ಭಟ್ಕಳ: ಅರಣ್ಯ ಭೂಮಿ ಅತಿಕ್ರಮಣ ಸಕ್ರಮ ಅರ್ಜಿಯ ಪುನರ್ಪರಿಶೀಲನೆಗೆ ಸಂಬಂಧಿಸಿದಂತೆ ಮಂಗಳವಾರ ಬೆಳಿಗ್ಗೆ ಅರಣ್ಯ ಅತಿಕ್ರಮಣದಾರರ ಭೇಟಿಗೆ ಸಿಗದ ಸಹಾಯಕ ಆಯುಕ್ತರ ವಿರುದ್ಧ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಅರಣ್ಯ ಅತಿಕ್ರಮಣ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ರವೀಂದ್ರನಾಥ ನಾಯ್ಕ ನೇತೃತ್ವದಲ್ಲಿ ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿದ ಅತಿಕ್ರಮಣದಾರರು ಸಹಾಯಕ ಆಯುಕ್ತರ ಕಚೇರಿಗೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲು ಮುಂದಾದರು. ಆದರೆ ಆ ಹೊತ್ತಿಗಾಗಲೇ ಸಹಾಯಕ ಆಯುಕ್ತ ಸಾಜೀದ್ ಮುಲ್ಲಾ ಹೊನ್ನಾವರಕ್ಕೆ ತೆರಳಿದ್ದರು. ದೂರವಾಣಿಯ ಮೂಲಕ ಆಯುಕ್ತರನ್ನು ಸಂಪರ್ಕಿಸಲಾಯಿತಾದರೂ, ಹೊನ್ನಾವರದಲ್ಲಿ ಅತಿಕ್ರಮಣದಾರರ ಅರ್ಜಿಯ ಪುನರ್ಪರಿಶೀಲನೆ ಕಾರ್ಯ ನಿಮಿತ್ತ ಆಯುಕ್ತರು ಭಟ್ಕಳ ಕಚೇರಿಯಲ್ಲಿ ಲಭ್ಯರಿರುವುದಿಲ್ಲ ತಿಳಿಸಲಾಯಿತು. ಇದರಿಂದ ಕೋಪಗೊಂಡ ಅತಿಕ್ರಮಣದಾರರು ಅಧಿಕಾರಿಗಳ ವಿರುದ್ಧ ವಾಕ್ಪ್ರಹಾರ ನಡೆಸಿ ತಮ್ಮ ಆಕ್ರೋಶವನ್ನು ಹೊರ ಹಾಕಿದರು.
ಅತಿಕ್ರಮಣದಾರರ ಪುನರ್ ಪರಿಶೀಲನಾ ಪ್ರಕ್ರಿಯೆಯು ಸಾಕಷ್ಟು ಗೊಂದಲದಿಂದ ಕೂಡಿದೆ. ಇದನ್ನು ಚರ್ಚಿಸಲು ಸಹಾಯಕ ಆಯುಕ್ತರು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ನಮಗೆ ಕಚೇರಿಗೆ ಬರುವಂತೆ ತಿಳಿಸಿದ್ದರು. ಆದರೆ ಅವರು ಹೊನ್ನಾವರಕ್ಕೆ ತೆರಳಿದ್ದಾರೆ. ವಿಚಿತ್ರ ಎಂದರೆ ಹೊನ್ನಾವರದ ಅತಿಕ್ರಮಣದಾರರಿಗೆ ಭಟ್ಕಳಕ್ಕೆ ಬರುವಂತೆ ನೋಟಿಸ್ ನೀಡಲಾಗಿದೆ. - ನ್ಯಾಯವಾದಿ ರವೀಂದ್ರನಾಥ ನಾಯ್ಕ |
