• ಕನ್ನಡ ಬಾಷಾ ಕಲಿಕೆ ಒತ್ತು ನೀಡಲು ಸಲಹೆ
ಭಟ್ಕಳ: ಇಲ್ಲಿನ ಪ್ರತಿಷ್ಠಿತ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲೆಯ ಡಾ.ಎಂ.ಟಿ.ಹಸನ್ ಬಾಪಾ ಸಭಾಂಗಣದಲ್ಲಿ ಗುರುವಾರ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ್ ನಾಯ್ಕ, ಮಾತೃಭಾಷೆ ಹುಟ್ಟಿನಿಂದ ಕೊನೆಯವರೆಗೂ ವ್ಯಕ್ತಿಯ ಒಡನಾಡಿಯಾಗಿ ಅವನ ಸವಾರ್ಂಗೀಣ ಪ್ರಗತಿಗೆ ಕಾರಣ. ಭಾರತ ಒಂದು ಬಹುಸಂಸ್ಕೃತಿಯ ದೇಶ. ಇಲ್ಲಿ ಅನೇಕ ಭಾಷೆಗಳನ್ನಾಡುವ ಜನರಿದ್ದಾರೆ. ಒಂದೊಂದು ಭಾಷೆಯೂ ಒಂದೊಂದು ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ. ಹೆಚ್ಚು ಭಾಷೆಯನ್ನು ಕಲಿತಷ್ಟೂ ನಾವು ಆ ಭಾಷೆಯ ಮೂಲಕ ಜನರೊಂದಿಗೆ ಬೆಸೆದುಕೊಳ್ಳಬಹುದು. ಭಾಷೆಗೆ ಎಲ್ಲರನ್ನು ಒಗ್ಗೂಡಿಸುವ ಶಕ್ತಿಯಿದೆ. ಉರ್ದು ಮಾತೃಭಾಷೆಯಾಗಿ ಹೊಂದಿರುವ ಮಕ್ಕಳು ಕನ್ನಡವನ್ನು ಹೆಚ್ಚು ಹೆಚ್ಚು ಬಳಸುವ ಮೂಲಕ ಆ ಭಾಷೆಯನ್ನು ಕಲಿಯಬೇಕು ಎಂದು ಕರೆ ನೀಡಿದ ಅವರು, ಈ ನೆಲೆಯಲ್ಲಿ ಅಂತರಾಷ್ಟ್ರೀಯ ಮಾತೃಭಾಷಾ ದಿನಾಚರಣೆಯು ನಮ್ಮ ಮಾತೃಭಾಷೆಯ ಬಗೆಗೆ ಅಭಿಮಾನದ ಜೊತೆಗೆ ಉಳಿದೆಲ್ಲ ಭಾಷೆಗಳನ್ನು ಗೌರವಿಸುವ ಭಾವನೆಯನ್ನು ಮೂಡಿಸುವಂತಾಗಲಿ ಎಂದರು.
ನಂತರ ಮಾತನಾಡಿದ ಅಂಜುಮನ್ ಪದವಿ ಪೂರ್ವ ಕಾಲೇಜಿನ ಉರ್ದು ವಿಭಾಗದ ಮುಖ್ಯಸ್ಥ ಪ್ರೋ.ರವೂಫ್ ಆಹ್ಮದ್ ಸವಣೂರು, ಬದುಕಲು ಭಾಷೆಗಳ ಅಗತ್ಯವಿಲ್ಲ. ಆದರೆ ಒಬ್ಬರು ಇನ್ನೊಬ್ಬರನ್ನು ಅರ್ಥೈಸಿಕೊಳ್ಳಲು, ಭಾವನೆಗಳು ಹಂಚಿಕೊಳ್ಳಲು ಭಾಷೆಗಳನ್ನು ಮಾಧ್ಯಮವನ್ನಾಗಿ ಬಳಸಿಕೊಳ್ಳಲಾಗುತ್ತದೆ. ಭಾಷೆಗಳ ಮೂಲಕ ಸಮಾಜದಲ್ಲಿ ಸೌಹಾರ್ದತೆ ನಿರ್ಮಾಣವಾಗುತ್ತದೆ. ರಾಜ್ಯ ಭಾಷೆ ಕನ್ನಡ ಅತ್ಯಂತ ಶ್ರೀಮಂತ ಭಾಷೆಯಾಗಿದ್ದು ಕುವೆಂಪು, ತೇಜಸ್ವಿ, ಬೇಂದ್ರೆ ಸೇರಿದಂತೆ ಅನೇಕಾರು ಕನ್ನಡದ ದಿಗ್ಗಜರು ತಮ್ಮ ಚಿಂತನೆಗಳ ಮೂಲಕ ಈ ನಾಡಿನ ಭಾಷೆಯನ್ನು ಶ್ರೀಮಂತಗೊಳಿಸಿದ್ದು ನಾವು ನಮ್ಮ ಮಾತೃಭಾಷೆಯೊಂದಿಗೆ ಕನ್ನಡವನ್ನು ಕಲಿತು ಆ ಭಾಷೆಯ ಸಾಹಿತ್ಯದ ರಸವನ್ನು ಸವಿಯಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಇಸ್ಮಾಯಿಲ್ ಮೊಹತೆಶಮ್, ಶಾಲೆಯಲ್ಲಿ ನಡೆಯುವ ಇಂತಹ ಅನೂನ್ಯ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಭಾಷಾ ಕಲಿಕೆಗೆ ಒತ್ತು ನೀಡಿ ಪ್ರಾದೇಶಿಕ ಭಾಷೆಯಾದ ಕನ್ನಡವನ್ನು ಕಲಿಯುವುದರ ಕಡೆಗೆ ಹೆಚ್ಚಿನ ಗಮನವನ್ನು ಕೇಂದ್ರೀಕರಿಸಬೇಕೆಂದು ಅವರು ಕರೆ ನೀಡಿದರು.
ಶಾಲೆಯ ಪ್ರಾಂಶುಪಾಲೆ ಫಹಮಿದಾ ಮುಲ್ಲಾ ಪ್ರಸ್ತಾವಿಕವಾಗಿ ಮಾತನಾಡಿದರು. ಹಿರಿಯ ಶಿಕ್ಷಕ ಮುಹಮ್ಮದ್ ರಝಾ ಮಾನ್ವಿ ಸ್ವಾಗತಿ ಅತಿಥಿಗಳನ್ನು ಪರಿಚಯಿಸಿದರು. ಶಿಕ್ಷಕಿ ಮಾಹೆ ಜಬೀನ್ ಕಾರ್ಯಕ್ರಮ ನಿರೂಪಿಸಿದರೆ ಅಬ್ದುಲ್ಲಾ ರಬಿ ಧನ್ಯವಾದ ಅರ್ಪಿಸಿದರು.
ಆಡಳಿತ ಮಂಡಳಿ ಸದಸ್ಯ ಸೈಯ್ಯದ್ ಗುಫ್ರಾನ್ ಲಂಕಾ, ಕಾರ್ಯದರ್ಶಿ ಅನಮ್ ಆಲಾ ಎಂ.ಟಿ ವೇದಿಕೆಯಲ್ಲಿ ಉಪಸ್ತಿತರಿದ್ದರು.