ಯುವಕನ ಮೇಲೆ ಹಲ್ಲೆ ; ಕುಮಟಾದಲ್ಲಿ ಶಾಂತಿ ಭಂಗಕ್ಕೆ ಯತ್ನ;ಕೋಮುಗಲಭೆಗೆ ಹುನ್ನಾರ
ಕುಮಟಾ: ೧೦-೧೫ ಜನರ ಗುಂಪೊಂದು ಏಕಾಎಕಿ ಯುವಕನ ಮೇಲೆ ದಾಳಿ ಮಾಡಿ ಮಾರಣಾಂತಿಕ ಹಲ್ಲೆಗೈದು ಆತನನ್ನು ಪೊಲೀಸ್ ಠಾಣೆಗೆ ಎಳೆದುಕೊಂಡು ಹೋಗಿದ್ದಲ್ಲದೆ ಧಾರ್ಮಿಕ ಕಾರ್ಯಕ್ರಮವೊಂದಕ್ಕೆ ಕಲ್ಲು ಎಸೆದಿದ್ದಾನೆ ಎಂದು ಯುವಕನ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿದ ಘಟನೆ ಶುಕ್ರವಾರ ಕುಮಟಾ ಪೊಲೀಸ್ ಠಾಣೆಯಲ್ಲಿ ಜರಗಿದೆ.
ಘಟನೆಗೆ ಸಂಬಂಧಿಸಿದಂತೆ ಪರ ವಿರೋಧ ಮಾತುಗಳು ಕೇಳಿ ಬರುತ್ತಿದ್ದು ಯುವಕನ ಕುಟುಂಬದವರು ಹಲ್ಲೆ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಕುಪಿತಗೊಂಡ ಸಂಘಪರಿವಾರದ ಮಂದಿ ಶನಿವಾರದಂದು ಕುಮಟಾ ಬಂದ್ ಕರೆ ನೀಡಿದ್ದರು.
ಹಲ್ಲೆಗೊಳಗಾದ ಯುವಕನನ್ನು ಹುಝೈಫಾ ಶೇಕ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ: ಕಳೆದ ೭-೮ ತಿಂಗಳ ಹಿಂದೆ ಹುಝೈಫಾ ಶೇಕ್ ಎಂಬಾತನನ್ನು ಅನ್ಯಕೋಮಿನ ಯುವತಿಯೊಂದಿಗೆ ಇದ್ದುದ್ದನ್ನು ಸಹಿಸದೆ ಕೆಲವರು ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದರು ಎಂದು ತಿಳಿದುಬಂದಿದ್ದು, ಆದರೆ ಯುವತಿ ಮುಸ್ಲಿಮ ಯುವಕನ ಪರ ನಿಂತು ಹಲ್ಲೆ ಮಾಡಿದವರ ಮೇಲೆ ಪ್ರಕರಣ ದಾಖಲಿಸಿದ್ದಳು ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ೯ ಜನರ ದಾಳಿಕೋರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದು ಇತ್ತಿಚೆಗೆ ಅವರು ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವುದಾಗಿ ಸ್ಥಳಿಯರು ತಿಳಿಸಿದ್ದಾರೆ. ಇದೇ ೯ ಜನರ ಗುಂಪು ಹುಝೈಫಾನ ಮೇಲೆ ಸೇಡು ತೀರಿಸಲು ಹೊಂಚುಹಾಕುತ್ತಿದ್ದು