ಭಟ್ಕಳ: ಇವಿಎಂ ಯಂತ್ರ ತಿರುಚುವುದರ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಈಗ ದೇಶದಲ್ಲಿ ಪ್ರಸ್ತಾವಿತ ಎನ್.ಆರ್.ಸಿ, ಎನ್ಪಿಆರ್ ಹಾಗೂ ಸಿಎಎ ಕಾನೂನು ಜಾರಿಗೊಳಿಸಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದು ಇ.ವಿ.ಎಂ ಎನ್.ಆರ್.ಸಿ, ಸಿಎಎ ವಾಸ್ತವಿಕತೆಯನ್ನು ಜನಾಂದೋಲನದ ಮೂಲಕ ಜನರೆದುರು ತೆರೆದಿಡುವಂತಹ ಇವಿಎಂ, ಸಿಎಎ, ಎನ್.ಆರ್.ಸಿ ಭಾಂಡ ಫೋಡ್ ಪರಿವರ್ತನ್ ಯಾತ್ರಾ ಫೆ.2ರಂದು ಭಟ್ಕಳಕ್ಕೆ ಬರುತ್ತಿದ್ದು ಅಂದು ಸಂಜೆ 4ಗಂಟೆಗೆ ರಾ.ಹೆ.66 ಹೊಟೇಲ್ ವೈಭವ್ ಹಿಂದುಗಡೆ ಇರುವ ಕ್ರೀಕೇಟ್ ಅಕಾಡೆಮಿ ಮೈದಾನದಲ್ಲಿ ಬೃಹತ್ ಜನಾಂದೋಲನ ಸಮಾವೇಶ ನಡೆಸಲಾಗುವುದು ಎಂದು ಭಾರತ ಮುಕ್ತಿ ಮೋರ್ಚಾ ಹಾಗೂ ರಾಷ್ಟ್ರೀಯ ಮೈನಾರಿಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪ್ರೋ.ವಿಲಾಸ್ ಕರಾತ್ ಹೇಳಿದರು.
ಅವರು ಇಂದು ಇಲ್ಲಿನ ಹೊಟೇಲ್ ನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು.
ಬಾಮಸೆಫ್ ರಾಷ್ಟ್ರೀಯ ಅಧ್ಯಕ್ಷ ವಾಮನ್ ಮೆಶ್ರಾಮ್, ರಾಷ್ಟ್ರೀಯ ಲಿಂಗಾಯತ್ ಮೋರ್ಚಾದ ಅಧ್ಯಕ್ಷ ಪೂಣೇಶ್ವರಿ ಸ್ವಾಮಿ ಅಪ್ಪಾ, ರಾಷ್ಟ್ರೀಯ ಮುಸ್ಲಿಮ್ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮೌಲಾನ ಅಬ್ದುಲ್ ಹಮೀದ್ ಅಝ್ಹರಿ, ರಾಷ್ಟ್ರೀಯ ಮೂಲ ನಿವಾಸಿ ಮಹಿಳಾ ಸಂಘದ ವಿಶಾಲ್ ಮೇಶ್ರಾಮ್, ರಾಷ್ಟ್ರೀಯ ಹಿಂದುಳಿದ ವರ್ಗದ ರಾಷ್ಟ್ರೀಯ ಅಧ್ಯಕ್ಷ ವಿಕಾಸ್ ಪಟೇಲ್ ಜನಾಂದೋಲನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿ ವಿಲಾಸ್ ಕರಾತ್ ರಾಷ್ಟ್ರೀಯ ಮಟ್ಟದಲ್ಲಿ ಎಸ್ಸಿ, ಎಸ್ಟಿ, ಓಬಿಸಿ ಹಾಗೂ ಮುಸ್ಲಿಮರನ್ನು ಗುರಿಯಾಗಿಸಿಕೊಂಡು ಕೇಂದ್ರ ಸರ್ಕಾರವು ಕರಾಳ ಕಾನೂನು ಹೇರುತ್ತಿದೆ. ಇದರಿಂದಾಗಿ ದೇಶದ ಶೇ85% ಜನರು ತಮ್ಮ ನಾಗರೀಕತೆಯನ್ನು ಸಾಬೀತು ಪಡಿಸಲು ವಿಫಲರಾಗುತ್ತಾರೆ. ಅವರೆಲ್ಲರನ್ನು ಕೂಡ ದೇಶದಿಂದ ಹೊರಹಾಕುವ ಹುನ್ನಾರ ಕೇಂದ್ರಸರ್ಕಾರಕ್ಕಿದೆ ಎಂದ ಅವರು ಇದರ ವಿರುದ್ಧ ರಾಷ್ಟ್ರವ್ಯಾಪಿ ಜನಾಂದೋಲ ಹಮ್ಮಿಕೊಳ್ಳುವುದರ ಮೂಲಕ ಬಹುಜನ ಕ್ರಾಂತಿ ಮೋರ್ಚಾ ಮತ್ತದರ ಸೋದರ ಸಂಘಟನೆಗಳು ಜೂ.26,2019 ರಂದು ಕಾಶ್ಮೀರ ದಿಂದ ಇವಿಎಂ ಭಾಂಡ ಫೋಡ್ ಪರಿವರ್ತನಾ ಯಾತ್ರೆಯನ್ನು ಆರಂಭಿಸಿದೆ. ಫೆ.2ರಂದು ಭಟ್ಕಳ ತಲುಪುತ್ತಿದ್ದು 2020ರ ಮೇ ತಿಂಗಳಲ್ಲಿ ಅದು ಕನ್ಯಾಕುಮಾರಿಯಲ್ಲಿ ಸಮಾಪ್ತಿಗೊಳ್ಳಲಿದೆ ಎಂದು ವಿವರಿಸಿದ ಅವರು ಫೆ.16 ರಂದು ಬೆಂಗಳೂರಿನಲ್ಲಿ ರಾಜ್ಯದ ಯಾತ್ರೆಯ ಸಮಾರೋಪವಿದೆ ಅಂದು ಲಕ್ಷಾಂತರ ಜನರು ಈ ಸಮಾರೂಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದೂ ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಹುಜನ್ ಕ್ರಾಂತಿ ಮೋರ್ಚಾದ ಮುಖಂಡರಾದ ಶೌಕತ್ ಕತೀಬ್, ಮುನೀರ್ ಎಚ್.ಎಂ ಮತ್ತಿತರರು ಉಪಸ್ಥಿತರಿದ್ದರು.