ಕೋಲಾರ,ಆ.28: ಟಮೋಟೋ ಮತ್ತು ಇತರೆ ತರಕಾರಿ ಬೆಳೆಗಳ ವಿವಿಧ ರೋಗಗಳ ನಿವಾರಣೆಗಾಗಿ ರೈತರು ಕೆಮಿಕಲ್ ವಿಷಮಿಶ್ರಿತ ಔಷಧಿಗಳನ್ನು ಸಿಂಪಡಿಸುವಾಗ ಆಧುನಿಕ ರಕ್ಷಣಾ ಕ್ರಮಗಳನ್ನು ಕಡ್ಡಾಯವಾಗಿ ಅನುಸರಿಸುವ ಮೂಲಕ ಬೆಳೆಗಳ ಆರೋಗ್ಯದ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಸಹಾಯಕ ಕೃಷಿ ನಿರ್ದೇಶಕ ರಂಗಸ್ವಾಮಿ ರೈತರಲ್ಲಿ ಮನವಿ ಮಾಡಿದರು.
ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಬಾಯರ್ ಕ್ರಿಮಿನಾಶಕ ಕಂಪನಿಯರು ಏರ್ಪಡಿಸಿದ್ದ ಟಮೋಟೋ ಬೆಳೆಗಾರರ ವಿಚಾರ ಸಂಕಿರಣ ಮತ್ತು ನೂತನ ಕ್ರಿಮಿನಾಶಕಗಳಾದ ಸಿವಾಂಟೋ ಮತ್ತು ಮೊವೆಂಟೋ ಔಷಧಿಗಳ ಬಿಡುಗಡೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ರೈತರು ಬೆಳೆಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳಬೇಕು. ರೋಗದ ಲಕ್ಷಣಗಳು ಬಂದ ತಕ್ಷಣ ಸೂಕ್ತ ಔಷಧ ಸಿಂಪಡಿಸಿ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಬೇಕೆಂದು ರೈತರಿಗೆ ಕಿವಿ ಮಾತು ಹೇಳಿದರು.
ಬಾಯರ್ ಕಂಪನಿಯ ರಿಜಿನಲ್ ಪೀಲ್ಡ್ ಮ್ಯಾನೇಜರ್ ಶಿವಪ್ರಸಾದ್ ಮಾತನಾಡುತ್ತಾ, ರೈತರು ಉತ್ತಮ ಫಸಲು ತೆಗೆಯಬೇಕಾದರೆ ಗುಣಮಟ್ಟದ ಬೀಜ, ಮಣ್ಣುಪರೀಕ್ಷೆ, ಬೇಸಾಯ ಕ್ರಮ ಈ ಮೂರು ಕ್ರಮಗಳನ್ನು ಚೆನ್ನಾಗಿ ನಿರ್ವಹಿಸಬೇಕಾಗುತ್ತದೆ ಎಂದು ತಿಳಿಸಿದರು.
ಒಂದು ಔಷಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಾದರೆ ಕನಿಷ್ಟ 10 ವರ್ಷಗಳ ಕಾಲಾವಧಿ ಬೇಕಾಗುತ್ತದೆ. ಬೆಳೆಯ ರೋಗವನ್ನು ನಾಶ ಪಡಿಸುವ ಜೊತೆಗೆ ಇತರೆ ತೊಂದರೆಗಳು ಅಡ್ಡ ಪರಿಣಾಮಗಳ ಬಗ್ಗೆ ಎಚ್ಚರ ವಹಿಸಿ ತಯಾರು ಮಾಡಬೇಕಾಗುತ್ತದೆ. ಈಗ ಬಿಡುಗಡೆ ಮಾಡಿರುವ ಔಷಧಿಯು ಟಮೋಟೋ ರೈತರಿಗೆ ಗಂಭೀರ ಸವಾಲು ಆಗಿರುವ ಬೆಂಕಿರೋಗ, ಹೇನು, ಬಿಳಿನೋಣ, ರಸಹೀರುವ ರಬ್ಬರ್ಹುಳು ಈ ರೋಗಗಳ ನಿವಾರಣೆಗೆ ಎರಡೂ ಕಡೆಯಿಂದ ರೋಗ ನಿಯಂತ್ರಣ ಕಾರ್ಯವನ್ನು ಏಕಕಾಲದಲ್ಲಿ ಮಾಡಿ ಒಂದೇ ವಾರದಲ್ಲಿ ಉತ್ತಮ ಫಲಿತಾಂಶವನ್ನು ಕೊಡುವ ಉತ್ತಮ ಕ್ರಿಮಿನಾಶಕಗಳು ಇವಾಗಿದೆ ಎಂದರು ವಿವರಿಸಿದರು.
ಯಾವ ಯಾವ ರಸಗೊಬ್ಬರ ಮತ್ತು ಯಾವ ಯಾವ ಹಂತದಲ್ಲಿ ಎಷ್ಟು ಪ್ರಮಾಣದಲ್ಲಿ ಕೊಡಬೇಕು ಎಂಬ ಬಗ್ಗೆ ರೈತರಿಗೆ ಅರ್ಥವಾಗುವ ಹಾಗೆ ರಸಗೊಬ್ಬರ ತಂತ್ರಜ್ಞ ಚಿಂತಾಮಣಿ ಅನಿಲ್ ತಿಳಿಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮನೋಜ್, ಜಯರಾಮ್, ಬಾಲಾಜಿ, ಕುಬೇಂದ್ರ, ವೆಂಕಟರವಣ ಮತ್ತಿತರು ಇದ್ದರು.
ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