ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ, ಬಿಜೆಪಿ-ಶಿಂದೆ ಸಂಪುಟಕ್ಕೆ 9 ಎನ್‌ಸಿಪಿ ಶಾಸಕರ ಸೇರ್ಪಡೆ; ಮಹಾ ವಿಕಾಸ್ ಅಘಾಡಿಗೆ ಆಘಾತ; ಅಜಿತ್ ಪವಾರ್ ಡಿಸಿಎಂ

Source: Vb | By I.G. Bhatkali | Published on 3rd July 2023, 3:29 PM | National News |

ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ರವಿವಾರ ಸಂಭವಿಸಿದ ದಿಢೀರ್ ಬೆಳವಣಿಗೆಯೊಂದರಲ್ಲಿ ಎನ್‌ಸಿಪಿ ನಾಯಕ ಅಜಿತ್ ಪವಾರ್ ತನ್ನ ಬೆಂಬಲಿಗ ಶಾಸಕರೊಂದಿಗೆ ಬಿಜೆಪಿ-ಶಿವಸೇನಾ ಮೈತ್ರಿಕೂಟವನ್ನು ಸೇರಿದ್ದಾರೆ. ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರ ಪಕ್ಷದ 8 ಶಾಸಕರು ಕೂಡಾ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಮಹಾರಾಷ್ಟ್ರ ಸಂಪುಟದಲ್ಲಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಹುದ್ದೆಯನ್ನು ಬಿಜೆಪಿಯ ದೇವೇಂದ್ರ ಫಡ್ನವೀಸ್ ಜೊತೆ ಹಂಚಿಕೊಳ್ಳಲಿದ್ದಾರೆ.

ಹಿರಿಯ ನಾಯಕರಾದ ಛಗನ್ ಭುಜಬಲ್, ಧನಂಜಯ್‌ ಮುಂಡೆ ಹಾಗೂ ದಿಲೀಪ್ ವಾಲ್ ಪಾಟೀಲ್ ಸೇರಿದಂತೆ ಎನ್‌ಸಿಪಿಯ ಎಂಟು ಮಂದಿ ಶಾಸಕರು ಕೂಡಾ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದಲ್ಲಿ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಎನ್‌ಸಿಪಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ದಿಲೀಪ್ ವಾಲ್ ಪಾಟೀಲ್, ಹಸನ್ ಮುಶ್ರೀಫ್, ರಾಮರಾಜೆ ನಿಂಬಾಳ್ಕರ್, ಧನಂಜಯ ಮುಂಡೆ, ಅದಿತಿ ತಟ್ಟರೆ, ಸಂಜಯ ಬಳ್ಕೊಡೆ, ಧರ್ಮರಾವ ಬಾಬಾ ಅತ್ರಂ ಮತ್ತು ಅನಿಲ್ ಭಾಯಿದಾಸ್ ಪಾಟೀಲ್ ಮತ್ತಿತರರು ಪಾಲ್ಗೊಂಡಿದ್ದರು.

ಪ್ರಮಾಣವಚನದ ಆನಂತರ ಮುಂಬೈ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಜಿತ್ ಪವಾರ್, ಬಿಜೆಪಿ-ಶಿವಸೇನಾ ಮೈತ್ರಿಕೂಟವನ್ನು ಸೇರಿರುವುದನ್ನು ಸಮರ್ಥಿಸಿಕೊಂಡರು.

ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶವು ವಿಕಾಸ ಹೊಂದುತ್ತಿದೆ. ಮೋದಿ ಅವರು ವಿದೇಶಗಳಲ್ಲಿಯೂ ಜನಪ್ರಿಯರಾಗಿದ್ದಾರೆ. ಅವರ ನಾಯಕತ್ವವನ್ನು ಪ್ರತಿಯೊಬ್ಬರೂ ಬೆಂಬಲಿಸುತ್ತಿದ್ದಾರೆ ಹಾಗೂ ಶ್ಲಾಘಿಸು ತಿದ್ದಾರೆ. ಬಿಜೆಪಿಯೊಂದಿಗೆ ಕೈಜೋಡಿಸಿ ಮುಂಬರುವ ಲೋಕಸಭಾ ಚುನಾವಣೆ ಹಾಗೂ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯನ್ನು ನಾವು ಎದುರಿಸಲಿ ದ್ದೇವೆ” ಎಂದವರು ಹೇಳಿದರು.

ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡುವ ತನ್ನ ಇಚ್ಛೆಯನ್ನು ಪ್ರಕಟಿಸಿದ ಕೆಲವೇ ದಿನಗಳ ಬಳಿಕ ಅಜಿತ್ ಅವರು ಈ ನಡೆ ಇರಿಸಿದ್ದಾರೆ.

ಮಹಾರಾಷ್ಟ್ರದ 53 ಎನ್‌ಪಿ ಶಾಸಕರ ಪೈಕಿ ಅಜಿತ್ ಪವಾರ್‌ ಅವರು ತನಗೆ 40 ಶಾಸಕರ ಬೆಂಬಲವಿರುವುದಾಗಿ ಘೋಷಿಸಿದ್ದಾರೆ. ಪಕ್ಷಾಂತರ ವಿರೋಧಿ ಕಾನೂನಿನ ನಿಯಮಾವಳಿಗಳಿಂದ ಪಾರಾಗಲು ಅಗತ್ಯವಿರುವ ಸಂಖ್ಯೆಗಿಂತ ನಾಲ್ಕು ಅಧಿಕ ಶಾಸಕರನ್ನು ಅವರು ಹೊಂದಿದಂತಾಗಿದೆ.

ಎನ್‌ಸಿಪಿಯ ಎಲ್ಲಾ ಶಾಸಕರು ನನ್ನ ಜೊತೆಗಿದ್ದಾರೆ. ಒಂದು ಪಕ್ಷವಾಗಿ ನಾವಿಲ್ಲಿಗೆ ಬಂದಿದ್ದೇವೆ. ಈ ಬಗ್ಗೆ ನಮ್ಮ ಹಿರಿಯರಿಗೂ ಮಾಹಿತಿ ನೀಡಿದ್ದೇವೆ. ಬಹುತೇಕಮಂದಿ, ಪ್ರಜಾಪ್ರಭುತ್ವಕ್ಕೆ ಮಹತ್ವವನ್ನು ನೀಡಿದ್ದಾರೆ. ನಮ್ಮ ಪಕ್ಷವು 40 ವರ್ಷಗಳಷ್ಟು ಹಳೆಯದಾಗಿದ್ದು ಯುವನಾಯಕತ್ವವು ಮುಂದೆಬರಬೇಕಾಗಿದೆ? ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.

ಪ್ರಸಕ್ತ ಮಹಾರಾಷ್ಟ್ರ ಸಂಪುಟದಲ್ಲಿ ಮುಖ್ಯಮಂತ್ರಿ, ಇಬ್ಬರು ಉಪಮುಖ್ಯಮಂತ್ರಿ ಸೇರಿದಂತೆ ಬಿಜೆಪಿ ಹಾಗೂ ಶಿವಸೇನಾ (ಶಿಂಧೆ) ಮತ್ತು ಎನ್‌ಸಿಪಿ ಬಣದ ತಲಾ 9 ಮಂದಿ ಸಚಿವರಿದ್ದಾರೆ ಮಹಾರಾಷ್ಟ್ರ ಸಂಪುಟವು ಗರಿಷ್ಠ 42 ಮಂದಿ ಸದಸ್ಯರನ್ನು ಹೊಂದಬಹುದಾಗಿದೆ.

