ಕೋಲಾರ: ಜಿಲ್ಲೆಯಾ ರೈತರು ಪಿ ನಂಬರ್ ಹಾಗೂ ಪೋಡಿ ಸಮಸ್ಯೆಯಿಂದ ರೈತರು ಪ್ರತಿನಿತ್ಯ ಕಚೇರಿಗಳಿಗೆ ಅಲೆದು ಹಾಳಾಗಿ ಹೋಗಿದ್ದಾರೆ. ಈ ಕಾರಣಕ್ಕಾಗಿ ಡಿಸೆಂಬರ್ ಅಂತ್ಯದೊಳಗೆ ಜಿಲ್ಲೆಯನ್ನು ಪೋಡಿಮುಕ್ತ ಜಿಲ್ಲೆಯಾಗಿಸಲು ಪಣ ತೊಟ್ಟಿದ್ದೇವೆ. ಎಲ್ಲವನ್ನೂ ಸರಿಪಡಿಸಿ ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ ನೀಡಲು ತಯಾರಿ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಆರ್ ರಮೇಶ್ ಕುಮಾರ್ರವರು ಜಿಲ್ಲಾ ಪಂಚಾಯಿತಿ ತಿಳಿಸಿದರು.
ದರಖಾಸ್ತು ಜಮೀನುಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ತಿಂಗಳೊ ಒಳಗೆ ಪರಿಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಳಬಾಗಿಲು ತಾಲ್ಲೂಕು ಹೊರತುಪಡಿಸಿ ಉಳಿದ ಎಲ್ಲಾ ಕಡೆಗಳಲ್ಲಿ ಪ್ರಕ್ರಿಯೆ ಉತ್ತಮವಾಗಿದೆ ಎಂದು ವಿವರಿಸಿದರು.
ಜಮೀನು, ಸರ್ವೆಯ ವಿಸ್ತೀರ್ಣ ಸೇರಿದಂತೆ ಎಲ್ಲವನ್ನೂ 1ರಿಂದ 5 ಮತ್ತು 1ರಿಂದ 10 ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗುವುದು.
ಹೆಚ್ಚಿನ ಸಮಸ್ಯೆ ಇಲ್ಲದೆ ಸುಲಭವಾಗಿ ಪರಿಹಾರವಾಗುವ ಪ್ರಕರಣಗಳನ್ನು 1ರಿಂದ 5ರಲ್ಲಿ ಹಾಗೂ ಸಮಸ್ಯೆ ಹೆಚ್ಚಿರುವ ಪ್ರಕರಣಗಳನ್ನು 1ರಿಂದ 10ರ ಭಾಗದಲ್ಲಿ ಅಳವಡಿಸಿಕೊಂಡು ಬಗೆಹರಿಸಲಾಗುವುದು. ಅದಕ್ಕಾಗಿ ಅಧಿಕಾರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಆ ಭಾಗದ ಶಾಸಕರನ್ನು ಈಗಾಗಲೇ ಸಂಪರ್ಕಿಸಲಾಗಿದೆ. ಜಿಲ್ಲೆಯಲ್ಲಿ ಡಿ.30ರಂದು ಮುಖ್ಯಮಂತ್ರಿ ಸಿದ್ದರಾಮಯ್ಯರ ಕಾರ್ಯಕ್ರಮ ಆಯೋಜನೆಯಾಗಿದ್ದು, ಅಷ್ಟರೊಳಗೆ ಕಾಮಗಾರಿ ಪೂರ್ಣಗೊಳಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ವರದಿಗೆ ಸೂಚನೆ: ಸಮಾಜ ಕಲ್ಯಾಣ ಇಲಾಖೆಯಲ್ಲಿ ಪುನಃ ಸಮಸ್ಯೆಗಳು ಹೆಚ್ಚಾಗಿವೆ. ಈ ಬಗ್ಗೆ ಸಾಕಷ್ಟು ದೂರು ಬಂದಿರುವುದರಿಂದ ಸಮಸ್ಯೆ ಪರಿಹಾರಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಅನುದಾನ ಮಂಜೂರು,ಬಿಡುಗಡೆ,ಖರ್ಚು, ಫಲಾನುಭವಿಗಳಿಗೆ ತಲುಪಿದೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಸಮಗ್ರ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಡಿ.23ರಂದು ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ ನಡೆಯಲಿದ್ದು, ಅಷ್ಟರೊಳಗೆ ವರದಿ ನೀಡದಿದ್ದರೆ ಶಿಸ್ತು ಕ್ರಮ ಜರುಗಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ಒತ್ತಡಕ್ಕೆ ವರ್ಗಾವಣೆಯಾಗಿಲ್ಲ: ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಜಿಲ್ಲೆಯಲ್ಲಿ 3 ವರ್ಷಗಳ ಸೇವೆ ಪೂರೈಸಿದ್ದರು. ಹೀಗಾಗಿ ಅವರ ವರ್ಗಾವಣೆಯಾಗಿದೆಯೇ ಹೊರತು ರಾಜಕೀಯ ಒತ್ತಡಕ್ಕಲ್ಲ. ಜಿಲ್ಲಾಡಳಿತ ಭವನ ಉದ್ಘಾಟನೆ ಆಗುವವರೆಗೆ ಇರಲಿ ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿ ಜಿಲ್ಲೆಯಲ್ಲೇ ಮುಂದುವರಿಸಲಾಗಿತ್ತು. ಈ ಬಗ್ಗೆ ಅನೇಕರು ಆರೋಪ ಮಾಡುತ್ತಾರೆ. ಆದರೆ ಅವೆಲ್ಲವೂ ನಿರಾಧಾರ ಎಂದರು.
ವರದಿ : ಶಬ್ಬೀರ್ ಅಹಮದ್ ಶ್ರೀನಿವಾಸಪುರ