ಬಜರಂಗದಳದ ಹೆಚ್ಚಿನ ಕಾರ್ಯಕರ್ತರಿಗೆ ಸಂಘದ ಒಳಮರ್ಮ ಅರ್ಥವಾಗಿದೆ
ಸಂಘದ ನಾಯಕರು ದಲಿತರು ದೇವಸ್ಥಾನ ಪ್ರವೇಶಿಸಲು ಅವಕಾಶ ಮಾಡಿಕೊಡುತ್ತಿಲ್ಲ
ಮಂಗಳೂರು: "ಸಂಘ ಅಫೀಮು ಇದ್ದಂತೆ. ಅದು ಎಂದೂ ಕೂಡಾ ರೋಗಕ್ಕೆ ಔಷಧ ಕೊಡುವುದಿಲ್ಲ. ಒಡೆದು ಆಳುವ ಮೂಲಕ ಸಂಘ ಪರಿವಾರವು ಹೆಣದ ರಾಜಕೀಯದಲ್ಲೂ ನಿಸ್ಸೀಮವಾಗಿದೆ. ಇಂತಹ ಸಂಘವು ಮುಸಲ್ಮಾನರು ಮಾನಸಿಕ ಕ್ಷೋಭೆಗೊಳಗಾಗಲು ಕಾಯುತ್ತಿವೆ. ಆರೆಸ್ಸೆಸ್ ನಂತೆ ಮುಸಲ್ಮಾನರಲ್ಲೂ ಮತೀಯ ವಿಷಬೀಜ ಬಿತ್ತುವ ಸಂಘಟನೆಗಳಿದ್ದು, ಅವುಗಳ ವಿರುದ್ಧ ಹೋರಾಟ ಮಾಡುವ ಅಗತ್ಯವಿದೆ" ಎಂದು ಬಜರಂಗದಳದ ಮಾಜಿ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಹೇಳಿದರು.
"ಬಜರಂಗ ದಳದಲ್ಲಿದ್ದ ನಾನು ಹೊರಬಂದು ‘ಮನುಷ್ಯಪ್ರೇಮಿ’ಗಳ ಜೊತೆ ಬೆರೆಯುವಾಗ ಕೆಲವರಿಗೆ ಅಚ್ಚರಿಯಾಗುತ್ತದೆ. ಅನ್ಯಾಯ, ಅಕ್ರಮ ಎದುರಿಸಲು ಬಜರಂಗ ದಳದಲ್ಲಿ ಸಕ್ರಿಯನಾಗಿದ್ದೆನೇ ವಿನಃ ಮುಸ್ಲಿಮರು, ಕ್ರೈಸ್ತರನ್ನು ವಿರೋಧಿಸಲು ಅಲ್ಲ. ಆದರೆ ಸಂಘಪರಿವಾರವು ಬಿಜೆಪಿಯನ್ನು ಬೆಳೆಸಲು ನಮ್ಮನ್ನು ಬಳಸಿಕೊಂಡಿತು. 2008ರಲ್ಲಿ ಆಗಬಾರದ್ದೂ ಆಗಿ ಹೋಯಿತು. ದತ್ತಪೀಠ ವಿವಾದವನ್ನು ಬಗೆಹರಿಸುವ ಅವಕಾಶವಿದ್ದರೂ ಬಿಜೆಪಿ ಮಾಡಲಿಲ್ಲ. ದಲಿತರನ್ನು ಹೆಚ್ಚೆಚ್ಚು ಸಂಖ್ಯೆಯಲ್ಲಿ ಸಂಘಟನೆಗೆ ಸೇರಿಸಲು ಒತ್ತಡ ಹಾಕುವ ಸಂಘದ ನಾಯಕರು ದಲಿತರು ದೇವಸ್ಥಾನ ಪ್ರವೇಶಿಸಲು ಮಾತ್ರ ಅವಕಾಶ ಮಾಡಿಕೊಡುತ್ತಿಲ್ಲ. ಇದನ್ನು ವಿರೋಧಿಸುವುದನ್ನು ಕೂಡ ಅವರು ಸಹಿಸುವುದಿಲ್ಲ" ಎಂದರು.
