ಬಾಗಲಕೋಟೆ: ಒಂದು ಕಡೆ ಪ್ರೀತಿಸಿ ಮದುವೆಯಾಗಿದ್ದೇವೆ, ನಮಗೆ ರಕ್ಷಣೆ ಕೊಡಿ ಎಂದು ಪ್ರೇಮಿಗಳು ಮನವಿ ಮಾಡಿಕೊಳ್ಳುತ್ತಿದ್ದರೆ, ಇನ್ನೊಂದು ಕಡೆ ಅನ್ಯಕೋಮಿನ ಯುವಕನ ಜೊತೆ ಮದುವೆಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಯುವತಿಯ ಸಹೋದರ ಎಸ್ಪಿ ಕಚೇರಿಯಲ್ಲಿಯೇ ಕಪಾಳ ಮೋಕ್ಷ ಮಾಡಿದ್ದಾನೆ. ಜೊತೆಗೆ ಯುವತಿಯ ತಂದೆ ಎಸ್ಪಿ ಕಾಲಿಗೆ ಬಿದ್ದು ಒಬ್ಬಳೇ ಮಗಳು ಕಳುಹಿಸಿಕೊಡಿ ಎಂದು ಬೇಡಿಕೊಳ್ಳುತ್ತಿದ್ದು ಬಾಗಲಕೋಟೆಯ ಎಸ್ಪಿ ಕಚೇರಿಯಲ್ಲಿ ಒಂದು ಕ್ಷಣ ಬಿಗಡಾಯಿಸಿದ ಸನ್ನಿವೇಶ ಕಂಡುಬಂತ್ತು.
ಬಾಗಲಕೋಟೆಯ ನವನಗರದ ಸೆಕ್ಟರ್ ನಂ 44ರ ನಿವಾಸಿಗಳಾದ ಈ ಪ್ರೇಮಿಗಳ ಹೆಸರು ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು. ಅಕ್ಕಪಕ್ಕದಲ್ಲಿಯೇ ಇಬ್ಬರ ಮನೆ ಇದ್ದು, ಕಳೆದ ಏಳು ವರ್ಷದಿಂದ ನವೀನ ಪಕ್ಕದ ಮನೆಯ ಮಹಜಬಿನ್ ಅನ್ನು ಪ್ರೀತಿಸುತ್ತಿದ್ದಾನೆ. ಸದ್ಯ ಯುವತಿ ಮಹಜಬಿನ್ಗೆ 19 ವರ್ಷ, ಅಂದರೆ 12 ವರ್ಷದ ಬಾಲ್ಯದಲ್ಲೇ ಇವರಿಬ್ಬರ ನಡುವೆ ಪ್ರೀತಿ ಆರಂಭವಾಗಿದ್ದು, ಈಗ ಪ್ರಾಯದ ಹಂತಕ್ಕೆ ಬಂದು ಮದುವೆ ಕೂಡ ಆಗಿದೆ.
ನವೀನ ಭಜಂತ್ರಿ ಹಾಗೂ ಮಹಜಬಿನ್ ಮಂಟೂರು, ಫೆಬ್ರವರಿ 16ರಂದು ಬಾಗಲಕೋಟೆಯ ಮಲ್ಲಯ್ಯನಗುಡಿಯಲ್ಲಿ ಮದುವೆಯಾಗಿದ್ದಾರೆ. ಆದರೆ ಈ ಮದುವೆಗೆ ಹುಡುಗಿ ಮನೆಯವರ ವಿರೋಧವಿದ್ದು ರಕ್ಷಣೆ ಕೋರಿ ಪ್ರೇಮಿಗಳು ಎಸ್ಪಿ ಮೊರೆ ಹೋಗಿದ್ದರು. ಈ ವೇಳೆ ಮಗಳ ಹಿಂದೆ ಬಂದ ತಂದೆ ಸಲೀಂ ಹಾಗೂ ಸಹೋದರ ಅಹ್ಮದ್ ಅಲಿ ಪ್ರೇಮಿಗಳ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾರೆ. ಯುವತಿಯ ಸಹೋದರ ಅಹ್ಮದ್ ಅಲಿ ಎಸ್ಪಿ ಕಚೇರಿಯಲ್ಲೇ ಸಹೋದರಿಗೆ ಕಪಾಳಮೋಕ್ಷ ಮಾಡಿದ ಘಟನೆ ಕೂಡ ನಡೆಯಿತು.
ಸದ್ಯ ಇಬ್ಬರು ಪ್ರೇಮಿಗಳು ನಾವು ಒಬ್ಬರನ್ನೊಬ್ಬರು ಬಿಟ್ಟು ಬದುಕುವುದಿಲ್ಲ, ನಮಗೆ ರಕ್ಷಣೆ ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಆದರೆ ಎಸ್ಪಿ ಅವರು ರಿಜಿಸ್ಟರ್ ಮದುವೆಯಾಗಿ ರಕ್ಷಣೆ ನೀಡುತ್ತೇವೆ ಎಂದು ಹೇಳಿದ್ದು,ಸದ್ಯ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.