ಜನವರಿ 11 ರಿಂದ 13ರವರೆಗೆ ರಾಜ್ಯಾದ್ಯಂತ ಬಿಜೆಪಿ ಜನಸೇವಕ ಸಮಾವೇಶ
ಮಂಗಳೂರು : ಬಿಜೆಪಿ ಪಕ್ಷದ ವತಿಯಿಂದ ಜನವರಿ 11 ರಿಂದ 13 ರ ವರೆಗೆ ರಾಜ್ಯಾದ್ಯಂತ ಜನಸೇವಕ ಸಮಾವೇಶ ನಡೆಯಲಿದೆ ಎಂದು ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದ್ದಾರೆ.
ಮಂಗಳೂರಿನ ಪಿವಿಎಸ್ ಬಳಿ ಇರೋ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು,
ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಐತಿಹಾಸಿಕ ಗೆಲುವು ಸಿಕ್ಕಿದೆ. 86,183 ಸದಸ್ಯರ ಪೈಕಿ 45,246 ಬಿಜೆಪಿ ಬೆಂಬಲಿತ ಸದಸ್ಯರು ಗೆಲುವು ಸಾಧಿಸಿದ್ದಾರೆ. ಒಟ್ಟು 5,670 ಗ್ರಾಮ ಪಂಚಾಯಿತಿಗಳಲ್ಲಿ 3,142 ಗ್ರಾಮ ಪಂಚಾಯಿತಿಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರ ಗಳಿಸಿದ್ದಾರೆ ಎಂದರು. ಈ ಮೂಲಕ ಬಿಜೆಪಿ ಎಂದರೆ ಕೇವಲ ನಗರ ಕೇಂದ್ರಿತ ಪಕ್ಷ, ಮೇಲ್ವರ್ಗದವರ ಪಕ್ಷ ಎಂಬ ತಪ್ಪು ಕಲ್ಪನೆಯನ್ನು ದೂರಗೊಳಿಸಿದ ಜನರು "ಬಿಜೆಪಿ ಸರ್ವ ಸ್ವರ್ಶಿ- ಸರ್ವ ವ್ಯಾಪಿ" ಎಂದು ಸಾಬೀತುಪಡಿಸಿದ್ದಾರೆ ಎಂದರು.
ಜನಸೇವಕ ಸಮಾವೇಶಕ್ಕಾಗಿ ರಾಜ್ಯ ಮತ್ತು ಕೇಂದ್ರದ ನಾಯಕರಿರುವ ಒಟ್ಟು 5 ತಂಡಗಳು ಪ್ರವಾಸ ಮಾಡಲಿವೆ. ಪ್ರತಿ ತಂಡವು 6 ಜಿಲ್ಲಾ ಸಮಾವೇಶಗಳಲ್ಲಿ ಒಟ್ಟು 30 ಜಿಲ್ಲೆಗಳಲ್ಲೂ ಪಾಲ್ಗೊಳ್ಳಲಿದೆ.
ಜನವರಿ 11ರಂದು ಬೆಳಗ್ಗೆ ಮೈಸೂರಿನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಉದ್ಘಾಟನೆ ನೆರವೇರಿಸಲಿದ್ದಾರೆ. ಒಂದು ತಂಡದ ನೇತೃತ್ವ ವಹಿಸಿರುವ ಪಕ್ಷದ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್ ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ.
ಇದೇ ದಿನ ಪಂಚಾಯತ್ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರ ತಂಡವು ಮಡಿಕೇರಿಯಲ್ಲಿ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ಅವರ ತಂಡ ಅಂದು ಮಧ್ಯಾಹ್ನ 3 ಗಂಟೆಗೆ ಗದಗದಲ್ಲಿ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರ ತಂಡವು ಬೀದರ್ನಲ್ಲಿ, ಉಪ ಮುಖ್ಯಮಂತ್ರಿಗಳಾದ ಡಾ. ಅಶ್ವತ್ಥನಾರಾಯಣ ಅವರ ತಂಡವು ಹಾವೇರಿಯಲ್ಲಿ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಸ್ಥಳೀಯ ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.