ಧಾರವಾಡ : ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರಿನ ವಾಲ್ನಟ್ ಸಂಸ್ಥೆಯ ಸಹಯೋಗದಲ್ಲಿ ಇಂದು ರಾಯಾಪುರದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಜ್ಞಾನವಿಕಾಸ ತರಬೇತಿ ಕೇಂದ್ರದಲ್ಲಿ ಸ್ವಚ್ಛ ಭಾರತ ಮಿಶನ್(ಗ್ರಾಮೀಣ) ಯೋಜನೆಯಡಿ ಜಿಲ್ಲಾ ಮಟ್ಟದ ಸ್ವಚ್ಛತಾ ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಿಸಿ.ಸತೀಶ ಮಾತನಾಡಿ, ಪ್ಲಾಸ್ಟಿಕ್ ಬಳಕೆ ಎಲ್ಲೆಡೆ ನಿಷೇಧಿಸಲಾಗಿದೆ. ಪ್ರತಿಯೊಬ್ಬರೂ ಪರಿಸರ ಸ್ನೇಹಿ ಜೀವನ ನಡೆಸಬೇಕು. ಗಿಡಗಳನ್ನು ನೆಡೆವುದಲ್ಲದೇ ಅವುಗಳನ್ನು ಉತ್ತಮವಾಗಿ ಪೋಷಿಸಿ ಬೆಳೆಸವುದರ ಮೂಲಕ ಹಸಿರನ್ನು ಹೆಚ್ಚಿಸಬೇಕು ಎಂದು ಹೇಳಿದರು.
ಜ್ಞಾನವಿಕಾಸ ತರಬೇತಿ ಕೇಂದ್ರದ ನಿರ್ದೇಶಕ ಡಾ.ಪ್ರಕಾಶ್ ಭಟ್ ಮಾತನಾಡಿ, ಸ್ವಚ್ಛತೆ ಎಂಬುದು ನಿತ್ಯದ ಪರಿಪಾಠವಾಗಬೇಕು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರು ಸ್ವಚ್ಛತೆ ಪರಿಕಲ್ಪನೆಗೆ ಪ್ರೇರಣೆಯಾಗಿದ್ದಾರೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ವಿಜಯಲಕ್ಷ್ಮಿ ಕೆಂಪೇಗೌಡ ಪಾಟೀಲ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕಲ್ಲಪ್ಪ ಪುಡಕಲಕಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಜಾನನ ಮನ್ನಿಕೇರಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಶಾರದಾ ಕಿರೇಸೂರ, ಜಿ.ಪಂ. ಯೋಜನಾ ನಿರ್ದೇಶಕ ಬಿ.ಎಸ್.ಮೂಗನೂರಮಠ, ಶಿಕ್ಷಣಾಧಿಕಾರಿ ಎನ್.ಕೆ.ಸಾವ್ಕಾರ, ಪ್ರಮೋದ ಮಹಾಲೆ, ಕ್ಷೇತ್ರ ಶಿಕ್ಷಣಾಧಿಕಾರಿ ಅಕ್ಬರ್ ಅಲಿ ಖಾಜಿ, ಉಮಾದೇವಿ ಬಸಾಪೂರ, ಸ್ವಾಮಿ ವಿವೇಕಾನಂದ ಯುತ್ ಮೂವ್ಮೆಂಟ್ನ ಜಯಂತ್ ಕೆ.ಎಸ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ರಾಯಾಪುರದ ಕೆಎಲ್ಇ ಪ್ರೌಢಶಾಲೆಯ ಮಕ್ಕಳು ಪ್ರಾರ್ಥಿಸಿದರು. ಶಿವಲೀಲಾ ಕಳಸಣ್ಣವರ ನಿರೂಪಿಸಿದರು.
ಹುಬ್ಬಳ್ಳಿಯ ಚೇತನ ಪಬ್ಲಿಕ್ ಶಾಲೆಗೆ ಪ್ರಥಮ ಸ್ಥಾನ: ರಸಪ್ರಶ್ನೆಯ ಸ್ಪರ್ಧೆಯಲ್ಲಿ ಜಿಲ್ಲೆಯ 193 ಶಾಲೆಗಳಿಂದ 386 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮೊದಲ ಸುತ್ತಿನಲ್ಲಿ ಲಿಖಿತ ಪರೀಕ್ಷೆಯ ಮೂಲಕ ಅತಿಹೆಚ್ಚು ಅಂಕ ಪಡೆದ ಆರು ತಂಡಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಯಿತು. ಅಂತಿಮ ಸುತ್ತಿನಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹುಬ್ಬಳ್ಳಿಯ ಚೇತನ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿ, 10 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪತ್ರ ಪಡೆದರು. ಧಾರವಾಡದ ಜೆಎಸ್ಎಸ್ ಮಂಜನಾಥೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಗಳಿಸಿ 07 ಸಾವಿರ ರೂ.ನಗದು ಬಹುಮಾನ ಗಳಿಸಿದರು. ಜೆಎಸ್ಎಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತೃತೀಯ ಸ್ಥಾನದೊಂದಿಗೆ 05 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ಪಡೆದರು. ಬೆಂಗಳೂರಿನ ವಾಲ್ನಟ್ ಸಂಸ್ಥೆಯ ಅನಘ ಶ್ರೀಧರ ಹಾಗೂ ವಿಂಧ್ಯಾ ಕ್ವಿಜ್ ನಿರ್ವಹಿಸಿದರು