"ಬಜರಂಗ ದಳದಲ್ಲಿದ್ದಾಗ ನಾನು ಅನಿವಾರ್ಯವಾಗಿ ಮುಸ್ಲಿಮರ, ಕ್ರೈಸ್ತರ ವಿರುದ್ಧದ ಮುಖವಾಡ ಹಾಕಿದೆ. ಆದಾಗ್ಯೂ ಒಳಗಿಂದೊಳಗೆ ಮುಸ್ಲಿಂ ವಿರೋಧಿ ಸಂಘಟನೆ ನಮ್ಮದಲ್ಲ, ಪಾಕಿಸ್ತಾನದ ವಿರುದ್ಧ ಘೋಷಣೆ ಕೂಗುವುದು ನಮ್ಮ ಕೆಲಸವಲ್ಲ ಎಂದು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲು ಮುಂದಾದೆ. ದತ್ತಪೀಠಕ್ಕೆ ಸಂಬಂಧಿಸಿ ಕೇಶವಕೃಪದಲ್ಲಿ ನಡೆದ ಸಭೆಯೊಂದರಲ್ಲಿ ನಾನು ಯಡಿಯೂರಪ್ಪರ ಮಾತಿಗೆ ವಿರೋಧ ವ್ಯಕ್ತಪಡಿಸಿದ್ದೆ. ಅಲ್ಲದೆ ದತ್ತಪೀಠವನ್ನು ಅಯೋಧ್ಯೆ ಮಾಡುವುದಾಗಿ ಅನಂತ ಕುಮಾರ್ ಹೇಳಿದಾಗ ಬಜರಂಗದಳದಲ್ಲಿದ್ದುಕೊಂಡೇ ವಿರೋಧಿಸಿದೆ. ಇವ ನಮ್ಮ ಮಾತಿಗೆ ಬಗ್ಗುತ್ತಿಲ್ಲ ಎಂದು ತೀರ್ಮಾನಿಸುತ್ತಲೇ 2008ರಲ್ಲಿ ನಡೆದ ದಾಳಿಯ ಪ್ರಕರಣವನ್ನು ನೆಪ ಮಾಡಿಕೊಂಡು ನನ್ನನ್ನು ಬಜರಂಗ ದಳದಿಂದ ಹೊರಗೆ ಹಾಕಿದರು" ಎಂದ ಮಹೇಂದ್ರ ಕುಮಾರ್ "ಬಜರಂಗ ದಳದ ಹೆಚ್ಚಿನ ಕಾರ್ಯಕರ್ತರಿಗೆ ಸಂಘದ ಒಳಮರ್ಮ ಅರ್ಥವಾಗಿದೆ. ಆದರೆ ವಿರೋಧಿಸಿ ಹೊರಬರಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ. ಒಂದಲ್ಲೊಂದು ದಿನ ಅವರಿಗೆ ಸತ್ಯ ಮನವರಿಕೆಯಾಗಲಿದೆ" ಎಂದರು.
ಮುಸ್ಲಿಂ ಯುವಕರಿಂದ ಹಿಂದೂ ಯುವತಿಯರ ಅತ್ಯಾಚಾರ, ಕೊಲೆಯಾದರೆ ಅದು ಸಂಘಪರಿವಾರಕ್ಕೆ ಖುಷಿಯ ವಿಚಾರವಾಗಿದೆ. ಅದರ ಲಾಭ ಪಡೆಯಲು ಅವರು ಹವಣಿಸುತ್ತಾರೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಪ್ರಗತಿಪರರು ಒಗ್ಗಟ್ಟಾಗಿ: ಹಿಂದೂ-ಮುಸ್ಲಿಂ-ಕ್ರೈಸ್ತರ ಮಧ್ಯೆ ಬಿಜೆಪಿ-ಸಂಘಪರಿವಾರವು ಕಟ್ಟಿದ ಗೋಡೆಯನ್ನು ಕೆಡವಲು ನಾನೀಗ ಸಿದ್ಧನಾಗಿದ್ದೇನೆ. ಅದಕ್ಕಾಗಿ ಯಾವ ತ್ಯಾಗಕ್ಕೂ ಸಿದ್ಧನಾಗಿದ್ದೇನೆ. ಸಂಘ ಪರಿವಾರವನ್ನು ವಿರೋಧಿಸುವ ಪ್ರಗತಿಪರರ ಮಧ್ಯೆಯೂ ಒಗ್ಗಟ್ಟಿಲ್ಲ. ನಿಮ್ಮೆಲ್ಲಾ ಆಂತರಿಕ ಇಗೋ, ಕಹಿಗಳನ್ನು ಮರೆತು ಒಟ್ಟಾಗಿ. ಸಂಘಪರಿವಾರದ ಲಕ್ಷಾಂತರ ಕಾರ್ಯಕರ್ತರಿಗೆ ನಮ್ಮ ನೂರು ಜನರು ಸಮಾನರು ಎಂಬ ಭಾವನೆಯಿಂದ ಕೆಲಸ ಮಾಡಬೇಕಿದೆ ಎಂದು ಮಹೇಂದ್ರ ಕುಮಾರ್ ನುಡಿದರು.
ಮೋದಿಗೆ ಈಗ ರಾಮನ ನೆನಪು: ನಾಲ್ಕು ವರ್ಷಗಳ ಕಾಲ ಸುಳ್ಳು ಹೇಳಿ ಅಧಿಕಾರ ನಡೆಸಿದ ನರೇಂದ್ರ ಮೋದಿ ಚುನಾವಣೆ ಹತ್ತಿರ ಬಂದಾಗ ಆ ಸುಳ್ಳುಗಳು ಉಪಯೋಗಕ್ಕೆ ಬಾರವು ಎಂದು ಅರ್ಥಮಾಡಿಕೊಂಡಿದ್ದಾರೆ. ಅದಕ್ಕಾಗಿ ಹಳೆಯ ರಾಮಮಂದಿರ ವಿಚಾರವನ್ನು ಮತ್ತೆ ಕೆದಕಿದ್ದಾರೆ. ತಮ್ಮದೇ ಅಧಿಕಾರ ಇದ್ದರೂ ಇದುವರೆಗೆ ಮಂದಿರ ಕಟ್ಟಲು ಮುಂದಾಗದೇ ಈಗ ರಾಜಕೀಯ ಲಾಭ ಪಡೆಯಲು ಪ್ರಯತ್ನ ನಡೆಸಿದ್ದಾರೆ ಎಂದು ಮಹೇಂದ್ರ ಕುಮಾರ್ ಆರೋಪಿಸಿದರು.