ಭಟ್ಕಳ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಸೋಮವಾರ ಭಟ್ಕಳಕ್ಕೆ ಭೇಟಿ ನೀಡಿ ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನೆರೆ ಪ್ರವಾಹದ ವೇಳೆ ಆಯಾ ಗ್ರಾಮ ಪಂಚಾಯತ ಪಿಡಿಓಗಳಿಂದ ಹಾಗೂ ತಳಮಟ್ಟದಿಂದ ಹಾನಿ ಸಂಭವಿಸಿದ ಕುರಿತು ಅಂದಾಜು ವರದಿ ಸಲ್ಲಿಕೆ ಮಾಡಬೇಕು ನಿಖರ ಮಾದರಿಯಲ್ಲಿ ಅಂದಾಜು ವರದಿ ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ಭಟ್ಕಳದಲ್ಲಿ ನಾನು ಈ ಹಿಂದೆ ಕೆಲಸ ನಿರ್ವಹಿಸಿದ್ದು ಇಲ್ಲಿನ ಮಳೆಯ ಪ್ರಮಾಣ ಹೆಚ್ಚಿರುತ್ತವೆ. ಆದರೆ ಕಳೆದ 20 ವರ್ಷದಿಂದ ಇದೇ ಮಳೆ ಪ್ರಮಾಣವಿದ್ದು ಆಗ ಎಂದು ಈ ರೀತಿ ನೆರೆ ಪ್ರವಾಹದ ಉದಾಹರಣೆಗಳಿಲ್ಲವಿದ್ದು, ಈಗ ಅಧಿಕಾರಿಗಳು ಕೆಲವು ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿಗೆ ಸೂಚಿಸಿದ್ದರಿಂದ ಈ ನೆರೆ ಪ್ರವಾಹಕ್ಕೆ ಕಾರಣವಾಗಿದೆ. ಮೊದಲು ಕಟ್ಟಡ ಪರವಾನಿಗೆಗೆ ಅವಕಾಶ ನೀಡುವುದನ್ನು ನಿಲ್ಲಿಸಿ ಈ ಬಗ್ಗೆ ಹೆಚ್ಚಿನ ಗಮನ ವಹಿಸಬೇಕು ಎಂದು ಸೂಚಿಸಿದ ಅವರು ಅಧಿಕಾರಿಗಳು ತಮ್ಮ ಕೆಲಸವನ್ನು ಪಾರದರ್ಶಕತೆಯಿಂದ ಮಾಡಿದಲ್ಲಿ ಜನರ ಕೆಲಸ ಬೇಗ ಆಗಲಿದೆ. ಹಾಗೂ ಉತ್ತಮ ತಂಡ ರಚಿಸಿಕೊಂಡು ಕೆಲಸ ಮಾಡಿ ಈ ಬಾರಿ ಮೊದಲ ಮಳೆಯಲ್ಲಾದ ಅವಾಂತರ ಮುಂದಿನ ಮಳೆಯೊಳಗೆ ಅಧಿಕಾರಿಗಳು ತಮ್ಮ ಕೆಲಸದಲ್ಲಿ ಸುಧಾರಣೆ ಕಂಡುಕೊಂಡು ತೆಗೆದುಕೊಳ್ಳಬೇಕಾದ ಎಲ್ಲಾ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು. ಹಾನಿ ಅಂದಾಜಿನಲ್ಲಿ ಅಧಿಕಾರಿಗಳು ಸರಿಯಾದ ಪ್ರಮಾಣದಲ್ಲಿ ಸರ್ವೇ ಕಾರ್ಯ ಮಾಡಬೇಕಾಗಿದೆ. ಒಂದು ಸೇತುವೆಯ ತಡೆಗೋಡೆಯ ಕಂಬಕ್ಕೆ ಹಾನಿ ಸಂಭವಿಸಿದ್ದಲ್ಲಿ ಅದರ ನಷ್ಟವಷ್ಟೇ ವರದಿ ಮಾಡದೇ ಅದರ ಪುನರ ನಿರ್ಮಾಣದ ವೆಚ್ಚವನ್ನು ಬರೆದು ಸೇತುವೆಗೆ ಯಾವುದೇ ನಷ್ಟ ಸಂಭವಿಸದ ಹಾಗೇ ಮಾಡಬೇಕೆಂದು ತಿಳಿಸಿದರು.
