ಭಟ್ಕಳ: ಇಲ್ಲಿನ ಶಿರಾಲಿ ಗ್ರಾಮ ಪಂಚಾಯತ್ ಆವರಣ ಹಗಲಿನಲ್ಲಿ ಜನದಟ್ಟಣಿಯಿಂದ ತುಂಬಿದ್ದು, ಸಾವಿರಾರು ಜನರು ಪಂಚಾಯತ ಕೆಲಸ, ಪೇಟೆ, ದೇವಸ್ಥಾನ, ಮಾರುಕಟ್ಟೆಗಳಿಗೆ ಬಂದು ಹೋಗಲಿದ್ದಾರೆ. ಆದರೆ ಸಾಯಂಕಾಲ ಆಗುವುದೇ ತಡ ಪಂಚಾಯತ್ ಕಟ್ಟಡದ ಪಕ್ಕದ ಬಳಿ ಬಂದು ಮೂತ್ರ ವಿರ್ಸಜನೆ ಮಾಡಿ ಹೋಗುತ್ತಿದ್ದು, ಪಂಚಾಯತ್ ಮೂತ್ರಖಾನೆಯಾಗಿ ಬದಲಾಗುತ್ತಿದೆ.
ಕಳೆದ ಸುಮಾರು ತಿಂಗಳಿನಿಂದ ಇಲ್ಲಿನ ಶಿರಾಲಿ ಗ್ರಾ.ಪಂ. ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಛೇರಿ ನಡುವೆ ಸಾರ್ವಜನಿಕರು ಮೂತ್ರ ವಿಸರ್ಜನೆಯನ್ನು ಮಾಡಿ ಹೋಗುತ್ತಿರುವುದು ಕಂಡು ಬಂದಿದ್ದು, ಜನನಿಭಿಡ ಪ್ರದೇಶವಾದ ಶಿರಾಲಿಯಲ್ಲಿ ಇಲ್ಲಿಯ ತನಕ ಒಂದು ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಇಲ್ಲದಿರುವುದು ಇದೆಕ್ಕೆಲ್ಲ ಕಾರಣ ಎನ್ನಲಾಗಿದೆ. ಪಂಚಾಯತಗೆ ಬರುವ ಸಾರ್ವಜನಿಕರು ಬೆಳಿಗ್ಗೆ ತಮ್ಮ ಕೆಲಸ ಮಾಡಿಕೊಳ್ಳಲು ಬರುತ್ತಲಿದ್ದು, ಸಂಜೆ ಸಮಯದಲ್ಲಿ ಇದು ಮೂತ್ರಖಾನೆಯಾಗಿದೆ. ಬೆಳಿಗ್ಗೆ ದೂರದ ಹಳ್ಳಿಗಳಿಂದ ಶಿರಾಲಿ ಪೇಟೆಗೆ ಬರುವ ಸಾರ್ವಜನಿಕರಿಗೆ ಮೂತ್ರಕ್ಕೆ ಹೋಗಲು ಎಲ್ಲಯೂ ಸಹ ಶೌಚಾಲಯವಿಲ್ಲದೇ ರಸ್ತೆಯ ಪಕ್ಕದಲ್ಲಿಯೋ ಅಥವಾ ಮರದ ಬಳಿಯೋ ಹೋಗಿ ಮೂತ್ರವಿರ್ಸಜನೆ ಮಾಡುತ್ತಾರೆ. ಆದರೆ ಅದೇ ರಾತ್ರಿ ವೇಳೆ ಪಂಚಾಯತನಲ್ಲಿ ಯಾರು ಇರದ ಕಾರಣ ಸಾರ್ವಜನಿಕರು ಕಟ್ಟಡದ ಪಕ್ಕದಲ್ಲಿಯೇ ಮೂತ್ರ ಮಾಡಿ ತೆರಳುತ್ತಾರೆ.
ಸಾಕಷ್ಟು ವರ್ಷಗಳ ಹಿಂದೆ ಕೋಟೆಬಾಗಿಲು ರಸ್ತೆಯ ಬಳಿ ಸಾರ್ವಜನಿಕ ಶೌಚಾಲಯವನ್ನು ನಿರ್ಮಿಸಿದ್ದು ಅದರ ನಿರ್ವಹಣೆಯಿಲ್ಲದೇ ಹಾಗೇ ಬಿಟ್ಟಿದ್ದರ ಪರಿಣಾಮ ಶೌಚಾಲಯ ಇಲ್ಲವೇ ಇಲ್ಲವಾಗಿದೆ. ಈ ರೀತಿ ಜನದಟ್ಟಣೆ ಇರುವ ಶಿರಾಲಿ ಪೇಟೆ ಭಾಗದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಅನೂಕೂಲವಾಗಲಿದೆ ಎಂಬುವುದು ಸ್ಥಳಿಯರ ಅಭಿಪ್ರಾಯವಾಗಿದೆ.