ಈ ಸಂದರ್ಭದಲ್ಲಿ ಮಾತನಾಡಿದ ರವೀಂದ್ರನಾಥ ನಾಯ್ಕ, ಅತಿಕ್ರಮಣದಾರರ ಪುನರ್ ಪರಿಶೀಲನಾ ಪ್ರಕ್ರಿಯೆಯು ಸಾಕಷ್ಟು ಗೊಂದಲದಿಂದ ಕೂಡಿದೆ. ಇದನ್ನು ಚರ್ಚಿಸಲು ಸಹಾಯಕ ಆಯುಕ್ತರು ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ನಮಗೆ ಕಚೇರಿಗೆ ಬರುವಂತೆ ತಿಳಿಸಿದ್ದರು. ಆದರೆ ಅವರು ಹೊನ್ನಾವರಕ್ಕೆ ತೆರಳಿದ್ದಾರೆ. ವಿಚಿತ್ರ ಎಂದರೆ ಹೊನ್ನಾವರದ ಅತಿಕ್ರಮಣದಾರರಿಗೆ ಭಟ್ಕಳಕ್ಕೆ ಬರುವಂತೆ ನೋಟಿಸ್ ನೀಡಲಾಗಿದೆ. ಅರಣ್ಯ ಅತಿಕ್ರಮಣದಾರರ ಅರ್ಜಿ ಸ್ವೀಕರಿಸಿ 12 ವರ್ಷ ಕಳೆದರೂ ಭಟ್ಕಳ ತಾಲೂಕಿನ ತಲಾನ್ ಹಾಗೂ ಬೆಳಲಖಂಡದಲ್ಲಿ ಇಲ್ಲಿಯವರೆಗೂ ಅತಿಕ್ರಮಣ ಭೂಮಿಯ ಜಿಪಿಎಸ್ ನಡೆಸಿಲ್ಲ. ಅರಣ್ಯ ಅತಿಕ್ರಮಣದ ಬಗ್ಗೆ ಸಾಕ್ಷ್ಯಕ್ಕೆ ಒತ್ತಾಯಿಸುವುದು ಕಾನೂನು ಬಾಹೀರ ಕ್ರಮವಾಗಿದೆ. ಇದನ್ನು ಈಗಾಗಲೇ ಗುಜರಾತ್ ಹೈಕೋರ್ಟ ಹಾಗೂ ಬುಡಕಟ್ಟು ಮಂತ್ರಾಲಯವೂ ಒತ್ತಿ ಹೇಳಿದೆ. ಅಧಿಕಾರಿಗಳು ಕಾನೂನು ಮಾನ್ಯ ಮಾಡಿ ಭೂಮಿ ಮಂಜೂರು ಪ್ರಕ್ರಿಯೆ ನಡೆಸಿಕೊಡಬೇಕು. ಅಲ್ಲದೇ ಬ್ರಿಟೀಷರ ಕಾಲದಿಂದ ಅರಣ್ಯ ಭೂಮಿಯನ್ನು ಪಡೆದು ಬದುಕು ಕಟ್ಟಿಕೊಂಡಿದ್ದ ಕುಮ್ರಿ ಮರಾಠಿಗಳು ಅತಂತ್ರರಾಗಿದ್ದು, ಅವರಿಗೆ ನ್ಯಾಯ ದೊರಕಿಸಿಕೊಡಲು ಅಧಿಕಾರಿಗಳು ಮುಂದಾಗಬೇಕು. ಕಂದಾಯ ಭೂಮಿ ಅತಿಕ್ರಮಣ ಸಕ್ರಮಕ್ಕೂ ಕ್ರಮ ಜರುಗಿಸಬೇಕು. ಜನರೊಂದಿಗೆ ಮಾತನಾಡಬೇಕಾಗಿದ್ದ ಅಧಿಕಾರಿಗಳು ತಲೆ ತಪ್ಪಿಸಿಕೊಂಡು ಓಡಾಡುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸಿದರು. ಭಟ್ಕಳ ಅರಣ್ಯ ಅತಿಕ್ರಮಣದಾರರ ಹೋರಾಟ ಸಮಿತಿಯ ಅಧ್ಯಕ್ಷ ರಾಮಾ ಮೊಗೇರ, ಎಫ್.ಕೆ.ಮೊಗೇರ, ರಿಜ್ವಾನ್, ಖಯ್ಯೂಮ್, ಮುನೀರ್, ದೇವರಾಜ ಗೊಂಡ, ಸುಲೇಮಾನ್ ಮೊದಲಾದವರು ಉಪಸ್ಥಿತರಿದ್ದರು.