ಪುರಸಭೆ ವ್ಯಾಪ್ತಿಯ ಕರಾವಳಿ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ಸುಸಜ್ಜಿತ ಹೊಸ ಮೀನು ಮಾರುಕಟ್ಟೆಗೆ ಹಳೆ ಮೀನು ಮಾರುಕಟ್ಟೆಯ ಮಹಿಳಾ ಮೀನು ವ್ಯಾಪಾರಿಗಳ ಸ್ಥಳಾಂತರ ಬಗ್ಗೆ ಪುರಸಭೆ ಮುಖ್ಯಾಧಿಕಾರಿಗೆ ಪ್ರಶ್ನಿಸಿದ್ದು ಈ ಬಗ್ಗೆ ವಸ್ತು ಸ್ಥಿತಿಯ ಬಗ್ಗೆ ವಿವರಿಸಿದ ಮುಖ್ಯಾಧಿಕಾರಿಗಳು ಮಹಿಳಾ ಮೀನು ವ್ಯಾಪಾರಿಗಳು ಹೊಸ ಮಾರುಕಟ್ಟೆಯಲ್ಲಿ ಮೂಲಭೂತ ಸೌಕರ್ಯವಿಲ್ಲ ಹಾಗೂ ವ್ಯಾಪಾರಕ್ಕೆ ಜನರು ಬರುದಿಲ್ಲ ಎಂಬ ಕಾರಣಕ್ಕೆ ಸ್ಥಳಾಂತರಕ್ಕೆ ಒಪ್ಪುತ್ತಿಲ್ಲ ಎಂದು ತಿಳಿಸಿದರು. ಈ ಬಗ್ಗೆ ಅವರ ಸಮುದಾಯದ ಮೀನುಗಾರ ಮುಖಂಡರನ್ನು ಸಹಾಯಕ ಆಯುಕ್ತರ ಅಧ್ಯಕ್ಷತೆಯಲ್ಲಿ ಸಭೆಯನ್ನು ನಡೆಸಿ ಚರ್ಚಿಸಿ ಒಂದು ಸೂಕ್ತ ನಿರ್ಣಯವನ್ನು ತೆಗೆದುಕೊಂಡು ಅದುವೇ ಅಂತಿಮ ನಿರ್ಧಾರವೆಂದು ತಿಳಿಸಿ ಮಹಿಳಾ ಮೀನು ವ್ಯಾಪಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸ್ಥಳಾಂತರ ಕಾರ್ಯಕ್ಕೆ ಮುಂದಾಗಿ ಇಲ್ಲವಾದಲ್ಲಿ ನಮ್ಮ ಅಧ್ಯಕ್ಷತೆಯಲ್ಲಿಯೆ ಸಭೆ ಏರ್ಪಡಿಸಿ ಸಮಸ್ಯೆಗೆ ಇತ್ಯರ್ಥ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಇನ್ನುಳಿದಂತೆ ಪುರಸಭೆ ಸಂಬಂಧಿತ ಆಡಳಿತಾತ್ಮಕ ಕೆಲಸ ಹಾಗೂ ಕೆಲವೊಂದು ಶಿಸ್ತುಬದ್ಧ ಕಾರ್ಯ ಆಗಬೇಕಾಗಿರುವ ಬಗ್ಗೆ ಮುಂದಿನ ದಿನದಲ್ಲಿ ಬಂದು ಸಭೆ ನಡೆಸಲಿದ್ದೇವೆ ಎಂದು ಹೇಳಿದ ಅವರು ನೈಸರ್ಗಿಕ ವಿಕೋಪದ ಹಿನ್ನೆಲೆಯಲ್ಲಿ ಶಾಲಾ ಮಕ್ಕಳಿಗೆ ಯಾವತ್ತು ಬೇಕಿದ್ದು ರಜೆ ನೀಡಿ ಹಿಂದಿನ ದಿನವೇ ರಜೆ ಘೋಷಣೆಯನ್ನು ಕೈಗೊಳ್ಳಿ ಆದರೆ ರಜೆಯನ್ನು ಬೇರೆ ದಿನದಂದು ಹೊಂದಾಣಿಕೆ ಮಾಡಿಕೊಂಡು ಸರಿ ದೂಗಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ ಮುಲ್ಲಾ, ಮಳೆಯಿಂದಾಗಿ ತಾಲೂಕಿನಲ್ಲಾದ ಒಟ್ಟು ನಷ್ಟದ ವರದಿ ಒಪ್ಪಿಸಿದರು. ಈ ಪೈಕಿ 10.50 ಲಕ್ಷ ರೂ.