ಭಟ್ಕಳ:ಪ್ರವಾಸಕ್ಕೆ ಬಂದು ಮುರ್ಡೆಶ್ವರದ ಕಡಲ ತೀರದಲ್ಲಿ ಅಬ್ಬರದ ಸುಳಿಗೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ ಬೆಂಗಳೂರು ಮೂಲದ ಪ್ರವಾಸಿಗನನ್ನು ಇಲ್ಲಿನ ಜೀವರಕ್ಷಕ ದಳದ ಸಿಬ್ಬಂದಿ ಭಾನುವಾರ ರಕ್ಷಿಸಿದ್ದಾರೆ.
ಬೆಂಗಳೂರು ಮೂಲದ ಯುವರಾಜ ಕನ್ನಪ್ಪ ರಕ್ಷಣೆಗೊಳಗಾದ ಪ್ರವಾಸಿಗ. ಮುರ್ಡೆಶ್ವರದ ಪ್ರವಾಸಕ್ಕೆಂದು ಭಾನುವಾರ ಬಂದಿದ್ದ ಇವರು, ಈ ವೇಳೆ ಸಮುದ್ರಕ್ಕೆ ಇಳಿದಿದ್ದರು. ಕಡಲಿನ ಅಬ್ಬರ ಬಿರುಸುಗೊಳ್ಳುತ್ತಿದ್ದಂತೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದರು. ಇದನ್ನು ಗಮನಿಸಿದ ಜೀವರಕ್ಷಕ ಸಿಬ್ಬಂದಿ ಜಯರಾಮ ಕುಪ್ಪ ಹರಿಕಾಂತ ಹಾಗೂ ಮಂಜುನಾಥ ಹರಿಕಾಂತ ನೀರಿಗೆ ಧುಮುಕಿ ಅವರನ್ನು ಸುರಕ್ಷಿತವಾಗಿ ದಡಕ್ಕೆ ಎಳೆದು ತಂದಿದ್ದಾರೆ. ತಿಂಗಳೊಳಗೆ ಇದು 2ನೇ ಪ್ರಕರಣ. ಈ ಹಿಂದೆಯೂ ಮೂವರನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ, ಇಲ್ಲಿ ಇಷ್ಟೆಲ್ಲ ಘಟನೆಗಳು ನಡೆದರೂ ಒಂದೂ ಆಂಬುಲೆನ್ಸ್ ವ್ಯವಸ್ಥೆ ಇಲ್ಲ. ಹೀಗಾಗಿ ತುರ್ತು ಚಿಕಿತ್ಸೆ ನೀಡಲು ಜೀವರಕ್ಷಕ ಸಿಬ್ಬಂದಿ ಪರದಾಡುವಂತಾಗಿದೆ.