* 23 ಕೇಂದ್ರಗಳಲ್ಲಿ ಎಫ್ಡಿಎ, 41 ಕೇಂದ್ರಗಳಲ್ಲಿ ಎಸ್ಡಿಎ ಪರೀಕ್ಷೆ
* ಅಭ್ಯರ್ಥಿಗಳು ಗುರುತಿನ ಚೀಟಿ ತರುವುದು ಕಡ್ಡಾಯ-ವಿದ್ಯಾಕುಮಾರಿ
ಕೋಲಾರ: ಕರ್ನಾಟಕ ಲೋಕಸೇವಾ ಆಯೋಗವು ಫೆ.04 ರಂದು ನಡೆಸುತ್ತಿರುವ ಪ್ರಥಮ ದರ್ಜೆ ಸಹಾಯಕರ ಮತ್ತು ಫೆ.11 ರಂದು ನಡೆಯಲಿರುವ ದ್ವಿತಿಯ ಸಹಾಯಕರ ಹುದ್ದೆಗಳ ಸ್ವರ್ಧಾತ್ಮಕ ಪರೀಕ್ಷೆಗಳನ್ನು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ನಡೆಸಿ ಎಂದು ಅಪರ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಥಮ ದರ್ಜೆ ಸಹಾಯಕರ ಪರೀಕ್ಷಾ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಈ ಬಾರಿ ಪರೀಕ್ಷಾ ಓಎಂಆರ್ ಪ್ರತಿ ವಿಶೇಷ ರೀತಿಯಲ್ಲಿ ಮುದ್ರಿತಗೊಂಡಿದ್ದು, ಅಭ್ಯರ್ಥಿಯ ನೋಂದಣಿ ಸಂಖ್ಯೆ, ಪ್ರಶ್ನೆಪತ್ರಿಕೆ ಶ್ರೇಣಿ ಮತ್ತಿತರ ವಿವರಗಳು ಮೊದಲೇ ಮುದ್ರಿತಗೊಂಡಿರುವುದರಿಂದ ಪರೀಕ್ಷಾರ್ಥಿಗೆ ಅಲ್ಲಿ ನಮೂದಿಸಿದ ಶ್ರೇಣಿಯ ಪ್ರಶ್ನೆಪತ್ರಿಕೆಯನ್ನೇ ನೀಡಬೇಕಾಗುತ್ತದೆ ಎಂದು ಪರೀಕ್ಷಾ ಉಸ್ತುವಾರಿ ವಹಿಸಿರುವ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪರೀಕ್ಷೆಗೆ ಬರುವಾಗ ಪ್ರವೇಶ ಪತ್ರದೊಂದಿಗೆ ಆಧಾರ್ ಅಥವಾ ಮತದಾನದ ಗುರುತಿನ ಚೀಟಿ ಅಥವಾ ಚಾಲನಾ ಲೈಸೆನ್ಸ್ ತರುವುದು ಕಡ್ಡಾಯವಾಗಿದೆ ಎಂದ ಅವರು, ಗುರುತಿನ ಚೀಟಿ ಇಲ್ಲದಿದ್ದಲ್ಲಿ ಪರೀಕ್ಷೆಗೆ ಕೂರಿಸಲು ಅವಕಾಶವಿಲ್ಲ ಎಂದು ಸ್ವಷ್ಟಪಡಿಸಿದರು.
ಪರೀಕ್ಷಾ ಪಾವಿತ್ರ್ಯತೆಗೆ ಧಕ್ಕೆ ಬಾರದಂತೆ ಎಚ್ಚರವಹಿಸಲು ಸೂಚಿಸಿದ ಅವರು, ಯಾವುದೇ ಲೋಪಗಳಾಗದಂತೆ ಗಮನಹರಿಸಿ, ಅವ್ಯವಹಾರಗಳಿಗೆ ಆಸ್ಪದ ನೀಡದೇ ಸುಗಮ ಪರೀಕ್ಷೆ ನಡೆಸಿ ಎಂದು ಸೂಚಿಸಿದರು.
ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿ: ಪರೀಕ್ಷೆ ನಡೆಯುವ ಕೇಂದ್ರದ ಸುತ್ತಲೂ 200 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 06 ಗಂಟೆಯವರೆಗೆ ನಿಷೇಧಿತ ಪ್ರದೇಶವೆಂದು ಹಾಗೂ ಪರೀಕ್ಷಾ ಕೇಂದ್ರಗಳ ಹತ್ತಿರವಿರುವ ಜೆರಾಕ್ಸ್ ಅಂಗಡಿಗಳನ್ನು ತೆರೆಯದಂತೆ ಆದೇಶ ಹೊರಡಿಸಲಾಗಿದೆ ಎಂದರು.
