ಶಿಡ್ಲಘಟ್ಟ,ಜನವರಿ18: ತಾಲೂಕಿನಲ್ಲಿ ಸಕಾಲದಲ್ಲಿ ಮಳೆಬೆಳೆಗಳಾಗದೆ ಬರಗಾಲ ಆವರಿಸಿದ್ದು ಮತ್ತೊಂದಡೆ ಕಳಪೆ ಬಿತ್ತನೆಬೀಜದಿಂದ ಕ್ಯಾರೆಟ್ ಬೆಳೆ ಕೈಗಟುಕದೆ ನಾಲ್ವರು ರೈತರು ಸಂಕಷ್ಟಕ್ಕೆ ಸಿಲುಕಿ ಕಂಗಾಲಾಗಿದ್ದಾರೆ.
ಹೌದು ತಾಲೂಕಿನ ವೈ.ಹುಣಸೇನಹಳ್ಳಿ ಗ್ರಾಮ ಪಂಚಾಯಿತಿಯ ಶೀಗೆಹಳ್ಳಿಯ ರೈತರಾದ ಮುರಳಿ, ಕೃಷ್ಣಪ್ಪ,ಆನಂದ್,ರವಿಕುಮಾರ್ ಇನ್ನಿತರೆ ರೈತರ ತೋಟಗಳಲ್ಲಿ ಕ್ಯಾರೆಟ್ ಬೆಳೆದು ನಿಂತಿದ್ದು ಕ್ಯಾರೆಟ್ ಗಡ್ಡೆ ಕವಲು ಹೊಡೆದಿದ್ದು ಕಳಪೆಯಾಗಿವೆ ಇದರಿಂದ ಯಾವ ವ್ಯಾಪಾರಿಯೂ ಕ್ಯಾರೆಟ್ ಖರೀದಿಸಲು ಆಸಕ್ತಿವಹಿಸುತ್ತಿಲ್ಲ ಬರಗಾಲದಲ್ಲಿ ಸುಮಾರು ಏಳೆಂಟು ಎಕರೆ ಪ್ರದೇಶದಲ್ಲಿ ಬೆಳೆದು ನಿಂತ ಕ್ಯಾರೆಟ್ ಮಾರಾಟವಾಗದೆ ಉಳಿದಿದ್ದು ರೈತರು ಕಂಗಾಲಾಗಿದ್ದಾರೆ.
ಕಳಪೆ ಬಿತ್ತನೆಬೀಜ ಸರಬರಾಜು ದೂರು: ಚಿಂತಾಮಣಿ ತಾಲೂಕಿನ ಕೈವಾರ ಕ್ರಾಸ್ನ ಚೌಡೇಶ್ವರಿ ಆಗ್ರೋ ಸೀಡ್ಸ್ನಲ್ಲಿ ಬಿತ್ತನೆ ಬೀಜ ಖರೀದಿಸಿ ಬಿತ್ತನೆ ಬೀಜ, ಕೀಟ ನಾಶಕ, ರಾಸಾಯನಿಕಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿರುವ ರೈತ ನಷ್ಟಕ್ಕೆ ತುತ್ತಾಗಿದ್ದು ತಲೆ ಮೇಲೆ ಕೈಹೊತ್ತು ಕೂರುವಂತಾಗಿದೆ.
ನೂರು ಗ್ರಾಮ್ನಷ್ಟು ಕ್ಯಾರೆಟ್ ಬಿತ್ತನೆ ಬೀಜ 1200 ರೂಪಾಯಿಯಾಗಿದ್ದು ಬಿತ್ತನೆ ಬೀಜಕ್ಕಾಗಿಯೆ ಈ ನಾಲ್ಕು ಮಂದಿ ರೈತರೂ ಒಂದು ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ ಎಲ್ಲವೂ ಸೇರಿ ಎಕರೆಗೆ ಒಂದೂವರೆ ಲಕ್ಷ ಬಂಡವಾಳ ಬಿದ್ದಿದೆ ಎಂದು ರೈತರು ಅವಲತ್ತುಕೊಳ್ಳುತ್ತಾರೆ ಇದರಿಂದ ಬೇಸತ್ತ ಮೂವರು ರೈತರು ಕ್ಯಾರೆಟ್ನ್ನು ಕಿತ್ತು ತಿಪ್ಪೆಗೆ ಬಿಸಾಡಿದ್ದಾರೆ. ಇನ್ನುಳಿದ ಒಬ್ಬ ರೈತ ಇಂದೋ ನಾಳೆಯೋ ಕಿತ್ತು ಬಿಸಾಡಲು ಸಿದ್ದತೆ ನಡೆಸಿದ್ದಾರೆ.
ಕಳಪೆ ಬಿತ್ತನೆಬೀಜ ಪೂರೈಕೆ ಮಾಡಿರುವ ಬಿತ್ತನೆಬೀಜ ಮಾರಾಟಗಾರರಿಗೆ ಪ್ರಶ್ನಿಸಿದರೆ ನಮಗೇನು ಗೊತಿಲ್ಲ ಎಂದು ಜಾರಿಕೊಳ್ಳುತ್ತಾರೆಂದು ರೈತರು ಆರೋಪಿಸಿದರು.
ವಿದ್ಯುತ್ ಅಭಾವ ಅಂತರ್ಜಲಮಟ್ಟ ಕುಸಿದು ರೈತರು ಕಂಗಾಲಾಗಿದ್ದಾರೆ ಹೂಡಿದ್ದ ಬಂಡವಾಳ ಕೈಗಟುಕುವ ಆಸೆಯಿಂದ ಲಕ್ಷಾಂತರ ಸಾಲ ಮಾಡಿ ಕೊಳವೆಬಾವಿ ಕೊರೆದು ದೊರೆತ ಅಲ್ಪಪ್ರಮಾಣದ ನೀರಿನಲ್ಲಿ ಬೆಳೆದಿದ್ದ ಕ್ಯಾರೆಟ್ ಕೀಳಲು ಬಂದಿದ್ದು ಒಂದಷ್ಟು ಕಾಸು ಕೈಗೆ ಸಿಗಬಹುದು ಎಂದು ಖುಷಿಯಿಂದಿದ್ದ ರೈತರಿಗೆ ಕಳಪೆ ಬಿತ್ತನೆ ಬೀಜದಿಂದಾಗಿ ಕ್ಯಾರೆಟ್ ಬೆಳೆ ಕೈ ಕೊಟ್ಟಿರುವುದು ಮಾತ್ರ ಬರಗಾಲದಲ್ಲಿ ಕೆಂಗಟ್ಟಿರುವ ರೈತರ ಗಾಯದ ಮೇಲೆ ಬರೆ ಎಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇತ್ತಗಮನಹರಿಸಿ ಬೆಳೆನಷ್ಟ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.