ಮುಂಬೈ: ಮಹಾರಾಷ್ಟ್ರದ ಬುಲ್ದಾನಾದ ಎಕ್ಸ್ಪ್ರೆಸ್ಯಲ್ಲಿ ಶನಿವಾರ ಬನ್ನೊಂದಕ್ಕೆ ಬೆಂಕಿ ಹೊತ್ತಿಕೊಂಡು ಮೂವರು ಮಕ್ಕಳು ಸೇರಿದಂತೆ 25 ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಬುಲ್ದಾನಾದ ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ಮುಂಜಾನೆ ಸುಮಾರು 1:30ರ ವೇಳೆಗೆ ದುರಂತ ಸಂಭವಿಸಿದೆ. ಖಾಸಗಿ ಸ್ಲಿಪರ್ ಕೋಚ್ ಬಸ್ ನಾಗಪುರದಿಂದ ಪುಣೆಗೆ ಪ್ರಯಾಣಿಸುತ್ತಿತ್ತು. ಬಸ್ನಲ್ಲಿ 33 ಪ್ರಯಾಣಿಕರಿದ್ದರು.
ಬಸ್ ಅತ್ಯಂತ ವೇಗವಾಗಿ ಧಾವಿಸುತ್ತಿತ್ತು ಹಾಗೂ ಒಂದು ಹಂತದಲ್ಲಿ ಚಾಲಕನು ಬಸ್ ಮೇಲೆ ನಿಯಂತ್ರಣ ಕಳೆದುಕೊಂಡಾಗ ಅದು ಒಂದು ಕಂಬ ಮತ್ತು ಗೋಡೆಗೆ ಢಿಕ್ಕಿ ಹೊಡೆಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಢಿಕ್ಕಿಯ ವೇಗಕ್ಕೆ ಮುಂಭಾಗದ ಎರಡು ಚಕ್ರಗಳು ಕಿತ್ತು ಹೋದವು ಮತ್ತು ಬಸ್ನ ಡೀಸೆಲ್ ಟ್ಯಾಂಕ್ ಸ್ಫೋಟಿಸಿತು. ಆಗ ತಕ್ಷಣ ಬಸ್ಗೆ ಬೆಂಕಿ ಹೊತ್ತಿಕೊಂಡಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ನುಡಿದರು.
ಬಸ್ ಬಲ ಭಾಗಕ್ಕೆ ಉರುಳಿತು ಹಾಗೂ ಬಾಗಿಲು ಆಕಾಶದತ್ತ ಮುಖ ಮಾಡಿತ್ತು. ಚಾಲಕ ಸೇರಿದಂತೆ ಕೆಲವು ಪ್ರಯಾಣಿಕರು ಮುರಿದ ಕಿಟಕಿಗಳ ಮೂಲಕ ಹೊರಬರುವಲ್ಲಿ ಯಶಸ್ವಿಯಾದರು ಎಂದು ಅವರು ಹೇಳಿದರು.
ಮೃತದೇಹಗಳು ಗುರುತು ಸಿಗದಷ್ಟು ಸುಟ್ಟು ಹೋಗಿವೆ. ಬಸ್ ಚಾಲಕನನ್ನು ಪೊಲೀಸರು ವಶಕ್ತಿ ತೆಗೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮೃತರ ಕುಟುಂಬಗಳಿಗೆ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಕೂಡ, ಮೃತರ ಕುಟುಂಬಗಳಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.