ಶ್ರೀನಿವಾಸಪುರ: ಮಾವಿನ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ ಕೂಡಲೇ 5 ಸಾವಿರ ರೂ ಬೆಂಬಲ ಬೆಲೆ ನೀಡುವುದರ ಜೊತೆ ಕನಿಷ್ಟ 5 ಮಾವಿನ ಜ್ಯೂಸ್ ಮಾಡುವ ಪ್ಯಾಕ್ಟರಿಗಳನ್ನು ಪ್ರಾರಂಭಿಸಬೇಕೆಂದು ಒತ್ತಾಯಿಸಿ ಮಾವು ಬೆಳೆಗಾರರ ಹಾಗು ಮಾರಾಟಗಾರರ ಸಂಘದ ಜಿಲ್ಲಾ ಕಾರ್ಯದರ್ಶಿ ನೀಲಟೂರು ಚಿನ್ನಪ್ಪರೆಡ್ಡಿ ಹಾಗು ಮಾವು ಬೆಳೆಗಾರರು ಕರೆದಿದ್ದ ಶ್ರೀನಿವಾಸಪುರ ಬಂದ್ ಶಾಂತಿಯುತವಾಗಿ ಯಶಸ್ವಿಯಾಗಿದೆ.
ಶ್ರೀನಿವಾಸಪುರ ಮಾವು ಪ್ರಸಿದ್ದಿಗೆ ಹೆಸರಾದರೂ ರೈತರ ಬದಕು ಶೋಚನೀಯವಾಗಿದೆ ಎಂದು ಮಾವು ಮಾರುಕಟ್ಟೆಯಾದ ಎಪಿಎಂಸಿಯಲ್ಲಿ ಬೆಲೆ ತೀವ್ರ ಕುಸಿತಗೊಂಡು ಟನ್ ಒಂದಕ್ಕೆ 3 ರಿಂದ 4 ಸಾವಿರ ರೂಗೆ ಮಾರಾಟವಾಗುತ್ತಿದ್ದರಿಂದ ರೈತರು ಆತ್ಮಹತ್ಯೆ ದಾರಗಳಿಗೆ ಹಿಡಿಯಬೇಕಾಗಿದೆ ಎಂದು ಜಿಲ್ಲಾಡಳಿತ ಹಾಗು ಸರ್ಕಾರದ ಗಮನ ಸೆಳೆಯಲು ಬಂದ್ಗೆ ಕರೆ ನೀಡಲಾಗಿತ್ತು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆ ತನಕ ಕರೆ ನೀಡಿದ್ದ ಬಂದ್ ಸಂಪೂರ್ಣ ಯಶ್ವಸ್ವಿಯಾಗಿದೆ.
ಮಾವು ಬೆಳೆಗಾರರಿಗೆ ಸಾಥ್ ನೀಡಲು ಬಿದಿಗಿಳಿದಿದ್ದ ರೈತಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು ಸೇರಿದಂತೆ ಬಹುತೇಕ ಪ್ರಗತಿಪರ ಸಂಘಟನೆಗಳು ಸಹ ಸ್ವಇಚ್ಚೆಯಿಂದ ಬೀದಿಗಿಳಿದು ಮಾವು ಬೆಳೆಗಾರರಿಗೆ ಬಂಬಲ ವ್ಯಕ್ತಪಡಿಸಿದ್ದವು. ಒಂದಡೆ ನೂರಾರು ಬೈಕುಗಳೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳು, ಎಪಿಎಂಸಿ, ಪ್ರಾಂಗಣ ಸೇರಿದಂತೆ ತಾಲ್ಲೂಕಿನ ವಿವಿದ ಭಾಗಗಳ ಕಡೆ ನೂರಾರು ಸಂಖ್ಯೆಯಲ್ಲಿ ರ್ಯಾಲಿ ನಡೆಸಿದರು. ಮತ್ತೊಂದಡೆ ರಸ್ತೆಗಳ ಪ್ರಮುಖ ವೃತ್ತಗಳಲ್ಲಿ ಟೈರುಗಳನ್ನು ಸುಟ್ಟು ರೈತರು ಅಕ್ರೋಷ ವ್ಯಕ್ತಪಡಿಸಿದರು. ಪಟ್ಟಣದ ಎಲ್ಲಾ ರಸ್ತೆಗಳಲ್ಲಿ ರೈತರು ಸಂಚರಿಸಿದ ಕಾರಣ ತೆರೆದಿದ್ದ ಕೆಲವು ಅಂಗಡಿಗಳನ್ನು ಮುಚ್ಚಿಸಲಾಯಿತು. ಅದೇ ರೀತಿ ಬಸ್ ನಿಲ್ದಾಣ ವೃತ್ತ ಹಾಗು ಇತರೆ ವೃತ್ತಗಳ ನಾಲ್ಕು ಭಾಗಗಳಲ್ಲಿ ಹಗ್ಗ ಮತ್ತು ತಂತಿಗಳಿಂದ ಕಟ್ಟಿ ವಾಹನಗಳು ಸಂಚಾರ ಮಾಡದಂತೆ ಅಡ್ಡಗಟ್ಟಲಾಗಿತ್ತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಬೆಳಗಿನ ಜಾವ ಒಂದೆರಡು ಖಾಸಗೀ ಬಸ್ಸುಗಳು ಸಂಚಾರ ಮಾಡಿದರೂ ರೈತರು ಬೀದಿಗೆ ಬಂದ ಕಾರಣ ಎಲ್ಲಾ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿತ್ತು. ಹೊರ ರಾಜ್ಯಕ್ಕೆ ಸಂಚರಿಸುವ ಲಾರಿಗಳು ರಸ್ತೆಗಳಲ್ಲಿ ಸಾಲುಗಟ್ಟಿ ಸಂಜೆ ತನಕ ನಿಲ್ಲುವಂತಾಯಿತು.
