ಕೋಲಾರ,: ಇತ್ತೀಚಿಗೆ ಮಾವಿನ ಬೆಲೆ ಕುಸಿತ ಕಂಡುಬಂದಿದ್ದು, ರೈತರಿಗೆ ಆಗುವ ನಷ್ಟವನ್ನು ಪರಿಹರಿಸುವ ಹಾಗೂ ರೈತರು ಪ್ರತಿಭಟನೆ ನಡೆಸಿದ್ದರಿಂದ ರಾಜ್ಯ ಸರ್ಕಾರವು ಪ್ರತಿ ಕೆ.ಜಿ ಮಾವಿಗೆ 2.50 ರೂ ಬೆಂಬಲ ಬೆಲೆಯನ್ನು ಘೋಷಿಸಿದೆ ಎಂದು ಪ್ರಭಾರ ಜಿಲ್ಲಾಧಿಕಾರಿಗಳಾದ ಶುಭಾ ಕಲ್ಯಾಣ್ ಅವರು ತಿಳಿಸಿದರು.
ತಮ್ಮ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಒಬ್ಬ ರೈತರಿಗೆ ಗರಿಷ್ಠ 5 ಹೆಕ್ಟೇರ್ವರೆಗಿನ ಮಾವಿನ ಬೆಲೆಗೆ ಬೆಂಬಲ ಬೆಲೆ ನೀಡಲಾಗುವುದು, ಮಾವನ್ನು ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ನೊಂದಾಯಿಸಿ ವ್ಯಾಪಾರಸ್ಥರಲ್ಲಿ ಮಾರಾಟ ಮಾಡಿದ ಪ್ರಮಾಣಕ್ಕೆ ಮಾತ್ರ ಬೆಂಬಲ ಬೆಲೆ ನೀಡಲಾಗುವುದು. ಮಾವಿನ ಮಾರುಕಟ್ಟೆಯ ಬೆಲೆಯ 7.50 ರೂಗಳಿಗಿಂತ ಹೆಚ್ಚಿದ್ದಲ್ಲಿ ಬೆಂಬಲ ಬೆಲೆ ನೀಡಲಾಗುವುದಿಲ್ಲ. ಮಾರುಕಟ್ಟೆ ಬೆಲೆ 5 ರೂ ಇದ್ದಲ್ಲಿ 2.50 ರೂ ಬೆಂಬಲ ಬೆಲೆ ಸೇರಿ 7.50 ರೂ ನೀಡಲಾಗುವುದು. ಮಾರುಕಟ್ಟೆ ಬೆಲೆ 6 ರೂ ಇದ್ದಲ್ಲಿ 1.50 ರೂ ಬೆಂಬಲ ಬೆಲೆ ನೀಡಲಾಗುವುದು. ಬೆಂಬಲ ಬೆಲೆಯು 2.50 ರೂಗಳನ್ನು ಮೀರುವಂತಿಲ್ಲ ಎಂದು ತಿಳಿಸಿದರು.
ರೈತರು ಪಸಲನ್ನು ಕಟಾವು ಮಾಡಿಕೊಂಡು ಕೃಷಿ ಉತ್ಪನ್ನ ಮಾರುಕಟ್ಟೆಗೆ ತಂದಾಗ ಪಹಣಿ, ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನಿಗದಿತ ಅರ್ಜಿಯೊಂದಿಗೆ ಸಲ್ಲಿಸಬೇಕು. ಕೃಷಿ ಉತ್ಪನ್ನ ಮಾರುಕಟ್ಟೆಯ ಕಾರ್ಯದರ್ಶಿಗೆ ಸಲ್ಲಿಸಿದ ಬಿಲ್ಲನ್ನು, ಪರಿಶೀಲಿಸಿ ಬೆಂಬಲ ಬೆಲೆಯನ್ನು ಸಂರಕ್ಷಣಾ ಪರಿಹಾರ ಮಾದರಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಬೆಂಬಲ ಬೆಲೆ ನೀಡುವುದು. ದಿನಾಂಕ
25-07-2018 ರವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಮಾಹಿತಿ ನೀಡಿದರು.
ಬೆಂಬಲ ಬೆಲೆ ಯೋಜನೆಯಲ್ಲಿ ಯಾವುದೇ ಅವ್ಯವಹಾರ ನಡೆಯದಂತೆ ಚುನಾವಣೆಯಲ್ಲಿ ರಚಿಸುವ ಪ್ಲೆಯಿಂಗ್ ಸ್ಕ್ವಾಡ್ಗಳಂತೆ ತಂಡಗಳನ್ನು ರಚಿಸಲಾಗಿದೆ. ಎ.ಪಿ.ಎಂ.ಸಿ ಮಾರುಕಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮರಗಳನ್ನು ಅಳವಡಿಸಲಾಗುವುದು. ಹೊರ ರಾಜ್ಯದ ಮಾವು ಬರದಂತೆ ಚೆಕ್ ಪೋಸ್ಟ್ಗಳನ್ನು ರಚಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತರು ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ತಹಶೀಲ್ದಾರರು ಮತ್ತು ಎ.ಪಿ.ಎಂ.ಸಿ ಕಾರ್ಯದರ್ಶಿಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರೋಹಿಣಿ ಕಟೋಚ್ ಸಫೆಟ್, ಅವರು ಜಿಲ್ಲಾಧಿಕಾರಿಗಳಾದ ಕೆ.ವಿದ್ಯಾಕುಮಾರಿ ಅವರು ಉಪಸ್ಥಿತರಿದ್ದರು.
ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭೀಮಾ (ವಿಮಾ)ಯೋಜನೆ
ಕೋಲಾರ: 2018ರ ಮುಂಗಾರು ಹಂಗಾಮಿಗೆ ಕ್ರಮವಾಗಿ ಗ್ರಾಮ ಪಂಚಾಯತ್ ಮತ್ತು ಹೋಬಳಿವಾರು ಪಟ್ಟಿಯಲ್ಲಿ ನೀಡಲಾಗಿರುವ ಬೆಳೆಗಳಿಗೆ ಇಚ್ಛೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಲು ನಿಗಧಿತ ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಸಂಖ್ಯೆ ಮತ್ತು ಸ್ವಯಂ ಘೋಷಿತ ಬೆಳೆ ವಿವರಗಳನ್ನು ಹತ್ತಿರದ ಆರ್ಥಿಕ ಸಂಸ್ಥೆಗಳಿಗೆ (ಬ್ಯಾಂಕ್), ಸಲ್ಲಿಸುವುದು ಮತ್ತು ಬೆಳೆ ಸಾಲ ಪಡೆದ ರೈತರನ್ನು ಕಡ್ಡಾಯವಾಗಿ ಯೋಜನೆಯಡಿಯಲ್ಲಿ ಸೇರಿಸಲಾಗುವುದು.
ಈ ಯೋಜನೆಯಡಿಯಲ್ಲಿ ಬೆಳೆ ಸಾಲ ಪಡೆಯದ ರೈತರು ಅಂದಾಜು ಬೆಳೆ ಬಿತ್ತನೆ ಆಧಾರದ ಮೇಲೆ ಬಿತ್ತನೆ ಪೂರ್ವದಲ್ಲಿ ಪಾಲ್ಗೊಳ್ಳಬಹುದು. ಬೆಳೆ ವಿಮೆಗೆ ನೊಂದಾಯಿಸಿದ ನಂತರ ಬೇರೆ ಬೆಳೆ ಬಿತ್ತನೆ ಮಾಡಿದಲ್ಲಿ ಯೋಜನೆಯಲ್ಲಿ ಭಾಗವಹಿಸಲು ನಿಗಧಿಪಡಿಸಿದ ಕೊನೆಯ ದಿನಾಂಕಕ್ಕಿಂತ 30 ದಿವಸಗಳು ಮುಂಚಿತವಾಗಿ ನೊಂದಾಯಿಸಿದ ಆರ್ಥಿಕ ಸಂಸ್ಥೆಗಳಲ್ಲಿ ಬಿತ್ತನೆ ದೃಢೀಕರಣಪತ್ರ ನೀಡಿ ವಿಮೆ ಮಾಡಿಸಿದ ಬೆಳೆಯನ್ನು ಬದಲಾಯಿಸತಕ್ಕದ್ದು, ಅಂತಹ ಸಂದರ್ಭದಲ್ಲಿ ಹೆಚ್ಚುವರಿ ವಿಮಾ ಕಂತಿನ ವ್ಯತ್ಯಾಸದ ಮೊತ್ತವನ್ನು ರೈತರು ಭರಿಸತಕ್ಕದ್ದು ಅಥವಾ ಹೆಚ್ಚುವರಿ ವಿಮಾ ಕಂತನ್ನು ರೈತರಿಗೆ ಮರುಪಾವತಿಸುವುದು. 2018-19 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿಮೆ ನೊಂದಣಿಗೆ ಅಂತಿಮ ದಿನಾಂಕ:31-07-2018 ಆಗಿರುತ್ತದೆ.
