ಭಟ್ಕಳ: ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಹೆಸ್ಕಾಂ ವತಿಯಿಂದ ವಿದ್ಯುತ್ ಬಳಕೆಯಲ್ಲಿ ಕೈಗೊಳ್ಳಬೇಕಾದ ಸುರಕ್ಷತಾ ಸಲಹೆಗಳು, ಇಂಧನ ದಕ್ಷತೆ ಹಾಗೂ ಉಳಿತಾಯದ ಅಂಗವಾಗಿ ಎಲ್.ಇ.ಡಿ ಬಳಕೆಯ ಪ್ರಯೋಜನ ಸೌರಶಕ್ತಿ ಬಳಸುವ ಕುರಿತಂತ ಇಲ್ಲಿನ ಸಾಗರ ರಸ್ತೆಯಲ್ಲಿರುವ ಕೆ.ಟಿ.ಸಿಎಲ್. ಮತ್ತು ಹೆಸ್ಕಾಂ ಸಿಬ್ಬಂದಿಗಳ ಸಭಾಭವನದಲ್ಲಿ ಗುರುವಾರ ಕಾರ್ಯಾಗಾರ ನಡೆಯಿತು.
ಹೆಸ್ಕಾಂ ಭಟ್ಕಳ ವಿಭಾಗದ ಸಹಾಯಕ ಅಭಿಯಂತರ ಮಂಜುನಾಥ್ ನಾಯ್ಕ, ಕಾರ್ಯಾಗಾರದಲ್ಲಿ ವಿದ್ಯುತ್ ಸರಬರಾಜು ಹಾಗೂ ಇಲಾಖೆಯ ಸಿಬ್ಬಂದಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ವಿವರಿಸಿದರು.
ಭಟ್ಕಳದಲ್ಲಿ ಪದೇ ಪದೇ ವಿದ್ಯುತ್ ಕಡಿತ ಕುರಿತಂತೆ ಉಂಟಾಗುವ ಸಮಸ್ಯೆಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ 110ಕೆವಿ ವಿದ್ಯುತ್ ಸಂಗ್ರಹ ಅವಶ್ಯಕತೆಯಿದ್ದು ಈಗಾಗಲೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ರವಾನಿಸಲಾಗಿದೆ. ಈ ಕುರಿತಂತೆ ಸಾರ್ವಜನಿಕರು, ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕುವುದರ ಮೂಲಕ ಅದನ್ನು ಅನುಮೋದನೆಗೊಳಪಡಿಸಬಹುದಾಗಿದೆ ಎಂದ ಅವರು ಮಳೆಗಾಲದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತಿದ್ದು ಕದ್ರಾದಿಂದ ವಿದ್ಯುತ್ ಸರಾಬರಾಜು ಕಡಿತಗೊಂಡಾಗ ನಮಗೆ ಬೇರೆ ಯಾವುದೇ ವ್ಯವಸ್ಥೆ ಇರುವುದಿಲ್ಲಿ. ಆದ್ದರಿಂದಾಗಿ ನಾವುಂದಾ, ಬೈಂದೂರು ಮೂಲಕ ಭಟ್ಕಳಕ್ಕೆ ವಿದ್ಯುತ್ ಸಂಪರ್ಕ ನೀಡಲು ಭಟ್ಕಳದಲ್ಲಿ 110ಕೆವಿ ವಿದ್ಯುತ್ ಘಟಕ ಸ್ಥಾಪಿಸಲು 2010ರಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದ್ದು ಇದುವರೆಗೂ ಕಾರ್ಯಗತವಾಗುತ್ತಿಲ್ಲ. ಈ ಕುರಿತಂತೆ ಜನಪ್ರತಿನಿಧಿಗಳು ಸರ್ಕಾರದ ಮಟ್ಟದಲ್ಲಿ ಪ್ರಯತ್ನವನ್ನು ತೀವ್ರಗೊಳಿಸುವುದರ ಮೂಲಕ ಭಟ್ಕಳದ ವಿದ್ಯುತ್ ಸಮಸ್ಯೆಯನ್ನು ಪರಿಹರಸಬೇಕಾಗಿದೆ ಎಂದರು. ಮುರುಡೇಶ್ವರ ವಿಭಾಗದ ಹೆಸ್ಕಾಂ ಅಭಿಯಂತರ ಶಿವಾನಂದ ನಾಯ್ಕ, ನಗರ ವಿಭಾಗದ ಸಹಾಯಕ ಅಭಿಯಂತರ ಶ್ರೀಕಾಂತ್ ನಾಯ್ಕ, ರಮೇಶ ಮೇಸ್ತಾ ಕಾರ್ಯಾಗಾರದಲ್ಲಿ ಮಾತನಾಡಿದರು.