ಬಿಜೆಪಿ -ಮಹಾರಾಷ್ಟ್ರ ಮೈತ್ರಿಕೂಟಕ್ಕೆ ಅಜಿತ್‌ಪವಾರ್ ಅವರ ಸೇರ್ಪಡೆಯನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಸ್ವಾಗತಿಸಿದ್ದಾರೆ. 'ಈಗ ನಾವು ಓರ್ವ ಮುಖ್ಯಮಂತ್ರಿ ಮತ್ತು ಇಬ್ಬರು ಉಪಮುಖ್ಯಮಂತ್ರಿಗಳನ್ನು ಹೊಂದಿದ್ದೇವೆ. ಡಬಲ್ ಇಂಜಿನ್ ಸರಕಾರ ಈಗ ಟ್ರಿಪಲ್ ಇಂಜಿನ್ ಸರಕಾರವಾಗಿದೆ. ಮಹಾರಾಷ್ಟ್ರದ ಅಭಿವೃದ್ಧಿಗಾಗಿ ನಾನು ಅಜಿತ್ ಪವಾರ್ ಮತ್ತು ಅವರ ನಾಯಕರನ್ನು ಸ್ವಾಗತಿಸುತ್ತೇನೆ. ಅಜಿತ್ ಪವಾರ್ ಅವರ ಅನುಭವ ನಮಗೆ ನೆರವಾಗಲಿದೆ ಎಂದು ಶಿಂದೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಶಿಂಧೆ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಮುನ್ನ ಅಜಿತ್ ಪವಾರ್ ಅವರು ತನ್ನ ಪಕ್ಷದ ಕೆಲವು ನಾಯಕರು ಹಾಗೂ ಶಾಸಕರನ್ನು ಮುಂಬೈನಲ್ಲಿರುವ ತನ್ನ ಅಧಿಕೃತ ನಿವಾಸದಲ್ಲಿ ಭೇಟಿಯಾಗಿದ್ದರು. ಆದರೆ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಅವರಿಗೆ ಈ ಬಗ್ಗೆ ಅರಿವಿರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಶರದ್ ಪವಾರ್ ಅವರು ಈ ಸಭೆಯನ್ನು ಯಾಕೆ ಕರೆಯಲಾಗಿತ್ತೆಂಬುದು ನನಗೆ ತಿಳಿದಿಲ್ಲ. ಪ್ರತಿಪಕ್ಷದ ನಾಯಕನಾಗಿರುವುದರಿಂದ ಅವರಿಗೆ ಶಾಸಕರ ಸಭೆ ಕರೆಯಲು ಹಕ್ಕಿದೆ. ಅದನ್ನು ಅವರು ನಿಯಮಿತವಾಗಿ ಮಾಡುತ್ತಿರುತ್ತಾರೆ. ಈ ಸಭೆಯ ಬಗ್ಗೆ ಹೆಚ್ಚಿನ ವಿವರಗಳು ತನಗೆ ತಿಳಿದಿಲ್ಲವೆಂದವರು ಹೇಳಿದ್ದಾರೆ.

ಎನ್‌ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಹಾಗೂ ಪಕ್ಷದ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಲೆ ಅವರು ಕೂಡಾ ಅಜಿತ್ ಪವಾರ್ ನಡೆಸಿದ ಸಭೆಯಲ್ಲಿ ಭಾಗವಹಿಸಿದ್ದರೆನ್ನಲಾಗಿದೆ. ಆದರೆ ಎನ್‌ಸಿಪಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್‌ ಸಭೆಯಲ್ಲಿ ಭಾಗವಹಿಸಿರಲಿಲ್ಲ.

ಅಜಿತ್ ಪವಾರ್ ಹಾಗೂ ಅವರ ಬೆಂಬಲಿಗ ಶಾಸಕರ ಬಂಡಾಯದೊಂದಿಗೆ, ಎನ್‌ಸಿಪಿ ವಿಭಜನೆಯ ಹಾದಿ ಹಿಡಿದಿದೆ. ಒಂದು ತಿಂಗಳ ಹಿಂದೆ ಎನ್‌ಪಿ ಅಧ್ಯಕ್ಷ ಶರದ್‌ವಾ‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆನಂತರ ಸ್ವಪಕ್ಷೀಯರ ಒತ್ತಡದಿಂದಾಗಿ ರಾಜೀನಾಮೆ ನಿರ್ಧಾರವನ್ನು ವಾಪಸ್ ಪಡೆದಿದ್ದರು.

ಶರದ್ ಪವಾರ ತನ್ನ ಪುತ್ರಿ ಸುಪ್ರಿಯಾ ಸುಳೆ ಅವರನ್ನು ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪದೋನ್ನತಿಗೊಳಿಸುವ ಮೂಲಕ ಅಜಿತ್ ಪವಾರ್‌ಗೆ ಆಘಾತವನ್ನು ನೀಡಿದ್ದರು. ರಾಜ್ಯ ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಮುಂದುವರಿಯಲು ತಾನು ಬಯಸುವುದಿಲ್ಲ ಎಂದು ಅಜಿತ್ ಪವಾರ್‌ ಇತ್ತೀಚೆಗೆ ಹೇಳಿದ್ದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...