ಶ್ರೀನಿವಾಸಪುರ: ಸರ್ವ ಕಾಲಕ್ಕೂ ಒಪ್ಪುವಂತಹ ಅನೇಕ ವಿಚಾರಗಳನ್ನು ತ್ರಿಪದಿಗಳ ಮೂಲಕ ಜಾಗೃತಿ ಮೂಡಿಸಿದ ದಿಗ್ಗಜ ಸರ್ವಜ್ಞ-ಡಾ.ವೀರಭದ್ರಪ್ಪ
ಸರ್ವಜ್ಞ ಸರ್ವ ಕಾಲಕ್ಕೂ ಒಪ್ಪುವಂತಹ ಅನೇಕ ವಿಚಾರಗಳನ್ನು ತ್ರಿಪದಿಗಳ ಮೂಲಕ ಜಾಗೃತಿ ಮೂಡಿಸಿದ ಹಾಗೂ ಕನ್ನಡ ಸಾರಸ್ವತ ಲೋಕದ ಅಪ್ರತಿಮ ದಿಗ್ಗಜ ಸರ್ವಜ್ಞ ಎಂದು ಶಿಕ್ಷಣ ಇಲಖೆಯ ಸಂಪನ್ಮೂಲ ವ್ಯಕ್ತಿ ಡಾ.ವೀರಭದ್ರಪ್ಪ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಸೋಮವಾರ ಬೆಳಿಗ್ಗೆ ತಾಲೂಕು ಆಡಳಿತ ಮತ್ತು ತಾಲೂಕು ಕುಂಬಾರರ ಸಂಘದ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಸರ್ವಜ್ಞ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಇವರು ಸಮಾಜದ ಅನೇಕ ನೂನ್ಯತೆಗಳನ್ನು ಮತ್ತು ಅಂದಿನ ಕಾಲದಲ್ಲಿ ಜಾರಿಯಲ್ಲಿದ್ದ ಅನೇಕ ಮೌಢ್ಯಗಳನ್ನು ನೇರವಾಗಿ ಟೀಕಿಸಿ ಬಹಿರಂಗವಾಗಿ ಅದನ್ನು ಸಾರಿಹೇಳುತ್ತಿದ್ದ ಸಮಾಜ ಸುಧಾರಕ ಸರ್ವಜ್ಞ ಎಂದರು,
ಸರ್ವಜ್ಞರು ಕನ್ನಡ ಸಾಹಿತ್ಯಕ್ಕೆ ಎಂದೂ ಮರೆಯಲಾಗದ ವಚನಗಳ ಕೊಡುಗೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಈಗಲಾದರು ಅವರ ಸಾಹಿತ್ಯಕ್ಕೆ ಬೆಲೆ ನೀಡಿ ಅವರ ಜಯಂತಿಯನ್ನು ಆಚರಿಸಲು ಅವಕಾಶ ಮಾಡಿಕೊಟ್ಟಿದೆ. ಕೇವಲ ಸರ್ಕಾರಿ ಆದೇಶದಂತೆ ಅಧಿಕಾರಿಗಳು ಮಾತ್ರ ಇವರನ್ನು ಸ್ಮರಿಸಿದರೆ ಸಾಲದು ಎಲ್ಲಾ ಶಲಾ ಕಾಲೇಜುಗಳಲ್ಲಿ ಸರ್ವಜ್ಞರ ಜಯಂತಿಯನ್ನು ಆಚರಿಸಲು ಆದೇಶ ನೀಡಬೇಕು. ಅವರ ಜೀವನ ಚರಿತ್ರೆಯನ್ನು ಎಲ್ಲರೂ ತಳಿದುಕೊಂಡು ಅವರ ಆದರ್ಶಗಳನ್ನು ಪಾಲಿಸುವರಂತಹವರಾಗಬೇಕೆಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ವೈ.ರವಿ ರವರು ಮಾತನಾಡಿ ಸರ್ವಜ್ಞರ ಬಾವ ಚಿತ್ರ ನೋಡಿದರೆ ಅವರು ಸಣ್ಣ ಉದುಗೆಯನ್ನು ಧರಿಸಿ ಕೈಲೊಂದು ಬಿಕ್ಷಾ ಪಾತ್ರೆ ಇನ್ನೊಂದು ಕೈಯಲ್ಲಿ ಒಂದು ಊರುಗೋಲು. ಅವರು ಬಾಯಲ್ಲಿ ತನ್ನಿಂದ ತಾನೆ ವಚನಗಳ ಉದ್ಗಾರವಾಗುತ್ತಿತ್ತು. ಅವರಿಗೆ ಯಾವುದೇ ನಿರ್ಧಿಷ್ಟ ನೆಲೆ ಇರಲಿಲ್ಲ. ಯಾರು ಅವರಿಗೆ ಊಟ ನೀಡುತ್ತಾರೋ ಅವರಿಗೆ ವಚನಗಳನ್ನು ಹೇಳಿ ಮುಂದೆ ಸಾಗುತ್ತಿದ್ದರು. ಅವರ ವಚನಗಳು ಸರ್ವಕಾಲಕ್ಕೂ ಪ್ರಸ್ತುತವೆನಿಸಿವೆ. ಅವರ ಜ್ಞಾನ ಭಂಡಾರ ವರ್ಣಾತೀತವಾಗಿದೆ ಎಂದು ಸ್ಮರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರ್ ಸುಜಾತ, ಆರಕ್ಷಕ ಉಪ ನಿರೀಕ್ಷಕ ಪ್ರದೀಪ್ ಸಿಂಗ್, ತಾಲೂಕು ಸಮಾಜ ಕಲ್ಯಾಣಾಧಿಕಾರಿ ರವಿಚಂದ್ರ, ಹಿರಿಯ ಸಹಾಯಕ ತೋಟಗಾರಿಕೆ ನಿರ್ಧೇಶಕ ಶ್ರೀನಿವಾಸನ್, ತಾಲೂಕು ಕರುಬರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಕೃಷ್ಣಪ್ಪ, ವೇಣುಗೋಪಾಲ್, ಮುದಿಮಡುಗು ನಾರಾಯಣಸ್ವಾಮಿ, ಕೊಡಿಚೆರುವು ರಾಮಪ್ಪ ಇತರರು ಹಾಜರಿದ್ದರು.