ಕೋಲಾರ: ನರಸಿಂಹರಾಜ ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾದ್ಯಂತ ಇರುವ ಸರ್ಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ ವೈದ್ಯರು ಮತ್ತು ಡಿ ಗ್ರೂಪ್ ನೌಕರರನ್ನು ಕೂಡಲೇ ನೇಮಕ ಮಾಡಿ, ಆಂಬ್ಯುಲೆನ್ಸ್ಗಳಲ್ಲಿ ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು ಮತ್ತು ಮುಚ್ಚಿಹೋಗಿರುವ ಜನರಿಕ್ ಔಷಧಿ ಮಳಿಗೆಗಳನ್ನು ಪ್ರಾರಂಭಿಸಬೇಕು ಎಂದು ರೈತಸಂಘದಿಂದ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಮನವಿ ಸಲ್ಲಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಆರೋಗ್ಯವೇ ಭಾಗ್ಯ ಎಂಬ ಗಾಧೆಯಂತೆ ಆರೋಗ್ಯವಾಗಿದ್ದರೆ ಎಲ್ಲಾ ಸಿರಿಸಂಪತ್ತು ಇರುತ್ತದೆ. ಎಂಬುದು ಪುರಾತನ ಕಾಲದ ಪೂರ್ವಜರ ನಂಬಿಕೆ. ಆದರೆ ಆಧುನಿಕತೆ ಹೆಚ್ಚಾದಂತೆ ಜನರ ಜೀವನ ಶೈಲಿಯು ಕೂಡಾ ಬದಲಾಗುತ್ತಿದೆ. ಹಾಲಿ ಕೆಲಸ ಮಾಡುತ್ತಿರುವ ಡಿ.ಗ್ರೂಪ್ ನೌಕರರಿಗೆ 6 ತಿಂಗಳವಾದರೂ ವೇತನÀ ಕೊಟ್ಟಿಲ್ಲ ಹಾಗೂ ಹೆರಿಗೆ ವಾರ್ಡುಗಳಲ್ಲಿ ಕೆಲಸ ಮಾಡುವ ಬಡವರಿಗೆ ವೇತನ ನೀಡದ ಟೆಂಡರ್ದಾರರು ವಂಚಿಸುತ್ತಿದ್ದಾರೆ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತೊಂದೆಡೆ ಇಂದು ಚಿನ್ನದ ಮೊಟ್ಟೆ ಇಡುವ ಆಸ್ಪತ್ರೆಗಳ ಆರ್ಭಟಕ್ಕೆ ಇಂದು ಜನಸಾಮಾನ್ಯರು ತತ್ತರಿಸಿ ಹೋಗುತ್ತಿದ್ದಾರೆ ಎಂದು ಆರೋಪಿಸಿದರು.
ಖಾಸಗಿ ಆಸ್ಪತ್ರೆಗಳ ಹಗಲು ದರೋಡೆಯ ನಡುವೆಯೂ ಅವುಗಳಿಗೆ ಉತ್ತಮವಾದ ಪೈಪೋಟಿ ನೀಡುವಲ್ಲಿ ಸರ್ಕಾರಿ ಆಸ್ಪತ್ರೆಗಳು ಒಂದು ಕಡೆ ವಿಫಲವಾದರೆ ಮತ್ತೊಂದು ಕಡೆ ಇರುವ ಆಸ್ಪತ್ರೆಗಳು ಅಭಿವೃದ್ಧಿ ಹೊಂದಿದ್ದರೂ ಕೆಲವು ಮೂಲಭೂತ ಸೌಕರ್ಯಗಳಿಲ್ಲದೆ ಬಡವರಿಗೆ ಚಿಕಿತ್ಸೆ ಕೊಡುವಲ್ಲಿ ವಿಫಲವಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಬರದ ನಾಡಿನ ಜಿಲ್ಲಾಸ್ಪತ್ರೆ ಇತಿಹಾಸದಲ್ಲೇ ಅಭಿವೃದ್ಧಿ ಮಾಡಿದ ಕೋಲಾರ ಜಿಲ್ಲೆಯ ಸ್ಥಳೀಯ ಶಾಸಕರು ಹಾಗೂ ಮಾಜಿ ಆರೋಗ್ಯ ಸಚಿವರಾದ ರಮೇಶ್ಕುಮಾರ್ ಹಾಗೂ ಅಂದಿನ ಜಿಲ್ಲಾ ಶಸ್ತ್ರಚಿಕಿತ್ಸಕರಾದ ದಿವಂಗತ ಡಾ.ಶಿವಕುಮಾರ್ ಅವರ ಅವಧಿಯಲ್ಲಿ ಆಸ್ಪತ್ರೆ ಉತ್ತಮ ಅಭಿವೃದ್ಧಿ ಹೊಂದಿ ಪ್ರಶಸ್ತಿ ಕೂಡ ಬಂದಿರುವುದು ಸ್ವಾಗತಾರ್ಹ ಎಂದು ಹೇಳಿದರು.