2018ರ ಮುಂಗಾರು ಹಂಗಾಮಿನಲ್ಲಿ ವಿವಿಧತೋಟಗಾರಿಕೆಬೆಳೆಗಳಿಗೆ ನಿಗಧಿಪಡಿಸಲಾಗಿರುವ ಪ್ರತಿ ಹೆಕ್ಟೇರ್ಗೆ ವಿಮಾ ಕಂತಿನ ವಿವರ ಕೆಳಕಂಡಂತಿರುತ್ತದೆ. ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಉಪ ನಿರ್ದೇಶಕರು (ಜಿ.ಪಂ), ಕೋಲಾರ. ದೂ: 9448999215, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರು (ಜಿ.ಪಂ), ಬಂಗಾರಪೇಟೆ. ದೂ: 9844938434, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ), ಕೋಲಾರ. ದೂ: 9448949104, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರು (ಜಿ.ಪಂ), ಮುಳಬಾಗಿಲು. ದೂ: 9845024906, ಹಿರಿಯ ಸಹಾಯಕತೋಟಗಾರಿಕೆ ನಿರ್ದೇಶಕರು (ಜಿ.ಪಂ), ಮಾಲೂರು.ದೂ: 9663889601, ತೋಟಗಾರಿಕೆ ಸಲಹಾ ಮತ್ತು ಮಾಹಿತಿಕೇಂದ್ರ, ಹಾರ್ಟಿಕ್ಲಿನಿಕ್, ಕೋಲಾರ.ದೂ: 7829512236 ಅನ್ನು ಸಂಪರ್ಕಿಸಬಹುದು.
ಮಿಷನ್ ಇಂದ್ರಧನುಷ್ ಕಾರ್ಯಕ್ರಮ: ಜಿಲ್ಲಾ ಮಟ್ಟದ ಚಾಲನಾ ಸಮಿತಿ ಸಭೆ
ಕೋಲಾರ: ಜಿಲ್ಲಾ ಮಟ್ಟದ ಗ್ರಾಮ ಸ್ವರಾಜ್ಯ ಅಭಿಯಾನದಲ್ಲಿ ಸ್ಪೆಷಲ್ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ ಕಾರ್ಯಕ್ರಮದ ಮೂರನೇ ಸುತ್ತಿನ ಚಾಲನಾ ಸಮಿತಿ ಸಭೆಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ದಿನಾಂಕ: 16-07-2017 ರಂದು ಬೆಳಿಗ್ಗೆ 11 ಗಂಟೆಗೆ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯ(ಹೊಸ ಕಟ್ಟಡ), ಕೋಲಾರ ಇಲ್ಲಿ ಏರ್ಪಡಿಸಲಾಗಿದೆ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಪಂಚಾಯತ್ರಾಜ್ ಇಲಾಖೆ, ವಾರ್ತಾ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಬಡತನ ನಿರ್ಮೂಲನೆ ಮತ್ತು ಕಾರ್ಮಿಕ ಹಾಗೂ ಉದ್ಯೋಗ ಇಲಾಖೆಗಳನ್ನು ಒಳಗೊಂಡಂತೆ ಸಮಿತಿಯನ್ನು ರಚಿಸಿದ್ದು, ಈಗಾಗಲೇ ಕಾರ್ಯಕ್ರಮದ ಮೊದಲನೇ ಮತ್ತು ಎರಡನೇ ಸುತ್ತುಗಳನ್ನು ಪೂರ್ಣಗೊಳಿಸಲಾಗಿದೆ.
