ಹಾಸನ:ಮುಂಬರುವ ಲೋಕಸಭಾ ಚುನಾವಣೆಯನ್ನು ಲೋಪರಹಿತವಾಗಿ ನಿರ್ವಹಿಸುವಂತೆ ಜಿಲ್ಲಾ ಚುನಾವಣಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ಎಲ್ಲಾ ಸಹಾಯಕ ಚುನಾವಣಾಧಿಕಾರಿಗಳು ಮತ್ತು ತಹಶೀಲ್ದಾರರ ಸಭೆ ನಡೆಸಿದ ಅವರು ಈವರೆಗೆ ಅತ್ಯತ್ತಮವಾಗಿ ಹಾಗೂ ಸಾಂಘಿಕವಾಗಿ ಚುನಾವಣಾ ಕರ್ತವ್ಯ ನಡೆಯುತ್ತಿದೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾಳಜಿ ಮತ್ತು ಶ್ರಮವಹಿಸಿ ಕೆಲಸ ನಿರ್ವಹಿಸಿ ಎಂದರು.
ಚೆಕ್ ಪೋಸ್ಟ್ಗಳಲ್ಲಿ ವ್ಯವಸ್ಥಿತ ತಪಾಸಣೆ ನಡೆಯಬೇಕು, ಹಾಸನ ತಾಲ್ಲೂಕಿನಂತೆ ಇತರ ತಾಲ್ಲೂಕುಗಳಲ್ಲಿಯೂ ವೆಬ್ ಕಾಸ್ಟಿಂಗ್ ಮೂಲಕ ಚೆಕ್ ಪೋಸ್ಟ್ಗಳ ಮೇಲೆ ನಿಗಾವಹಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿ ಹೇಳಿದರು.
ಸೆಕ್ಟರ್ ಅಧಿಕಾರಿಗಳು ಫ್ಲೈಂಯಿಂಗ್ ಸ್ಕಾರ್ಡ್ಗಳ ಸ್ಟಾಟಿಕ್, ಸರ್ವೆಲೆನ್ಸ್ ತಂಡಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹೆಚ್ಚಿನ ನಿಗಾವಹಿಸಬೇಕು. ತಮ್ಮ ಸಂಚಾರ ಹಾಗೂ ತಪಾಸಣೆ ನಡೆಸಬೇಕು ಯಾವುದೇ ಅಕ್ರಮಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಎಂದು ಅಕ್ರಂ ಪಾಷ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ ಅವರು ಮಸ್ಟರಿಂಗ್ ಕೇಂದ್ರದಲ್ಲಿ ಆಗಬೇಕಿರುವ ವ್ಯವಸ್ಥೆ, ಸಿಬ್ಬಂದಿ ನಿಯೋಜನೆ, ಸಾರಿಗೆ, ಡಿಮಸ್ಟರಿಂಗ್ಗೆ ಸಿದ್ದತೆಗಳ ಕುರಿತು ಸಲಹೆ ಸೂಚನೆಗಳನ್ನು ನೀಡಿದರು. ಯಾವುದೇ ಗೊಂದಲಗಳು ಇಲ್ಲದಂತೆ ಈ ಪ್ರಕ್ರಿಯೆಗಳನ್ನು ನಡೆಸುವಂತೆ ತಿಳಿಸಿದರು.
ಸಹಾಯಕ ಚುನಾವಣಾಧಿಕಾರಿಗಳು, ತಹಶೀಲ್ದಾರರು ಸಭೆಯಲ್ಲಿ ಹಾಜರಿದ್ದರು.