ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಸಮೃದ್ಧಿ ಎಕ್ಸ್ಪ್ರೆಸ್ ವೇಯ 3ನೇ ಹಂತದ ನಿರ್ಮಾಣ ಕಾಮಗಾರಿ ಸಂದರ್ಭ ಗರ್ಡರ್ ಯಂತ್ರ ಕುಸಿದು ಕನಿಷ್ಠ 16 ಕಾರ್ಮಿಕರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.
ಥಾಣೆಯ ಶಹಾಪುರ ತಾಲೂಕಿನ ಸರ್ಲಾಂಬೆ ಗ್ರಾಮದಲ್ಲಿ ಮಂಗಳವಾರ ಮುಂಜಾನೆ ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವಾಗ 700 ಟನ್ ಭಾರದ ಯಂತ್ರ 35 ಮೀಟರ್ ಎತ್ತರದಿಂದ ಗರ್ಡರ್ ಯಂತ್ರ ಬಿತ್ತು.
ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ''ಹಿಂದೂ ಹೃದಯ ಸಾಮ್ರಾಟ್ ಬಾಳಾಸಾಹೇಬ್ ಮಹಾರಾಷ್ಟ್ರ ಸಮೃದ್ಧಿ ಮಹಾಮಾರ್ಗ್' ಎಂದು ಕರೆಯಲಾಗುವ ಸಮೃದ್ಧಿ ಮಾರ್ಗ್ ಮುಂಬೈ ಹಾಗೂ ನಾಗಪುರವನ್ನು ಸಂಪರ್ಕಿಸುವ 701 ಕಿ.ಮೀ. ಉದ್ದದ ಎಕ್ಸ್ಪ್ರೆಸ್ ವೇ. ಈ ಎಕ್ಸ್ಪ್ರೆಸ್ ವೇ ನಾಗಪುರ, ವಾಶಿಂ, ವಾರ್ಧಾ, ಅಹ್ಮದ್ನಗರ್, ಬುಲ್ದಾನಾ, ಔರಂಗಾಬಾದ್, ಅಮರಾವತಿ, ಜಾಲ್ಲ್ಯಾ, ನಾಸಿಕ್ ಹಾಗೂ ಥಾಣೆ ಸಹಿತ 10 ಜಿಲ್ಲೆಗಳ ಮೂಲಕ ಹಾದು ಹೋಗುತ್ತದೆ.
ಸಮೃದ್ಧಿ ಮಹಾಮಾರ್ಗದ ನಿರ್ಮಾಣ ಕಾಮಗಾರಿಯನ್ನು ಮಹಾರಾಷ್ಟ್ರ ರಾಜ್ಯ ರಸ್ತೆ ಅಭಿವೃದ್ಧಿ ಪ್ರಾಧಿಕಾರ ನಿರ್ವಹಿಸುತ್ತಿದೆ.
5 ಲಕ್ಷ ರೂ. ಪರಿಹಾರ ಘೋಷಿಸಿದ ಮಹಾರಾಷ್ಟ್ರ ಸರಕಾರ:
ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ, ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಅಲ್ಲದೆ ಗಾಯಗೊಂಡವರ ಚಿಕಿತ್ಸಾ ವೆಚ್ಚವನ್ನು ಸರಕಾರ ಭರಿಸಲಿದೆ ಎಂದು ಟ್ವಿಟ್ ಮಾಡಿದ್ದಾರೆ.