ಕೋಲಾರ:- ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ತಾಲ್ಲೂಕಿನ ವೇಮಗಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಾಲಾಭಿವೃದ್ದಿ ಸಮಿತಿ ರಚನೆಯಾಗಿದ್ದು, ಅಧ್ಯಕ್ಷರಾಗಿ ತೋಕಲಘಟ್ಟ ಗ್ರಾಮದ ನಟರಾಜ್ ಅಧ್ಯಕ್ಷರಾಗಿ ಆಯ್ಕೆಯಾದರು.
ಪ್ರೌಢಶಾಲಾ ವಿಭಾಗದಲ್ಲಿ ಹಲವಾರು ವರ್ಷಗಳಿಂದ ಎಸ್ಡಿಎಂಸಿ ರಚನೆಯಾಗದೇ ವಿವಾದಕ್ಕೆ ಕಾರಣವಾಗಿತ್ತು.
ಇತ್ತಿಚೆಗೆ ಶಾಲೆಯಲ್ಲಿ ನಡೆದ ಹಲವು ಘಟನೆಗಳಿಂದ ಶಾಲೆಯ ಶೈಕ್ಷಣಿಕ ಪರಿಸರಕ್ಕೆ ಧಕ್ಕೆಯಾಗಿದ್ದು, ಇದನ್ನು ಸರಿಪಡಿಲು ಎಸ್ಡಿಎಂಸಿ ಅಗತ್ಯವಿದೆ ಎಂದು ಪೋಷಕರು ಪ್ರತಿಪಾದಿಸಿದ್ದರು.
ಈ ಹಿನ್ನಲೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ ಶಾಲೆಗೆ ಆಗಮಿಸಿ, ಹಲವಾರು ವರ್ಷಗಳಿಂದ ವಿವಾದದ ಸುಳಿಗೆ ಸಿಕ್ಕಿದ್ದ ಎಸ್ಡಿಎಂಸಿ ಆಯ್ಕೆ ಪ್ರಕ್ರಿಯೆಯನ್ನು ಸಮರ್ಪಕವಾಗಿ ಮುಗಿಸಲು ಸಹಕರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಕೃಷ್ಣ, ಚನ್ನಪ್ಪನಹಳ್ಳಿ ರಮೇಶ್ ಸೇರಿದಂತೆ ಗ್ರಾಮದ ಹಲವಾರು ಮಂದಿ ಹಿರಿಯರು,ಶಿಕ್ಷಕರು ಹಾಜರಿದ್ದರು.
ಶಾಲಾಭಿವೃದ್ದಿ ಸಮಿತಿ ಸದಸ್ಯರಾಗಿ ಆಯ್ಕೆ
ಅಧ್ಯಕ್ಷರಾಗಿ ನಟರಾಜ್, ಉಪಾಧ್ಯಕ್ಷರಾಗಿ ವೇಮಗಲ್ನ ಸರೋಜಮ್ಮ, ಸದಸ್ಯರಾಗಿ ಅಮರೇಂದ್ರ, ನಾಗರಾಜು, ಸುನಂದಮ್ಮ, ಸುಜಾತಮ್ಮ, ಪಿ.ಎಂ.ನಾರಾಯಣಸ್ವಾಮಿ, ನಾಗರಾಜು, ರಹಮತುಲ್ಲಾ ಆಯ್ಕೆಯಾದರು.
ಎಸ್ಡಿಎಂಸಿ ಆಯ್ಕೆ ಪ್ರಕ್ರಿಯೆ ನೇತೃತ್ವ ವಹಿಸಿದ್ದ ಕ್ಷೇತ್ರ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ಶಾಲಾಭಿವೃದ್ದಿ ಸಮಿತಿ ಮೂಲಕ ಶಾಲೆಗೆ ಸರ್ಕಾರ ನೀಡುವ ಅನುದಾನ,ಸೌಲಭ್ಯಗಳ ಸಮರ್ಪಕ ಬಳಕೆಯ ಜತೆಗೆ ಸಮುದಾಯದ ನೆರವು ಪಡೆದು ಮತ್ತಷ್ಟು ಅಭಿವೃದ್ದಿಗೆ ಸಹಕರಿಸಿ ಎಂದು ಕಿವಿಮಾತು ಹೇಳಿದರು.
ವೇಮಗಲ್ ಸುತ್ತ ಈಗ ಕೈಗಾರಿಕಾ ವಲಯವಾಗಿದ್ದು, ಸಾಮಾಜಿಕ ಹೊಣೆಗಾರಿಕೆಯಡಿ ಉದ್ಯಮಗಳವರು ಶಾಲೆಗಳ ಅಭಿವೃದ್ದಿಗೆ ಸಹಕಾರ ನೀಡುವ ಸಾಧ್ಯತೆ ಇದ್ದು, ಇದನ್ನು ಬಳಸಿಕೊಳ್ಳಲು ಅವರು ಕೋರಿದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