ಕೋಲಾರ: ಹಾಳಾದ ವಾಹನಗಳ ಮಾಲೀಕರಿದ್ದಲ್ಲಿ ಬಿಡಿಸಿಕೊಳ್ಳಲು ಪೋಲೀಸರ ಮನವಿ
ಕೋಲಾರ, ಸೆಪ್ಟೆಂಬರ್ 16 :ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದೊರೆತಂತಹ 4 ಕಾರುಗಳು ಮತ್ತು ಒಂದು ಮೆಟೋಡೋರ್ ವಾಹನಗಳು ಹಾಳಾದ ಸ್ಥಿತಿಯಲ್ಲಿ ಇವೆ. ಸುಮಾರು 2 ತಿಂಗಳ ಹಿಂದೆ ದೊರೆತ ಈ ವಾಹನಗಳನ್ನು ಪರಿಶೀಲಿಸಲಾಗಿ ನೋಂದಣಿ ಸಂಖ್ಯೆಗಳು ಇಲ್ಲ. ಇಂಜಿನ್ ಮತ್ತು ಚಾಸಿಸ್ ನಂಬರುಗಳು ಕಂಡು ಬಂದಿಲ್ಲ.
ಈ ವಾಹನಗಳು ನಿಂತಿದ್ದ ಸ್ಥಳದ ಸುತ್ತಮುತ್ತಲಿನವರನ್ನು ಕೇಳಲಾಗಿ ಇವು ಸುಮಾರು 2-3 ದಿನಗಳಿಂದ ನಿಂತಿವೆ ಎಂದು ಮಾಹಿತಿ ನೀಡಿದರು. ಈ ಐದೂ ವಾಹನಗಳ ವಾರಸುದಾರರನ್ನು ಕೋಲಾರ ನಗರಠಾಣಾ ವ್ಯಾಪ್ತಿಯಲ್ಲಿ ಹುಡುಕಲಾಗಿ ಇದುವರೆವಿಗೂ ಪತ್ತೆಯಾಗಿರುವುದಿಲ್ಲ.
ಠಾಣಾ ಆವರಣದಲ್ಲಿ ಇರುವ ಈ ವಾಹನಗಳು ಮಳೆಗೆ ನೆಂದು, ಬಿಸಿಲಿಗೆ ಒಣಗಿ ತುಕ್ಕು ಹಿಡಿದು ಸ್ಥಳದಲ್ಲಿಯೇ ನಾಶವಾಗುತ್ತಿರುವ ಕಾರಣ ಕಳೆದು ಹೋಗಿರುವ ಅಥವಾ ಕಳ್ಳತನವಾಗಿರುವ ಸದರಿ ವಾಹನಗಳ ವಾರಸುದಾರರು ಯಾರಾದರೂ ಇದ್ದಲ್ಲಿ ವಾಹನಕ್ಕೆ ಸಂಬಂಧಿಸಿದ ದಾಖಲೆಗಳೊಂದಿಗೆ ಪೊಲೀಸ್ ಠಾಣೆಗೆ ಬಂದು ಬಿಡಿಸಿಕೊಳ್ಳಬಹುದಾಗಿದೆ ಎಂದು ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಎಸ್.ಶಿವರಾಜ್ ಅವರು ತಿಳಿಸಿದ್ದಾರೆ.
ಮೀನುಗಾರಿಕೆಗೆ ಕೆರೆ ಗುತ್ತಿಗೆಗೆ ಟೆಂಡರ್ ಆಹ್ವಾನ
ಕೋಲಾರ, ಸೆಪ್ಟೆಂಬರ್ 16:ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ರಾಘವಯ್ಯನ ಕೆರೆ ಮತ್ತು ತಿಮ್ಮಸಂದ್ರ ಬಾಳನಕೆರೆಯ ಮೀನು ಪಾಶುವಾರು ಹಕ್ಕನ್ನು 2017-18 ನೇ ಸಾಲಿನ ಮೀನುಗಾರಿಕೆ ಪಸಲಿ ವರ್ಷದಿಂದ 2021-22 ನೇ ಮೀನುಗಾರಿಕೆ ಪಸಲಿ ವರ್ಷದವರೆಗೆ ಒಟ್ಟು 5 ವರ್ಷಗಳ ಅವಧಿಗೆ ಟೆಂಡರ್ ಕರೆಯಲಾಗಿದೆ.
ಟೆಂಡರ್ ಮತ್ತು ಹರಾಜಿನಲ್ಲಿ ಭಾಗವಹಿಸುವವರು ನಿಗದಿತ ನಮೂನೆ ಅರ್ಜಿಯನ್ನು ದಿನಾಂಕ: 25-09-2017 ರಂದು ಮಧ್ಯಾಹ್ನ 12 ಗಂಟೆ ಒಳಗಾಗಿ ಸಲ್ಲಿಸಬೇಕು. ಸಲ್ಲಿಸಿದ ಟೆಂಡರ್ಗಳನ್ನು ಅಂದು ಮಧ್ಯಾಹ್ನ 12 ಗಂಟೆಯ ನಂತರ ತೆರೆಯಲಾಗುವುದು. ಮೀನು ಮರಿಗಳನ್ನು ಇಲಾಖೆಯಿಂದಲೇ ಮುಂಗಡ ಹಣ ಪಾವತಿಸಿ ಖರೀದಿಸಬೇಕು.
ಕ್ಯಾಸಂಬಳ್ಳಿ ಗ್ರಾಮದ ರಾಘವಯ್ಯನ ಕೆರೆಯ ಜಲವಿಸ್ತೀರ್ಣ 14.57 ಹೆಕ್ಟೇರ್, ಅಚ್ಚುಕಟ್ಟು 42.09 ಹೆಕ್ಟೇರ್ ಆಗಿದ್ದು ಠೇವಣ ಮೊತ್ತ 328 ರೂ ಹಾಗೂ ಸರ್ಕಾರಿ ಸವಾಲ್ ಮೊತ್ತ 2186 ರೂ ಆಗಿರುತ್ತದೆ. ಟಿ.ಗೊಲ್ಲಹಳ್ಳಿಯ ತಿಮ್ಮಸಂದ್ರಬಾಳನಕೆರೆಯ ಜಲವಿಸ್ತೀರ್ಣ 61.51 ಹೆಕ್ಟೇರ್, ಅಚ್ಚುಕಟ್ಟು 57.87 ಹೆಕ್ಟೇರ್ ಆಗಿದ್ದು ಠೇವಣ ಮೊತ್ತ 1384 ರೂ ಹಾಗೂ ಸರ್ಕಾರಿ ಸವಾಲ್ 9227 ರೂ ಆಗಿರುತ್ತದೆ.
ಈ ಕುರಿತು ಹೆಚ್ಚಿನ ಮಾಹಿತಿಯನ್ನು ಬೇತಮಂಗಲ ಕಚೇರಿ, ಬಂಗಾರಪೇಟೆ ತಾಲ್ಲೂಕು ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ಅವರು ತಿಳಿಸಿದ್ದಾರೆ.