ಚಾಮರಾಜನಗರ: ಜಿಂಕೆಗಳನ್ನು ಬೇಟೆಯಾಡಿ ಜೀಪಿನಲ್ಲಿ ಸಾಗಿಸಲಾಗುತ್ತಿದ್ದ 400 ಕೆಜಿ ಜಿಂಕೆ ಮಾಂಸವನ್ನು ಅರಣ್ಯಾಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಮಲೆಮಹದೇಶ್ವರ ವನ್ಯಜೀವಿಧಾಮದ ಪಾಲಾರ್ ವಲಯದ ಅಂಚಿನಲ್ಲಿರುವ ಈರೋಡ್ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿಗಳು ದಾಳಿ ನಡೆಸುತ್ತಿದ್ದಂತೆ ಬೇಟೆಗಾರರು ಜಿಂಕೆ ಮಾಂಸ, ಜೀಪು, ಬಂದೂಕು ಹಾಗೂ ಆಯುಧಗಳನ್ನು ಬಿಟ್ಟು ಪರಾರಿಯಾಗಿದ್ದಾರೆ.
400 ಕೆ.ಜಿ ಜಿಂಕೆ ಮಾಂಸ, ಜೀಪು, ನಾಡ ಬಂದೂಕು, ಉರುಳು, ಬ್ಯಾಟರಿ, ಮಾಂಸ ಕತ್ತರಿಸಲು ಬಳಸುತ್ತಿದ್ದ ಆಯುಧಗಳನ್ನು ಮಲೆ ಮಹದೇಶ್ವರ ವನ್ಯಜೀವಿಧಾಮದ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪಾಲಾರ್ ವಲಯದ ಅಂಚಿನಲ್ಲಿರುವ ತಮಿಳುನಾಡಿಗೆ ಸೇರಿದ ಈರೋಡ್ ಅರಣ್ಯ ಪ್ರದೇಶದಲ್ಲಿ ಬೇಟೆಗಾರರು ಜಿಂಕೆಗಳನ್ನು ಬೇಟೆಯಾಡಿದ್ದಾರೆ. ಮಾಂಸವನ್ನು ಕತ್ತರಿಸಿ, ಪಾಲಾರ್ ನದಿಯಲ್ಲಿ ಸ್ವಚ್ಛಗೊಳಿಸಿ ಮಾಂಸವನ್ನು ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಕೊಂಡು ಜೀಪಿನಲ್ಲಿ ಸಾಗಣೆ ಮಾಡುತ್ತಿದ್ದಾರೆಂಬ ಮಾಹಿತಿ ಗುರುವಾರ ಬೆಳಗ್ಗೆ ಅರಣ್ಯಾಧಿಕಾರಿಗಳಿಗೆ ಗೊತ್ತಾಗಿದೆ.
ಕೂಡಲೇ ಪಾಲಾರ್ ವಲಯಾರಣ್ಯಾಧಿಕಾರಿ ಅರುಣ್ಕುಮಾರ್ ಮತ್ತು ಸಿಬ್ಬಂದಿ ಬೇಟೆಗಾರರ ಬೆನ್ನತ್ತಿದ್ದಾರೆ. ಇದರ ಸುಳಿವು ತಿಳಿದ ಬೇಟೆಗಾರರು ವಾಹನ ಬಿಟ್ಟು ಪರಾರಿಯಾದರು. ತಮಿಳುನಾಡಿನ ಅರಣ್ಯದಲ್ಲಿ ಜಿಂಕೆಗಳನ್ನು ಬೇಟೆಯಾಡಿದ್ದರಿಂದ ವಶಪಡಿಸಿಕೊಂಡ ಮಾಂಸ, ಜೀಪು ಸೇರಿ ಇತರ ವಸ್ತುಗಳನ್ನು ಈರೋಡ್ ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಯಿತು ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ತಿಳಿಸಿದ್ದಾರೆ