ಭಟ್ಕಳ: ನಗರದ ಖ್ಯಾತ ವೈದ್ಯ, ಹಾಗೂ ಇಲ್ಲಿನ ಪ್ರತಿಷ್ಟಿತ ಅರ್ಬನ್ ಕೋ-ಅಪರೇಟಿವ್ ಬ್ಯಾಂಕಿನ ಮಾಜಿ ಅಧ್ಯಕ್ಷರಾಗಿದ್ದ ಡಾ.ಜಲಾಲುದ್ದೀನ್ (೮೫) ಗುರುವಾರ ಬೆಳಿಗ್ಗೆ ನಿಧನರಾದರು.ಇವರು ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ೪ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧುಬಳಗನ್ನು ಅಗಲಿದ್ದಾರೆ.
ಕಳೆದ ೫೩ ವರ್ಷಗಳ ಸುದೀರ್ಘ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು ಭಟ್ಕಳ ತಾಲೂಕಿನ ಜನಪ್ರೀಯ ವ್ಯಕ್ತಿಯಾಗಿದ್ದರು. ಭಟ್ಕಳ ತಾಲೂಕು ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸೇವೆ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಇವರು ನಂತರ ಸರ್ಕಾರಿ ಹುದ್ದೆಯನ್ನು ತ್ಯಜಿಸಿ ತಮ್ಮದೆ ಸ್ವಂತ ಕ್ಲಿನಿಕ್ ಸ್ಥಾಪಿಸಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡರು. ನಂತರ ರಾ.ಹೆ. ೬೬ರಲ್ಲಿ ನಿಷಾತ್ ನರ್ಸಿಂಗ್ ಹೋಂ ಸ್ಥಾಪಿಸಿ ತಮ್ಮ ಸೇವಾ ಕಾರ್ಯವನ್ನು ವಿಸ್ತರಿಸಿಕೊಂಡಿದ್ದರು. ಭಟ್ಕಳ ವೈದ್ಯಕೀಯ ಸಂಘದ ಅಧ್ಯಕ್ಷರಾಗಿಯೂ ಇವರು ಹಲವು ವರ್ಷಗಳ ಕಾಲ ಸೇವೆಸಲ್ಲಿದ್ದಾರೆ. ಇವರ ಇಬ್ಬರು ಪುತ್ರರು ವ್ಯದ್ಯರಾಗಿದ್ದು ಡಾ.ಸಮಿಯುಲ್ಲಾ ನಿಷಾತ್ ನರ್ಸಿಂಗ್ ಹೋಂ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದಾರೆ.
ಗುರುವಾರ ಜಾಮೀಯಾ ಮಸೀದಿಯಲ್ಲಿ ಝೋಹರ್ ನಮಾಝ್ ಬಳಿಕ ಜನಾಝಾ ನಮಾಜ್ ನಿರ್ವಹಿಸಿದ್ದು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದ್ದರು ನಂತರ ಪ್ರಾಚೀನ ಖಬರಸ್ತಾನದಲ್ಲಿ ಇವರ ಅಂತ್ಯಕ್ರಿಯೆ ನೆರವೇರಿಸಲಾಯಿತು.