ಪರೀಕ್ಷೆ ಬರೆಯುವ ಅಭ್ಯರ್ಥಿಗಳು ತಮ್ಮೊಂದಿಗೆ ಮೊಬೈಲ್ ಪೋನ್ಗಳು, ಬ್ಲೂಟೂತ್ ಡಿವೈಸ್, ಹೆಡ್ಸೆಟ್, ಪೇಜರುಗಳು, ವೈರ್ಲೆಸ್ ಸೆಟ್ಗಳು, ಕ್ಯಾಲ್ಕ್ಯುಲೇಟರ್ಗಳು ಇತ್ಯಾದಿ ಎಲೆಕ್ಟ್ರಾನಿಕ್ ಉಪಕರಣಗಳು, ಬ್ಲೇಡ್ಗಳು, ಎರೇಸರುಗಳು, ಸ್ಲೈಡ್ ರೂಲುಗಳು, ಲಾಗ್ಟೇಬಲ್ಗಳು, ಮಾರ್ಕರುಗಳು, ವೈಟ್ನರ್ಗಳನ್ನು ಪರೀಕ್ಷಾ ಕೊಠಡಿಗೆ ತರಬಾರದೆಂದು ಆದೇಶ ಹೊರಡಿಸಲಾಗಿದೆ ಎಂದರು.
ಪರೀಕ್ಷಾ ಕಾರ್ಯಕ್ಕಾಗಿ 4 ಅಥವಾ 5 ಪರೀಕ್ಷಾ ಕೇಂದ್ರಗಳಿಗೆ ಒಬ್ಬರಂತೆ ಮಾರ್ಗಾಧಿಕಾರಿಗಳನ್ನು ಮತ್ತು ವೀಕ್ಷಕರನ್ನು ನೇಮಿಸಲಾಗಿದೆ ಎಂದರು.
ನಗರದ 23 ಕೇಂದ್ರಗಳಲ್ಲಿ ಎಫ್ಡಿಎ ಪರೀಕ್ಷೆ ಹಾಗೂ ಫೆ.11 ರಂದು ನಗರದ 24 ಹಾಗೂ ಕೆಜಿಎಫ್,ಬಂಗಾರಪೇಟೆಯ 17 ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದ್ದು, ಅರ್ಹ ಸಿಬ್ಬಂದಿಯನ್ನು ನೇಮಿಸಿ, ಜಾಗೃತದಳ, ಸ್ಥಾನಿಕ ಜಾಗೃತದಳ ನೇಮಕದ ಮೂಲಕ ಪರೀಕ್ಷೆ ಸುಗಮವಾಗಿ ನಡೆಯಲು ಕ್ರಮ ಕೈಗೊಳ್ಳಿ ಎಂದರು.
ಕೋಲಾರ ನಗರದಲ್ಲಿ 23 ಪರೀಕ್ಷಾ ಕೇಂದ್ರ ವೀಡಿಯೋ ಮಾಡಿ ಅವ್ಯವಹಾರಕ್ಕೆ ಕಡಿವಾಣ : ಪರೀಕ್ಷಾ ಕೇಂದ್ರಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಅವ್ಯವಹಾರಗಳಿಗೆ ಕಡಿವಾಣ ಹಾಕಿ, ಯಾವುದೇ ದೂರುಗಳು ಬಾರದಂತೆ ಅರ್ಹ,ಅನುಭವಿ ಉಪನ್ಯಾಸಕರು,ಶಿಕ್ಷಕರನ್ನು ಪರೀಕ್ಷಾ ಕೆಲಸಕ್ಕೆ ನೇಮಿಸಲು ಸೂಚಿಸಲಾಗಿದೆ ಎಂದರು.
ಬೆಳಗ್ಗಿನ ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ಅಂಚೆ ಮೂಲಕ ಮಧ್ಯಾಹ್ನ ಹಾಗೂ ಮಧ್ಯಾಹ್ನದ 2ನೇ ಪತ್ರಿಕೆಯ ಉತ್ತರ ಪತ್ರಿಕೆಗಳನ್ನೂ ಅದೇ ದಿನ ಸಂಜೆ ಅಂಚೆ ಮೂಲಕ ಕಳುಹಿಸಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ಡಿಡಿಪಿಐ ಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಇಕ್ಬಾಲ್,ಮಾರ್ಗಾಧಿಕಾರಿ ಬಿಇಒಗಳಾದ ರಘುನಾಥರೆಡ್ಡಿ, ಕೆಂಪರಾಮು, ಕೆಂಪಯ್ಯ, ಸುರೇಶ್, ಮಾಧವರೆಡ್ಡಿ, ಷಂಶೂನ್ನೀಸಾ, ವಿವಿಧ ಇಲಾಖೆಳ ಜಿಲ್ಲಾಮಟ್ಟದ ಅಧಿಕಾರಿಗಳಾದ ದೇವಯ್ಯ, ರವಿಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ವೀಕ್ಷಕರಾಗಿ ನೇಮಿಸಿದ್ದು, ಅವರೂ ಸಭೆಯಲ್ಲಿ ಹಾಜರಿದ್ದರು.