ಆದರೆ ಇಂದು ಜಿಲ್ಲಾಸ್ಪತ್ರೆಯಲ್ಲಿ ಎಲ್ಲಾ ಸೌಲಭ್ಯಗಳಿದ್ದು, ಸುಮಾರು 4-5 ಜಿಲ್ಲೆಗಳಿಂದ ಬಡವರು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದು, ಇಲ್ಲಿನ ವೈದ್ಯರ ಸಮಸ್ಯೆ ಎದ್ದುಕಾಣಿಸುತ್ತಿದೆ. ಸುಮಾರು ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುವ ಸಾಹಸ ಸರ್ಕಾರ ಮತ್ತು ಸಂಬಂಧಪಟ್ಟ ಆರೋಗ್ಯ ಇಲಾಖೆಗಳು ಮಾಡುತ್ತಿಲ್ಲ ಎಂದು ದೂರಿದರು.
ಇದರಿಂದ ತುರ್ತು ಪರಿಸ್ಥಿತಿಯಲ್ಲಿ ವೈದ್ಯರು ಮತ್ತು ಸಿಬ್ಬಂದಿ ಇಲ್ಲದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದೆ ಮೃತಪಟ್ಟ ಸಂಬಂಧಿಕರಿಂದ ಆಸ್ಪತ್ರೆ ವಿರುದ್ಧ ಹೋರಾಟಗಳು ನಡೆದಿರುವುದು ಸತ್ಯಕ್ಕೆ ದೂರವಾದ ವಿಚಾರವಲ್ಲ ಎಂದು ಕಿಡಿಕಾರಿದರು.
ಮಾನ್ಯ ಸಚಿವರು ಕೂಡಲೇ ಸರಕಾರದೊಂದಿಗೆ ಮಾತನಾಡಿ ಜಿಲ್ಲೆಯ ಎಲ್ಲಾ ಆಸ್ಪತ್ರೆಗಳಲ್ಲಿರುವ ವೈದ್ಯರ ಮತ್ತು ಡಿ ಗ್ರೂಪ್ ನೌಕರರ ಹುದ್ದೆಗಳನ್ನು ಕೂಡಲೇ ಭರ್ತಿ ಮಾಡಬೇಕು ಹಾಗೂ ಆಂಬ್ಯುಲೆನ್ಸ್ಗಳಲ್ಲಿ ವೆಂಟಿಲೇಟರ್ ಸೌಲಭ್ಯ ಹಾಗೂ ಜನರಿಕ್ ಔಷಧಿ ಮಳಿಗೆಗಳನ್ನು ಪುನರಾರಂಭ ಮಾಡಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಮಾತನಾಡಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇರುವ ಬಗ್ಗೆ ದೂರುಗಳು ಬಂದಿದ್ದು, ಕೂಡಲೇ ಸರ್ಕಾರ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆಯ ಅಧಿಕಾರಿಗಳೊಡನೆ ಚರ್ಚೆ ಮಾಡಿ ಹುದ್ದೆಗಳನ್ನು ತುಂಬುವ ಭರವಸೆಯ ಜೊತೆಗೆ ಆಂಬ್ಯುಲೆನ್ಸ್ಗಳ ಅವ್ಯವಸ್ಥೆ ಮತ್ತು ಜನರಿಕ್ ಔಷಧಿ ಮಳಿಗೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಸಮಸ್ಯೆಗಳನ್ನು ಬಗೆಹರಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಕೆ.ಶ್ರೀನಿವಸಗೌಡ, ನಲ್ಲಾಂಡಹಳ್ಳಿ ಚಂಕರ್, ಮಂಗಸಂದ್ರ ನಾಗೇಶ್, ಎಂ.ಹೊಸಹಳ್ಳಿ ವೆಂಕಟೇಶ್, ಕೆಂಬೋಡಿ ಕೃಷ್ಣೇಗೌಡ,ವಕ್ಕಲೇರಿ ಹನುಮಯ್ಯ, ಚಂದ್ರಪ್ಪ ಮುಂತಾದವರಿದ್ದರು.