ಸೂಕ್ತ ಸಮಯಕ್ಕಾಗಿ ಕಾದಿದ್ದರು ಎನ್ನಲಾಗುತ್ತಿದೆ. ಶುಕ್ರವಾರ ಕುಮಟಾ ನಗರಕ್ಕೆ ಬಂದ ರಾಮ ರಥದ ಸಂದರ್ಭವನ್ನು ಬಳಸಿಕೊಂಡ ದುಷ್ಕರ್ಮಿಗಳು ಯುವಕ ಹುಝೈಫ ನ ಅಂಗಡಿಗೆ ನುಗ್ಗಿ ಅವನನ್ನು ಮನಬಂಧಂತೆ ಥಳಿಸಿದ್ದೂ ಅಲ್ಲದೆ ಆತನ ವಿರುದ್ಧ ಧಾರ್ಮಿಕ ಕಾರ್ಯಕ್ರಮದಲ್ಲಿ ಕೆಟ್ಟದ್ದಾಗಿ ವರ್ತಿಸಿದ ಎಂಬ ಆರೋವನ್ನು ಮಾಡುವುದರೊಂದಿಗೆ ಇಡಿ ನಗರದಲ್ಲಿ ಕೋಮುಗಲಭೆ ಸೃಷ್ಟಿಸು ಹುನ್ನಾರ ನಡೆಸಿದರು ಎಂದೂ ಹೇಳಲಾಗುತ್ತಿದೆ. ಕೆಲ ದುರುಳರು ಇಂತಹ ಶಾಂತಿ ಭಂಗವನ್ನುಂಟು ಮಾಡುವವರನ್ನು ಸಮರ್ಥಿಸಿ ಫೇಸ್ಬುಕ್ ಮತ್ತಿತರ ಸಾಮಾಜಿಕ ಜಾಲಾತಾಣಗಳಲ್ಲಿ ಸಂದೇಶಗಳನ್ನು ಹರಿಬಿಡುವುದರ ಮೂಲಕ ಕುಮಟಾದಲ್ಲಿ ಅಶಾಂತಿಯನ್ನು ಸೃಷ್ಟಿಸುತ್ತಿದ್ದು ಅವರ ವಿರುದ್ಧ ಕೂಡಲೇ ಕ್ರಮಕೈಗೊಳ್ಳಬೇಕೆಂಬ ಸ್ಥಳಿಯರು ಆಗ್ರಹಿಸಿದ್ದಾರೆ.
ರಾಮನವಮಿ ಯಾತ್ರೆಯಲ್ಲಿದ್ದ ಪ್ರತ್ಯಕ್ಷ ಸಾಕ್ಷಿಯೊಬ್ಬರ ಪ್ರಕಾರ ಯಾತ್ರೆ ಮುಗಿದ ನಂತರ ಕೆಲವರು ಹುಝೈಫ ನ ಮುಬೈಲ್ ಅಂಗಡಿಗೆ ನುಗ್ಗಿ ಆತನನ್ನು ಹಿಗ್ಗಾಮುಗ್ಗಾ ಥಳಿಸಿದ್ದು ಆತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಯಾತ್ರೆಗೆ ಚಪ್ಪಲಿ ತೋರಿಸಿ ಅಗೌರವಿಸಿದ್ದಾನೆ ಎಂದು ಸುಳ್ಳು ದೂರನ್ನು ನೀಡಿದ್ದಾರೆ.
ಈ ಕುರಿತಂತೆ ಸಾಹಿಲ್ ಆನ್ಲೈನ್ ನೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಸಂತ್ ರಾವ್ ಪಾಟಿಲ್, ಶುಕ್ರವಾರ ಸಂಜೆ ಎರಡು ಗುಂಪಿನವರ ವಿರುದ್ಧ ಪ್ರಕರಣ ದಾಖಲಾಗಿದೆ. (ಹಲ್ಲೆ ಹಾಗೂ ಯಾತ್ರೆಯಲ್ಲಿ ಚಪ್ಪಲಿ ತೋರಿಸಿದ ಪ್ರಕರಣ) ಇಂದು ಪೊಲೀಸರ ಅನುಮತಿ ಇಲ್ಲದೆ ಬೈಕ್ ರ್ಯಾಲಿ ನಡೆಸಿದ್ದು ಬೈಕ್ ರ್ಯಾಲಿ ಮಾಡಿದವರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.