ಶಿಡ್ಲಘಟ್ಟ:ವಿದ್ಯಾರ್ಥಿಗಳು ಶ್ರಧ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಲು ಎನ್.ಕೆ.ಸುಧೀಂದ್ರರಾವ್ ಕರೆ
ಶಿಡ್ಲಘಟ್ಟ,ಏಪ್ರೇಲ್22: ವಿದ್ಯಾರ್ಥಿಗಳು ಶ್ರಧ್ಧೆಯಿಂದ ವ್ಯಾಸಂಗ ಮಾಡುವ ಮೂಲಕ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಾದ ಎನ್.ಕೆ.ಸುಧೀಂದ್ರರಾವ್ ತಿಳಿಸಿದರು.
ತಾಲೂಕಿನ ಹಂಡಿಗನಾಳ ಕ್ರಾಸ್ನಲ್ಲಿರುವ ಕೆ.ವಿ.ಭವನದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜು, ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ತಾಲ್ಲೂಕು ವಕೀಲರ ಸಂಘದ ಸಂಯುಕ್ತಾಶ್ರಯದಲ್ಲಿ ನಡೆದ ರಾಜ್ಯಮಟ್ಟದ ಕಾನೂನು ನೆರವು ಮತ್ತು ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಆಲೋಚನೆಗಳು ಉನ್ನತವಾಗಿರಬೇಕು ಜ್ಞಾನವನ್ನು ಹೆಚ್ಚಿಸಿಕೊಂಡು ಗ್ರಾಮೀಣ ಪ್ರದೇಶದ ಜನರಿಗೆ ನ್ಯಾಯ ದೊರಕಿಸುವ ಕೆಲಸವನ್ನು ವಿದ್ಯಾರ್ಥಿಗಳು ಮಾಡಬೇಕೆಂದ ನ್ಯಾಯಾಧೀಶರು ಕಾನೂನಿನ ಜ್ಞಾನವನ್ನು ಗ್ರಾಮಮಟ್ಟದಲ್ಲಿ ಜನರಿಗೆ ತಲುಪಿಸುವ ಕಾರ್ಯದಿಂದ ಅನಗತ್ಯ ವ್ಯಾಜ್ಯ, ಮೊಕದ್ದಮೆಗಳು ಕಡಿಮೆಯಾಗಿ ಗ್ರಾಮೀಣ ಜನರ ಹಣ ವ್ಯರ್ಥವಾಗುವುದು ಕಡಿಮೆಯಾಗುತ್ತದೆ ಎಂದರು.
ನಮ್ಮ ಸಂಸ್ಕೃತಿಯೇ ನಮ್ಮ ಭಾರತೀಯತೆಯ ಬೆನ್ನೆಲುಬು ಬ್ರಿಟೀಷರು ನಮ್ಮನ್ನಾಳಲು ಅದನ್ನು ತುಂಡರಿಸುವ ಕೆಲಸ ಮಾಡಿದರು. ಭಾರತೀಯರು ಭಾರತೀಯತೆಯ ಅನನ್ಯತೆಯನ್ನು ಕಾಪಾಡಿಕೊಳ್ಳಬೇಕೆಂದರೆ ಸಂಸ್ಕೃತಿಯನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕೆಂದರು.
ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಜಿ.ಉಮಾ ಮಾತನಾಡಿ, ಕಾನೂನು ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಾಲ್ಕು ಗೋಷ್ಠಿಗಳನ್ನು ಆಯೋಜಿಸಲಾಗಿದೆ. ಉಚಿತ ಕಾನೂನು ಸೇವೆಗಳು, ಅಸಂಘಟಿತ ಕಾರ್ಮಿಕ ಕಾನೂನು, ಮಾಹಿತಿ ಹಕ್ಕು ಮತ್ತು ಸಂವಿಧಾನದ ಮೂಲಭೂತ ಕರ್ತವ್ಯಗಳು, ಸಕಾಲ ಮತ್ತು ಪೋಸ್ಕೋ ಕಾನೂನುಗಳು, ಹೆಣ್ಣು ಭ್ರೂಣ ಹತ್ಯೆ ಮತ್ತು ಮಹಿಳೆಯರ ಮೇಲೆ ಶೋಷಣೆ ಕಾನೂನುಗಳು ಕುರಿತಂತೆ ತಜ್ಞರಿಂದ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.
ಮಳ್ಳೂರು ಗ್ರಾಮದಲ್ಲಿ ಕಾನೂನು ಸಮೀಕ್ಷೆಯನ್ನು ನಡೆಸಿದ ಕಾನೂನು ವಿದ್ಯಾರ್ಥಿಗಳು ಮಕ್ಕಳ ಮತ್ತು ಮಹಿಳೆಯರ ಸಾಗಾಣಿಕೆ, ವರದಕ್ಷಿಣೆ ಪಿಡುಗು ಮತ್ತು ಮಹಿಳೆಯರ ಮೇಲೆ ಶೋಷಣೆ ಕುರಿತಂತೆ ನಾಟಕವನ್ನು ನಡೆಸಿಕೊಟ್ಟರು.
ಬೆಂಗಳೂರು ವಿಶ್ವವಿದ್ಯಾಲಯದ ವಿತ್ತಾಧಿಕಾರಿ ಡಾ.ಎ.ಲೋಕೇಶ್, ಹಿರಿಯ ದಿವಾನಿ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಡಿ.ಆರ್.ಮಂಜುನಾಥ, ಎನ್.ಎ.ಶ್ರೀಕಂಠ, ತಾಲೂಕು ವಕೀಲರ ಸಂಘದ ಎಂ.ಪಾಪಿರೆಡ್ಡಿ,,ಬೈರಾರೆಡ್ಡಿ, ಸ್ನಾತಕೋತ್ತರ ಕಾನೂನು ವಿಭಾಗದ ಪ್ರಾಂಶುಪಾಲ ಡಾ.ವಿ.ಸುದೇಶ್, ಸಹಾಯಕ ಪ್ರಾಧ್ಯಾಪಕ ಡಾ.ಎನ್.ದಶರಥ್, ತಹಶೀಲ್ದಾರ್ ಅಜಿತ್ಕುಮಾರ್ ರೈ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ನಿರ್ಮಲ ಮುನಿರಾಜು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ವೆಂಕಟೇಶ್, ಎಸ್.ಎನ್.ಕ್ರಿಯಾ ಟ್ರಸ್ಟ್ ಅಧ್ಯಕ್ಷ ಆಂಜಿನಪ್ಪ, ಕವಿ ಗೊಲ್ಲಹಳ್ಳಿ ಶಿವಪ್ರಸಾದ್, ಮಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಧಾ ಶಿವಕುಮಾರ್, ನ್ಯಾಯವಾದಿ ಎಂ.ಮುನಿರಾಜು, ಕಾನೂನು ವಿದ್ಯಾರ್ಥಿಗಳಾದ ಆಕಾಶ್, ಲಕ್ಷ್ಮೀಕಾಂತ್, ಅಮನ್, ಸುಯೋಗ್ ಮತ್ತಿತರರು ಉಪಸ್ಥಿತರಿದ್ದರು.
ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಕ್ರಾಸ್ನಲ್ಲಿರುವ ಕೆ.ವಿ.ಭವನದಲ್ಲಿ ರಾಜ್ಯಮಟ್ಟದ ಕಾನೂನು ನೆರವು ಮತ್ತು ಕಾನೂನು ಅರಿವು ಕಾರ್ಯಾಗಾರದಲ್ಲಿ ಭಾಗವಹಿಸಿದ ಕಾನೂನು ವಿದ್ಯಾರ್ಥಿಗಳು.