ದಿನಾಂಕ: 18-07-2018 ರಿಂದ 21-07-2018 ರವರೆಗೆ ಮೂರು ಸುತ್ತುಗಳಲ್ಲಿ ಜಿಲ್ಲೆಯ 22 ಹಳ್ಳಿಗಳನ್ನು ಆಯ್ಕೆ ಮಾಡಿ 6957 ಮನಗೆಳನ್ನು ಸಮೀಕ್ಷೆ ಮಾಡಿ ಲಸಿಕೆಯಿಂದ ವಂಚಿತಗೊಂಡಿರುವ ಮಕ್ಕಳನ್ನು ಗುರುತಿಸಿ ಇವರುಗಳಿಗೆ ಲಸಿಕೆಯನ್ನು ಹಾಕಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಪಂಚಾಯತ್ನ ವಿವಿಧ ಸ್ಥಾಯಿ ಸಮಿತಿಗಳ ಚುನಾವಣಾ ವೇಳಾಪಟ್ಟಿ
ಕೋಲಾರ: ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿಗಳಿಗೆ ಸದಸ್ಯರನ್ನು ಎರಡನೆ ಅವಧಿಗೆ ಚುನಾವಣೆ ಮೂಲಕ ಆಯ್ಕೆ ಮಾಡುವ ಕುರಿತು ದಿನಾಂಕ: 18-07-2018 ರಂದು ಬೆಳಿಗ್ಗೆ 10.00 ಗಂಟೆಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಚುನಾವಣೆಯನ್ನು ನಿಗದಿಪಡಿಸಲಾಗಿದೆ. ಎಲ್ಲಾ ಚುನಾಯಿತ ಜಿಲ್ಲಾ ಪಂಚಾಯತ್ ಸದಸ್ಯರು ಚುನಾವಣೆಯಲ್ಲಿ ಭಾಗವಹಿಸಲು ಕೋರಲಾಗಿದೆ.
ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1997ರ ಪ್ರಕರಣ 186ರನ್ವಯ ಮತ್ತು ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1997 ಪ್ರಕರಣ 186(2)(3) ರಂತೆ ಹಾಗೂ 159 ರನ್ವಯ ಮತ್ತು 313ರ ಪ್ರಕರಣದಂತೆ ಕೋಲಾರ ಜಿಲ್ಲಾ ಪಂಚಾಯಿತಿಯ ವಿ-ನಿಯಮಗಳನ್ನು ರಚಿಸಿದ್ದು, ಅದರಂತೆ ಕೋಲಾರ ಜಿಲ್ಲಾ ಪಂಚಾಯಿತಿಯ ಚುನಾಯಿತ ಸದಸ್ಯರುಗಳಲ್ಲಿ ಸ್ಥಾಯಿ ಸಮಿತಿಗಳಿಗೆ ಸದಸ್ಯರುಗಳನ್ನು ಚುನಾಯಿಸಬೇಕಾಗಿದ್ದರಿಂದ ಚುನಾವಣೆಯನ್ನು ದಿನಾಂಕ: 18-07-2018 ರಂದು ನಿಗದಿಪಡಿಸಲಾಗಿದೆ. ಚುನಾವಣೆಯ ಪ್ರಕ್ರಿಯೆ ದಿನಾಂಕ: 18-07-2018 ರಂದು ಬೆಳಿಗ್ಗೆ 10.00 ಗಂಟೆಗೆ ಪ್ರಾರಂಭವಾಗುವುದು.
