ಭಟ್ಕಳ: ಮುಖ್ಯಾಧಿಕಾರಿ ದೇವರಾಜ್ ಅಧ್ಯಕ್ಷತೆಯಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಪುರಸಭಾ ಸಭಾಭವನದಲ್ಲಿ ಸಭೆ ನಡೆಯಿತು.
ಪ್ಲಾಸ್ಟಿಕ್ ನಿಷೇಧದ ಕುರಿತು ಕಲ್ಯಾಣ ಮಂಟಪಗಳಲ್ಲಿ ದೊಡ್ಡದಾಗಿ ಬೋರ್ಡ್ ಹಾಕಬೇಕು. ಕಲ್ಯಾಣ ಮಂಟಪಗಳಲ್ಲಿ ಉತ್ಪತ್ತಿಯಾಗವ ಕಸದಲ್ಲಿ ಒಣಕಸ ಮತ್ತು ಹಸಿ ಕಸವನ್ನು ಬೇರ್ಪಡಿಸಬೇಕು ಹಾಗೂ ಒಳಚರಂಡಿ ಸಂಪರ್ಕದ ಶುಲ್ಕಗಳನ್ನು ಕಾಲಕಾಲಕ್ಕೆ ಪುರಸಭೆಗೆ ತುಂಬ ಬೇಕು ಎಂದೂ ಸೂಚಿಸಲಾಯಿತು.
ಸಭೆಯಲ್ಲಿದ್ದ ವರ್ತಕರ ಸಂಘದ ಪ್ರತಿನಿಧಿಗಳು ಅಂಗಡಿಕಾರರಿಗೆ ಪ್ಲಾಸ್ಟಿಕ್ ಬಳಕೆ ನಿಷೇಧಿಸುವಂತೆ ತಿಳಿಸಲೂ ಕೂಡಾ ಕೋರಲಾಯಿತು. ಪರಿಸರ ಅಭಿಯಂತ ವೆಂಕಟೇಶ ನಾವಡಾ ಮಾತನಾಡಿ ಪ್ಲಾಸ್ಟಿಕ್ ಬ್ಯಾನ್ ಆಗಿದ್ದು ಬಳಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ. ನಾವು ಅಂಗಡಿಗಳನ್ನು ಪರಿಶೀಲಿಸುವಾಗ ಪ್ಲಾಸ್ಟಿಕ್ ಬಳಸುತ್ತಿರುವುದು ಕಂಡು ಬಂದರೆ ಅವುಗಳನ್ನು ವಶಕ್ಕೆ ಪಡೆದು ಸೂಕ್ತ ದಂಡ ವಿಧಿಸಲಾಗುವುದು ಅಲ್ಲದೇ ಅಂಗಡಿಕಾರರ ಮೇಲೆ ಪ್ರಕರಣ ದಾಖಲಿಸಲಾಗುವುದು. ಅಲ್ಲದೇ ಪ್ರತಿಯೊಬ್ಬ ಅಂಗಡಿಕಾರರೂ ಪುರಸಭೆಯಿಂದ ಲೈಸನ್ಸ್ ಪಡೆಯುವುದು ಕಡ್ಡಾಯವಾಗಿದ್ದು ಪ್ರತಿಯೊಬ್ಬರೂ ಲೈಸನ್ಸ್ ಪಡೆಯಬೇಕು ಎಂದು ಸೂಚಿಸಿದರು.
ವರ್ತಕರ ಸಂಘದ ಸದಸ್ಯ ಎಂ.ಎಸ್. ಮೊಹತೆಶಂ ಮಾತನಾಡಿ ಈ ರೀತಿಯಾಗಿ ಬ್ಯಾನ್ ಮಾಡಿದ ಪ್ಲಾಸ್ಟಿಕ್ ಬಳಸದಂತೆ ತಿಳಿಸುವುದಕ್ಕಿಂತ ಅದರ ಉತ್ಪಾದನೆಯನ್ನೇ ಬಂದ್ ಮಾಡಬೇಕು. ತಯಾರಿಕೆ ಹಂತದಲ್ಲಿಯೇ ಅವುಗಳನ್ನು ನಿಷೇಧಿಸಿದಲ್ಲಿ ಉಪಯೋಗಿಸುವ ಪ್ರಶ್ನೆಯೇ ಉದ್ಭವಿಸದು ಎಂದು ಸಲಹೆ ನೀಡಿದರು. ಇನ್ನೋರ್ವ ಸದಸ್ಯ ಪದ್ಮನಾಭ ಪೈ ಮಾತನಾಡಿ ವರ್ತಕರು ಈಗಾಗಲೇ ಪ್ಲಾಸ್ಟಿಕ್ ಚೀಲದ ಬದಲಿಗೆ ಬಟ್ಟೆ ಚೀಲಗಳನ್ನು ಬಳಸುತ್ತಿದ್ದೇವೆ. ಸಾರ್ವಜನಿಕರಲ್ಲಿಯೂ ಈ ರೀತಿಯ ತಿಳಿವಳಿಕೆ ಮೂಡಿಸಿ ಬಳಸದಂತೆ ಮನವೊಲಿಸುವ ಕಾರ್ಯವಾಗಬೇಕು ಎಂದರು.
ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್. ನಾಯ್ಕ ಮಾತನಾಡಿ ನಾವು ಪುರಸಭೆಯೊಂದಿಗೆ ಪ್ಲಾಸ್ಟಿಕ್ ನಿಷೇಧದ ಕುರಿತು ಎಲ್ಲಾ ರೀತಿಯ ಸಹಕಾರ ನೀಡಲು ತಯಾರಿದ್ದೇವೆ ಎಂದರು.
ವರ್ತಕರು, ಕಲ್ಯಾಣ ಮಂಟಪಗಳ ಮಾಲೀಕರು ಸೇರಿದಂತೆ ನಾಗರಿಕರು ಭಾಗವಹಿಸಿದ್ದರು.
ಹಿರಿಯ ಆರೋಗ್ಯ ಸಹಾಯಕಿ ಸುಜಯಾ ಸೋಮನ್ ಸ್ವಾಗತಿಸಿದರು. ಗಣೇಶ ಭಟ್ಟ ವಂದಿಸಿದರು