಯಾದಂತಾಗಿದೆ.
16 ಆರೋಪಿಗಳಲ್ಲಿ ಓರ್ವರಾಗಿದ್ದ ಸ್ಟ್ಯಾನ್ ಸ್ವಾಮಿ ಅವರು ನ್ಯಾಯಾಂಗ ಕಸ್ಟಡಿಯಲ್ಲಿರುವಾಗ 2021 ಜುಲೈಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಶುಕ್ರವಾರ ಬಿಡುಗಡೆ ಆದೇಶ ಜಾರಿಗೊಳಿಸಿತು ಎಂದು ಪ್ರಕರಣ ದೊಂದಿಗೆ ಸಂಬಂಧ ಹೊಂದಿರುವ ವಕೀಲ ಶನಿವಾರ ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್ ಇವರಿಬ್ಬರಿಗೆ ಜುಲೈ 28ರಂದು ಜಾಮೀನು ಮಂಜೂರು ಮಾಡಿತ್ತು. ಈ ಸಂದರ್ಭ ಗೊನ್ಸಾಲ್ವೆಸ್ ಹಾಗೂ ಫೆರೇರಾ ಅವರು ಯಾವುದೇ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ತೃತೀಯ ಪಕ್ಷಗಳ ಸಂವಹನದಿಂದ ತಿಳಿದು ಬಂದಿಲ್ಲ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಿಸಿತ್ತು.
ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಹಾಗೂ ಸುಧಾಂಶು ಧುಲಿಯಾ ಅವರನ್ನು ಒಳಗೊಂಡ ಸುಪ್ರೀಂ ಕೋರ್ಟ್ನ ಪೀಠ ಈ ಜಾಮೀನು ಮಂಜೂರು ಮಾಡಿತ್ತು.