ದಷ್ಟು ಪುರಸಭೆಯ ರಸ್ತೆಗಳಿಂದ ಹಾನಿಯಾಗಿದ್ದು ಹೆಸ್ಕಾಂ ಇಲಾಖೆಯಿಂದ ಒಟ್ಟು 92 ವಿದ್ಯುತ್ ಕಂಬ ಹಾನಿಯಾಗಿದ್ದು 38.60 ಲಕ್ಷ ರೂ. ನಷ್ಟ ಉಂಟಾಗಿದೆ. ಇನ್ನು ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ 12 ರಸ್ತೆಗಳಲ್ಲಿ 4.85 ಕಿ.ಮೀ. ರಸ್ತೆ ಹಾಳಾಗಿದ್ದು 85.50 ಲಕ್ಷ ಹಾಗೂ ಶಿಕ್ಷಣ ಇಲಾಖೆಯ ವ್ಯಾಪ್ತಿಯ 16 ಶಾಲೆಗಳಿಗೆ ನಷ್ಟ ಉಂಟಾಗಿ ಒಟ್ಟು 40.20ಲಕ್ಷ ಹಾನಿ ಅಂದಾಜಿಸಲಾಗಿದೆ. ಒಟ್ಟು 174.80 ಲಕ್ಷ ರೂ. ಸಂಭವಿಸಿದ್ದರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು.
ಪಟ್ಟಣ ವ್ಯಾಪ್ತಿಯ ಮಣ್ಕುಳಿ, ಆಜಾದ ನಗರ ಹಾಗೂ ರಂಗೀನಕಟ್ಟಾ ವ್ಯಾಪ್ತಿಯಲ್ಲಿ ನೀರು ನುಗ್ಗಿದ ಸಮಸ್ಯೆ ಉಂಟಾಗಿದೆ ಇದಕ್ಕೆ ಐ.ಆರ್.ಬಿ. ಕಂಪನಿಯ ಚರಂಡಿ ಅಪೂರ್ಣ ಕಾಮಗಾರಿ ಹಾಗೂ ನೀರಿನ ಹರಿಯುವಿಕೆಗೆ ಮೂಢಭಟ್ಕಳ ಹೊಳೆಯಲ್ಲಿನ ಹೂಳು ತುಂಬಿ ತಡೆಗೋಡೆ ರೀತಿಯಲ್ಲಿ ನಿರ್ಮಾಣವಾಗಿದೆ ನೆರೆ ಪ್ರವಾಹಕ್ಕೆ ಕಾರಣವಾಗಿದೆ ಎಂದು ಹೇಳಿದ ಅವರು ಈ ಬಗ್ಗೆ ಸ್ಥಳ ಪರಿಶೀಲನೆ ಕೈಗೊಂಡು ಐ.ಆರ್.ಬಿ. ಇಂಜಿನಿಯರ ಅವರಿಗೆ ಹೂಳು ತೆಗೆಯುವಂತೆ ತಿಳಿಸಲಾಗಿದೆ ಮಣ್ಕುಳಿ ವ್ಯಾಪ್ತಿಯಲ್ಲಿ ಒಟ್ಟು 28 ಮನೆಗಳ ನೆರೆ ಪ್ರವಾಹ ಸರ್ವೇ ಕಾರ್ಯ ನಡೆಸಲಾಗಿದ್ದು, ನೆರೆ ಪ್ರವಾಹದ ವೇಳೆ ಗಂಜಿಕೇಂದ್ರಯನ್ನು ತಾಲೂಕಾಢಳಿತದಿಂದ ತೆರೆಯಲಾಗಿದ್ದು ಯಾವದೇ ಸಂತ್ರಸ್ಥರು ಗಂಜಿಕೇಂದ್ರಕ್ಕೆ ಬಂದಿಲ್ಲವಾಗಿದೆ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಈ ಸಂಧರ್ಭದಲ್ಲಿ ತಹಸೀಲ್ದಾರ ವಿ.ಪಿ.ಕೊಟ್ರಳ್ಳಿ ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.