ಹಳೆ ಮೀನು ಮಾರುಕಟ್ಟೆ ಬಳಿ ಶೌಚಾಲಯಕ್ಕೆ ಸೂಕ್ತ ಜಾಗ: ಇಲ್ಲಿನ ಸ್ಥಳಿಯ ವ್ಯಾಪಾರಿಗಳ, ಅಂಗಡಿಕಾರರ ಅಭಿಪ್ರಾಯದಂತೆ ಬರುವಂತಹ ಸಾರ್ವಜನಿಕರಿಗೆ ಮೂತ್ರಕ್ಕೆ ತೆರಳಲು ಶೌಚಾಲಯವಿಲ್ಲದ ಕಾರಣ ಕಂಡ ಕಂಡಲ್ಲಿ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಇಲ್ಲಿನ ಸ್ಥಳಿಯ ಪಂಚಾಯತ್ ಹಳೆ ಮೀನು ಮಾರುಕಟ್ಟೆ ಇರುವ ಸ್ಥಳದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಅದರ ಉಪಯೋಗ ಸಾರ್ವಜನಿಕರಿಗಾಗುತ್ತದೆ.
ಪಂಚಾಯತ್, ಗ್ರಾಮ ಲೆಕ್ಕಾಧಿಕಾರಿ ಕಛೇರಿ ಬಳಿ ಮೂತ್ರ ವಾಸನೆ: ಸೂಕ್ತ ಮೂತ್ರ ವಿಸರ್ಜನೆ ಸ್ಥಳವಿಲ್ಲದೇ ಸಾರ್ವಜನಿಕರು ಇಲ್ಲಿನ ಪಂಚಾಯತ ಹಾಗೂ ಗ್ರಾಮ ಲೆಕ್ಕಾಧಿಕಾರಿ ಕಛೇರಿ ನಡುವಿನ ಸ್ಥಳದಲ್ಲಿ ಮಾಡುವ ಮೂತ್ರ ವಿರ್ಸಜನೆಯಿಂದ ಗ್ರಾಮ ಲೆಕ್ಕಾಧಿಕಾರಿ ಕಛೇರಿಯ ಸಿಬ್ಬಂದಿಗಳು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಕೇವಲ ಎರಡೇ ಕಿ.ಮೀ. ದೂರದಲ್ಲಿ ರಾಷ್ಟ್ರ ಧ್ವಜದ ಕಂಬವಿದ್ದು, ಅಲ್ಲಿಯೂ ಸಹ ಅನಾಗರಿಕ ಸಾರ್ವಜನಿಕರು ಮೂತ್ರ ವಿಸರ್ಜನೆ ಮಾಡುವ ಸಾಧ್ಯತೆ ಇದೆ. ಹಾಗೂ ಬೆಳಿಗ್ಗೆ ಈ ಕಡೆ ತಿರುಗಾಡುವ ಜನರಿಗೆ ಹಾಗೂ ಇಲ್ಲಿನ ರಿಕ್ಷಾ ನಿಲ್ದಾಣಕ್ಕೆ ಬರುವ ಸಾರ್ವಜನಿಕರು ಮೂಗು ಮುಚ್ಚಿ ತಿರುಗಾಡುವಂತಾಗಿದೆ.
ಸ್ಥಳಿಯ ಪಂಚಾಯತ್ ನಿರ್ಲಕ್ಷ : ಇಲ್ಲಿನ ಶಿರಾಲಿ ಪಂಚಾಯತ್ ಆವರಣದಲ್ಲಿಯೇ ಈ ರೀತಿ ಅವ್ಯವಸ್ಥೆ ಅನಾಗರಿಕತೆ ನಡೆಯುತ್ತಿದ್ದು, ಮೂತ್ರ ವಿಸರ್ಜನೆಯ ವಾಸನೆಯಿಂದ ಮೂಗು ಮುಚ್ಚಿ ತಿರುಗಾಡುವ ಸ್ಥಿತಿ ಇದ್ದರು ಸಹ ಪಂಚಾಯತ್ ಈ ಬಗ್ಗೆ ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿನ ವ್ಯಾಪಾರಸ್ಥರಿಗೆ, ಅಂಗಡಿಕಾರರಿಗೆ ಇದರಿಂದ ಕಿರಿಕಿರಿಯಾಗುತ್ತಿದ್ದು, ತಕ್ಷಣಕ್ಕೆ ಪಂಚಾಯತ್ ಎಚ್ಚೆತ್ತು ಸ್ವಚ್ಛತೆಯ ಕಡೆ ಗಮನ ಹರಿಸುವಂತೆ ಕ್ರಮ ತೆಗೆದುಕೊಳ್ಳಬೇಕು.