ಬಂದ್ ಬಿಸಿಯಿಂದ ಕೆಲವರು ಅನಿವಾರ್ಯವಾಗಿ ಪಟ್ಟಣಕ್ಕೆ ಕಾಲಿಟ್ಟವರು ಹಸಿದ ಹೊಟ್ಟೆ ತಣಿಸಲು ಹೋಟಲ್ಗಳ ಕಡೆ ಮುಖ ಮಾಡಿದರೂ ಬಂದ್ ಅವರನ್ನು ಕಾಡಿತ್ತು, ಎಲ್ಲಾ ವಾಣಿಜ್ಯ ವಹಿವಾಟು, ಸ್ಥಗಿತವಾಗುವುದರ ಜೊತೆ ಚಿತ್ರಮಂದಿರ, ಬ್ಯಾಂಕುಗಳು, ಪೆಟ್ರೋಲ್ ಬಂಕುಗಳು, ಶಾಲಾ ಕಾಲೇಜುಗಳು ಬಂದ್ ಮಾಡಿದ್ದವು.
ಬಂದ್ನಿಂದ ಪ್ರಯಾಣ ಮಾಡಲು ಬಂದವರು ವಾಹನಗಳ ಸಂಚಾರ ನಿಲುಗಡೆಯಿಂದ ಮಕ್ಕಳನ್ನು ಕೈಹಿಡಿದು ನಡೆಯುತ್ತಿದ್ದ ದೃಶ್ಯಗಳು ಕಾಣಿಸಿಕೊಂಡವು. ಬಂದ್ಬಿಸಿಯಿಂದ ಪಟ್ಟಣದ ಎಲ್ಲಾ ಕಡೆ ಪೋಲೀಸರ ಸರ್ಪಗಾವಲು ಹಾಕಲಾಗಿತ್ತು. ಹೀಗಾಗಿ ಪ್ರತಿಭಟನೆಕಾರರಷ್ಟೇ ಅಲ್ಲದೇ ಪೋಲೀಸರು ಅಷ್ಟೇ ಸಂಖ್ಯೆಯಲ್ಲಿ ಕಾಣಿಸಿಕೊಂಡು ರಕ್ಷಣೆ ಕಾರ್ಯದಲ್ಲಿ ತೊಡಗಿದ್ದರು. ಮುನ್ಸೂಚನೆಯಾಗಿ ಜಿಲ್ಲಾ ರಕ್ಷಣಾಧಿಕಾರಿ ಡಾ|| ರೋಹಣಿ ಕಟೋಚ್ ಸಪೆಟ್, ಅಪರ ಪೋಲೀಸ್ ಅದೀಕ್ಷಕರಾದ ರಾಜು, ಡಿವೈಎಸ್ಪಿ ಉಮೇಶ್, ಸಿಪಿಐ ಎಂ. ವೆಂಕಟರಾಮಪ್ಪ ರವರ ಮಾರ್ಗದರ್ಶನದಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.
ತಾಲ್ಲೂಕಿನಾದ್ಯಂತÉ ರೈತರು ರಸ್ತೆಗಳಲ್ಲಿ ನಿಂತು ಬಂದ್ ಯಶಸ್ವಿಗೆ ಮರಗಳನ್ನು ಅಡ್ಡಗಟ್ಟಿ, ಹಾಗು ಟೈರುಗಳನ್ನು ಸುಟ್ಟು ವಾಹನಗಳ ಸಂಚಾರ ಮಾಡದಂತೆ ಬಂದ್ ಬಿಸಿ ಮುಟ್ಟಿಸಿದರು. ಒಟ್ಟಾರೆಯಾಗಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ.