ಸಹರಾನ್ಪುರ (ಉತ್ತರಪ್ರದೇಶ): ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ ಆಝಾದ್ ಅವರ ಮೇಲೆ ಬುಧವಾರ ಉತ್ತರಪ್ರದೇಶದ ಸಹರಾನ್ಪುರದಲ್ಲಿ ಗುಂಡಿನ ದಾಳಿ ನಡೆದಿದೆ. ಅವರು ತರಚು ಗಾಯದೊಂದಿಗೆ ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಆಝಾದ್ ಪ್ರಯಾಣಿಸುತ್ತಿದ್ದ ಕಾರಿನ ಮೇಲೆ ಎರಡು ಗುಂಡುಗಳನ್ನು ಹಾರಿಸಲಾಗಿದೆ. ಮೊದಲ ಗುಂಡು ವಾಹನದ ಆಸನದ ಒಳಗೆ ಪ್ರವೇಶಿಸಿದೆ. ಅದು ಆಝಾದ್ ದೇಹವನ್ನು ಸವರಿಕೊಂಡು ಬಾಗಿಲ ಮೂಲಕ ಹಾದು ಹೋಗಿದೆ. ಎರಡನೇ ಗುಂಡು ಹಿಂದಿನ ಬಾಗಿಲಿಗೆ ಬಡಿದಿದೆ. ಅವರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
“ಚಂದ್ರಶೇಖರ ಆಝಾದ್ ವಾಹನಗಳ ಸಾಲಿನ ಮೇಲೆ ಕಾರಿನಲ್ಲಿ ಬಂದ ಕೆಲವು ಶಸ್ತ್ರಧಾರಿ ವ್ಯಕ್ತಿಗಳು ಗುಂಡು ಹಾರಿಸಿದರು. ಒಂದು ಗುಂಡು ಅವರನ್ನು ಸವರಿಕೊಂಡು ಹೋಯಿತು. ಅವರಿಗೆ ಹೆಚ್ಚಿನ ಗಾಯವಾಗಿಲ್ಲ. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ'' ಎಂದು ಹಿರಿಯ ಪೊಲೀಸ್ ಅಧಿಕಾರಿ ವಿಪಿನ್ ಟಾಡ ಹೇಳಿದರು ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಭೀಮ್ ಆರ್ಮಿಯ ಮುಖ್ಯಸ್ಥರು ಟೊಯೋಟ ಫಾರ್ಚುನರ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಮೇಲೆ ದಾಳಿ ನಡೆದಿದೆ. ಗಾಯಗೊಂಡಿರುವ ಆಝಾದ್ ಮತ್ತು ಹಾನಿಗೊಳಗಾದ ಅವರ ವಾಹನದ ಚಿತ್ರಗಳನ್ನು ಭೀಮ್ ಆರ್ಮಿಯು ಸಾಮಾಜಿಕ ಮಾಧ್ಯಮದಲ್ಲಿ ಹಾಕಿದೆ.
“ಸಹರಾನ್ಪುರದ ದೇವಬಂದ್ನಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಭಾಯಿ ಚಂದ್ರಶೇಖರ ಆಝಾದ್ ಮೇಲೆ ಭೀಕರ ದಾಳಿ ನಡೆದಿದೆ.
ಇದು ಬಹುಜನ ಮಿಶನ್ ಚಳವಳಿಯನ್ನು ನಿಲ್ಲಿಸುವ ಉದ್ದೇಶದ ಹೇಡಿತನದ ಕೃತ್ಯವಾಗಿದೆ! ಪಾತಕಿಗಳನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಹಾಗೂ ಭೀಮ್ ಆರ್ಮಿಯ ರಾಷ್ಟ್ರೀಯ ಅಧ್ಯಕ್ಷ ಭಾಯಿ ಚಂದ್ರಶೇಖರ ಆಝಾದ್ರಿಗೆ ಭದ್ರತೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ' ಎಂದು ಭೀಮ್ ಆರ್ಮಿ ಹೇಳಿಕೆಯೊಂದರಲ್ಲಿ ತಿಳಿಸಿದೆ.