ಕೋಲಾರ ಜಿಲ್ಲಾ ಪಂಚಾಯಿತಿಯಲ್ಲಿ ಹಣಕಾಸು ಮತ್ತು ಲೆಕ್ಕ ಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ, ಸಾಮಾನ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಹಾಗೂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗಳು ಇರುತ್ತವೆ. ಮೂರು ಸ್ಥಾಯಿ ಸಮಿತಿಗಳಿಗೆ ಅಂದರೆ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಗೆ 5 ಜನ ಸದಸ್ಯರನ್ನು ಮೀರದಂತೆ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ 5 ಸದಸ್ಯರನ್ನು ಮೀರದಂತೆ, ಮತ್ತು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿಗೆ 5 ಕ್ಕೆ ಮೀರದಂತೆ ಸದಸ್ಯರುಗಳನ್ನು ಚುನಾಯಿಸಬಹುದು. ನಂತರ ಈ ಮೂರು ಸಮಿತಿಯ ಸದಸ್ಯರು ಪ್ರತ್ಯೇಕವಾಗಿ ತಮ್ಮ ತಮ್ಮ ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಚುನಾವಣಾ ವೇಳಾಪಟ್ಟಿಯಂತೆ ನಿಗದಿಪಡಿಸಿದ ಸಮಯದಲ್ಲಿ ಉಳಿದ ಎರಡು ಸ್ಥಾಯಿ ಸಮಿತಿಗಳಿಗೆ ಅಂದರೆ ಸಾಮಾನ್ಯ ಸ್ಥಾಯಿ ಸಮಿತಿ, ಹಣಕಾಸು, ಲೆಕ್ಕ ಪರಿಶೋಧನೆ ಮತ್ತು ಯೋಜನೆ ಸ್ಥಾಯಿ ಸಮಿತಿಗಳಿಗೆ 4 ಕ್ಕೆ ಮೀರದಂತೆ ಸದಸ್ಯರುಗಳನ್ನು ಚುನಾಯಿಸಬಹುದು.
ಬೆಳಿಗ್ಗೆ 10.00 ರಿಂದ 11.00 ಗಂಟೆಯವರೆಗೆ ನಾಮಪತ್ರಗಳನ್ನು ಸ್ವೀಕರಿಸುವುದು. ಬೆಳಗ್ಗೆ 11.00 ರಿಂದ 11.30 ಗಂಟೆಯವರೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಬೆಳಿಗ್ಗೆ 11.30 ರಿಂದ 12.00 ಗಂಟೆಯವರೆಗೆ ನಾಮ ಪತ್ರಗಳನ್ನು ಹಿಂದಕ್ಕೆ ಪಡೆಯಬಹುದಾಗಿದೆ. ಸ್ಥಾಯಿ ಸಮಿತಿ ಸದಸ್ಯರ ಚುನಾವಣೆಯು ಕೈ ಎತ್ತುವ ಮೂಲಕ ಮಧ್ಯಾಹ್ನ 01.00 ರಿಂದ 03.00 ಗಂಟೆಯವರೆಗೆ ನಡೆಯುತ್ತದೆ. ಸಂಜೆ 4.00 ರಿಂದ 4.30 ರವರೆಗೆ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (ಈ ಸ್ಥಾಯಿ ಸಮಿತಿಯ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು). ಸಂಜೆ 04.30 ರಿಂದ 05.00 ರವರೆಗೆ ಕೃಷಿ ಮತ್ತು ಕೈಗಾರಿಗಾ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (ಈ ಸ್ಥಾಯಿ ಸಮಿತಿಯ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು) ಹಾಗೂ ಸಂಜೆ 5.00 ರಿಂದ 5.30 ರವರೆಗೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ (ಈ ಸ್ಥಾಯಿ ಸಮಿತಿಯ ಸದಸ್ಯರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು) ನಡೆಯುತ್ತದೆ. ಎಂದು ಉಪಕಾರ್ಯದರ್ಶಿ ಹಾಗೂ ಗೊತ್ತುಪಡಿಸಿದ ಅಧಿಕಾರಿ, ಸ್ಥಾಯಿ ಸಮಿತಿಗಳ ಚುನಾವಣೆ, ಜಿಲ್ಲಾ ಪಂಚಾಯತ್, ಕೋಲಾರ ಇವರು ತಿಳಿಸಿದ್ದಾರೆ.