ಉದ್ಯೋಗಕ್ಕೆ ಪ್ರತಿಯಾಗಿ ಜಮೀನು ಪಡೆದುಕೊಂಡ ಪ್ರಕರಣ; ಸಿಬಿಐಯಿಂದ ರಾಬ್ರಿ ದೇವಿ ವಿಚಾರಣೆ
ಪಟ್ನಾ: ಭ್ರಷ್ಟಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಸಿಬಿಐ ತಂಡವೊಂದು ಸೋಮವಾರ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿಯನ್ನು ಪಾಟ್ನಾದಲ್ಲಿರುವ ಅವರ ನಿವಾಸದಲ್ಲಿ ವಿಚಾರಣೆ ನಡೆಸಿತು.
“ರಾಬ್ರಿ ದೇವಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗುವುದು ಹಾಗೂ ಇದು ದಾಳಿಯೂ ಅಲ್ಲ, ಶೋಧವೂ ಅಲ್ಲ'' ಎಂದು ಸಿಬಿಐ ಮೂಲಗಳು ಹೇಳಿವೆ. ಇದಕ್ಕಾಗಿ ಸಮಯವನ್ನು ನಿಗದಿಪಡಿಸಲಾಗಿತ್ತು ಎಂಬುದಾಗಿಯೂ ಅದು ಹೇಳಿದೆ.
ರಾಬ್ರಿ ದೇವಿ, ಅವರ ಗಂಡ ಹಾಗೂ ರಾಷ್ಟ್ರೀಯ ಜನತಾ ದಳ ಮುಖ್ಯಸ್ಥ ಲಾಲುಪ್ರಸಾದ್ ಯಾದವ್ ಮತ್ತು ಇತರ 13 ಮಂದಿಯ ವಿರುದ್ಧ ಮೊಕದ್ದಮೆ ದಾಖಲಿಸಿದ ಐದು ತಿಂಗಳ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ರೈಲ್ವೆಯಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಲಾಲು ಪ್ರಸಾದ್ ಯಾದವ್ ಅಭ್ಯರ್ಥಿಗಳಿಂದ ಜಮೀನು ಪಡೆದುಕೊಂಡಿದ್ದಾರೆ ಎನ್ನುವ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸಿವ್ ಅಲಯನ್ಸ್ (ಯುಪಿಎ) ಸರಕಾರದಲ್ಲಿ ಯಾದವ್ ರೈಲ್ವೆ ಸಚಿವರಾಗಿರುವಾಗ ಈ ಹಗರಣ ನಡೆದಿದೆ ಎನ್ನಲಾಗಿದೆ.
ಸಿಬಿಐಯು 2021 ಸೆಪ್ಟೆಂಬರ್ನಲ್ಲಿ ಪ್ರಾಥಮಿಕ ತನಿಖೆ ಆರಂಭಿಸಿತ್ತು ಹಾಗೂ ಕಳೆದ ವರ್ಷದ ಮೇ 18ರಂದು ಮೊದಲ ಮಾಹಿತಿ ವರದಿ (ಎಫ್ಐಆರ್) ದಾಖಲಿಸಿತ್ತು.
ಪ್ರಕರಣ ಸಂಬಂಧ ಯಾದವ್ ಕುಟುಂಬ ಸದಸ್ಯರು ಮತ್ತು ಇತರ ಆರೋಪಿಗಳು ದಿಲ್ಲಿಯ ನ್ಯಾಯಾಲಯಕ್ಕೆ ಹಾಜರಾಗುವ ಒಂದು ವಾರದ ಮೊದಲು ರಾಬ್ರಿ ದೇವಿಯ ವಿಚಾರಣೆ ನಡೆದಿದೆ.
ರಾಬ್ರಿ ದೇವಿ ಪುತ್ರಿ ಮೀಸಾ ಭಾರತಿ ಮತ್ತು ರೈಲ್ವೆಯ ಓರ್ವ ಮಾಜಿ ಜನರಲ್ ಮ್ಯಾನೇಜರ್ ಕೂಡ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ನಾನು ಮೊದಲೇ ಹೇಳಿದ್ದೆ ತೇಜಸ್ವಿ ಯಾದವ್: ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆಯಾದಾಗಲೇ ಇಂಥ ದಾಳಿಗಳನ್ನು ನಾನು ನಿರೀಕ್ಷಿಸಿದ್ದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಹೇಳಿದ್ದಾರೆ. ಸಿಬಿಐಯು ತನ್ನ ತಾಯಿ ರಾಬ್ರಿ ದೇವಿ ಯನ್ನು ವಿಚಾರಣೆಗೆ ಒಳಪಡಿಸಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.
ಇದು ತಪ್ಪ, ಅವಮಾನಕರು ಕೇಜ್ರಿವಾಲ್: ರಾಬ್ರಿ ದೇವಿಯನ್ನು ಸಿಬಿಐ ತನಿಖೆಗೆ ಒಳಪಡಿಸಿರುವುದು “ಅವಮಾನಕರ' ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸೋಮವಾರ ಬಣ್ಣಿಸಿದ್ದಾರೆ. ಇದೊಂದು ಅಭ್ಯಾಸವೇ ಆಗಿ ಹೋಗಿದೆ. ಪ್ರತಿಪಕ್ಷಗಳ ಸರಕಾರಗಳಿಗೆ ಕೆಲಸ ಮಾಡಲು ಅವರು ಬಿಡುವುದಿಲ್ಲ' ಎಂದು ಕೇಜ್ರವಾಲ್ ಹೇಳಿದರು.