ಭಟ್ಕಳ: ಮುರುಢೇಶ್ವರಕ್ಕೆ ಬಂದೆ ಪ್ರವಾಸಿಗರಲ್ಲಿ ಓರ್ವ ವ್ಯಕ್ತಿ ಸಮುದ್ರದಲ್ಲಿ ಮುಳುಗಿ ಸಾವನಪ್ಪಿದ್ದು ನಾಲ್ವರನ್ನು ರಕ್ಷಿಸಿದ ಘಟನೆ ರವಿವಾರ ಬೆಳಿಗ್ಗೆ ಜರಗಿದೆ.
ಸಮುದ್ರ ಪಾಲಾದ ವ್ಯಕ್ತಿಯನ್ನು ಬೆಂಗಳೂರಿನ ಮಲ್ಲೇಶ್ವರಂ ನಿವಾಸಿ ರಾಜೀವ್ ನಟರಾಜ್(27) ಎಂದು ಗುರುತಿಸಲಾಗಿದೆ.
ಬೆಂಗಳೂರಿನಿಂದ 11 ಜನರ ಪ್ರವಾಸಿಗರ ತಂಡವು ರವಿವಾರ ಬೆಳಿಗ್ಗೆ ಮುರುಢೇಶ್ವರಕ್ಕೆ ತಲುಪಿದ್ದು ಸಮುದ್ರದಲ್ಲಿ ಈಜಲು ಇಳಿದಿದ್ದಾರೆ. ಸಮುದ್ರದಲ್ಲಿ ಭಾರಿ ಅಲೆಗಳೊಂದಿಗೆ ಈಜಾಡುತ್ತ ಓರ್ವ ವ್ಯಕ್ತಿ ಸಾವನ್ನಪ್ಪಿದರೆ ನಾಲ್ವರನ್ನು ಸ್ಥಳೀಯ ಮೀನುಗಾರರು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೂಡಲೇ ಸ್ಥಳೀಯ ಆರ್.ಎನ್.ಎಸ್. ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಅವರು ಸುರಕ್ಷಿತರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಇಂದು ರವಿವಾರ ಇದ್ದ ಕಾರಣ ಮುರುಡೇಶ್ವರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು. ಸಮುದ್ರಲ್ಲಿ ಈಜುವುದು ಜೀವಕ್ಕೆ ಅಪಾಯ ಎಂಬ ಎಚ್ಚರಿಕೆಯ ಸೂಚನಾ ಫಲಕ ಇದ್ದರೂ ಅದನ್ನು ಲೆಕ್ಕಿಸದೆ ಪ್ರವಾಸಿಗರು ಸಮುದ್ರದಲ್ಲಿ ಈಜಲು ಇಳಿಯುತ್ತಾರೆ. ಪ್ರತಿ ತಿಂಗಳು ಒಂದು ಜೀವವಾದರೂ ಈ ಸಮುದ್ರ ಬಲಿ ತೆಗೆದುಕೊಳ್ಳುತ್ತದೆ ಎಂದು ಸ್ಥಳಿಯರು ಅಭಿಪ್ರಯಿಸಿದ್ದಾರೆ.